- ಜಾನಪದ ವಿವಿ ನೇಮಕಾತಿ ತಡೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ರಮೇಶ್ ಬಾಬು
- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಹಸ್ತಕ್ಷೇಪ ಬಗ್ಗೆ ಅನುಮಾನ
ಕರ್ನಾಟಕ ಜಾನಪದ ವಿವಿ ಬೋಧಕ ಮತ್ತು ಬೋಧಕೇತರ ಖಾಯಂ ಹುದ್ದೆಗೆ ಅಪಾರ ಅಕ್ರಮ ಹಾಗೂ ವಿಶ್ವವಿದ್ಯಾಲಯದ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಸಂಬಂಧ ನೀಡಿದ ನಿರ್ದೇಶನವನ್ನು ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ.
ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ಶೀತಲ್ ಎಂ ಹಿರೇಮಠ ಅವರು ಹಾವೇರಿ ಜಿಲ್ಲೆಯ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವರಿಗೆ ಪತ್ರ ಬರೆದಿದ್ದು, “ನೇಮಕಾತಿ ಹಿನ್ನೆಲೆಯಲ್ಲಿ ಪ್ರಸ್ತಾಪಿತ ದೂರುಗಳ ಕುರಿತು ವಿಸ್ತೃತ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸರ್ಕಾರಕ್ಕೆ ಮೂರು ದಿನದಲ್ಲಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.
ನೇಮಕಾತಿ ತಡೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ರಮೇಶ್ ಬಾಬು
“ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅರ್ಧರಾತ್ರಿಯಲ್ಲಿ ಸಂದರ್ಶನ ಮಾಡಿ ಅಕ್ರಮ ನೇಮಕಾತಿ ಮಾಡಲಾಗಿದ್ದು, ಸದರಿ ನೇಮಕಾತಿ ರದ್ದುಪಡಿಸಿ ಸೂಕ್ತ ತನಿಖೆ ಮಾಡಬೇಕು” ಎಂದು ಮಾಜಿ ಎಂಎಲ್ಸಿ ರಮೇಶ್ ಬಾಬು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು.
ಮೇ 27ರಂದು ಸಿಎಂಗೆ ಪತ್ರ ಬರೆದಿದ್ದ ರಮೇಶ್ ಬಾಬು, “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಚಿವರಿಗೆ ಖಾತೆ ಹಂಚಿಕೆ ಆಗುವ ಮೊದಲೇ ದುರುದ್ದೇಶಪೂರಿತವಾಗಿ ಜಾನಪದ ವಿಶ್ವವಿದ್ಯಾಲಯದಲ್ಲಿ ರಾತೋರಾತ್ರಿ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಯನ್ನು ನಿಯಮಾವಳಿ ಮೀರಿ ಅಕ್ರಮವಾಗಿ ನೇಮಕ ಮಾಡಲಾಗಿರುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಿದ್ದ ಸಂದರ್ಭದಲ್ಲಿ ಸಹಾಯಕ ಪ್ರಾದ್ಯಾಪಕರು, ಭೋಧಕ ಸಿಬ್ಬಂದಿ, ಭೋಧಕೇತರ ಸಿಬ್ಬಂದಿಗೆ ಆತುರ ಆತುರವಾಗಿ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗಿರುತ್ತದೆ” ಎಂದು ದೂರಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ
ಮುಂದುವರಿದು, “ರಾಜ್ಯದಲ್ಲಿ ಜವಾಬ್ದಾರಿಯುತ /ಚುನಾಯಿತ ಸರ್ಕಾರ ಇಲ್ಲದ ಸಂದರ್ಭದಲ್ಲಿ ಸ್ವಜನ ಪಕ್ಷಪಾತದ ಕಾರಣಕ್ಕಾಗಿ ಮತ್ತು ನೇಮಕಾತಿಗಳಲ್ಲಿ ಹಣದ ವ್ಯವಹಾರವನ್ನು ನಡೆಸುವ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ನೇಮಕಾತಿಗೆ ಚಾಲನೆ ನೀಡಲಾಗಿದೆ. ಅರ್ಧ ರಾತ್ರಿಯಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಕಾನೂನುಬಾಹಿರವಾಗಿ ಗೊತ್ತುವಳಿಗಳನ್ನು ಮಾಡುವುದರ ಮೂಲಕ ಅನೇಕ ಅನುಮಾನಗಳಿಗೆ ಅವಕಾಶ ನೀಡಿರುತ್ತಾರೆ” ಎಂದು ಆರೋಪಿಸಿದ್ದರು.
“ಕಲ್ಯಾಣ ಕರ್ನಾಟಕದ 371ಜೆ ಅಡಿಯಲ್ಲೂ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ನೇಮಕಾತಿಯ ಪ್ರಕ್ರಿಯೆಗಳನ್ನು ನಡೆಸಲಾಗಿರುತ್ತದೆ. ರಾಜ್ಯದ ಜಾನಪದ ಕಲೆಯ ಪ್ರತಿಬಿಂಬವಾದ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂತಹ ಅಕ್ರಮಗಳಿಗೆ ಅವಕಾಶವನ್ನು ನೀಡುವುದರ ಮೂಲಕ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತು ಇತರೆ ಅಧಿಕಾರಿಗಳು ತಮ್ಮ ಶಾಮೀಲನ್ನು ಬಹಿರಂಗಪಡಿಸಿರುತ್ತಾರೆ. ಸದರಿ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ವಿಶ್ವವಿದ್ಯಾಲಯದ ನಡೆ ರಾಜಕೀಯ ಹಸ್ತಕ್ಷೇಪದ ಕರಿ ನೆರಳಿನಿಂದಲೂ ಕೂಡಿರುತ್ತದೆ. ಆದುದರಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಕೂಡಲೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಬೇಕು” ಎಂದು ಕೋರಿದ್ದರು.