ಗದಗ ವಿದ್ಯಾರ್ಥಿಗಳಿಗೆ ತಾವು ಕಲಿಯುವ ಶಾಲೆಯ ಅಭಿವೃದ್ಧಿ ಕುರಿತಿರುವ ಅಭಿಪ್ರಾಯ, ಆಕಾಂಕ್ಷೆಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಮುಕ್ತ ವೇದಿಕೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ ಸಂಭಾಗಣದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಮಕ್ಕಳ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಶಾಲೆಯ ಅಭಿವೃದ್ಧಿ ಬಗ್ಗೆ ಇರುವ ನಿರೀಕ್ಷೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಮಕ್ಕಳಿಗೆ ತಮ್ಮ ಶಾಲೆಯ ಅಭಿವೃದ್ಧಿ ಬಗ್ಗೆ ಪ್ರಶ್ನಿಸಲು ಸಂಪೂರ್ಣ ಅಧಿಕಾರ ಹಾಗೂ ಹಕ್ಕಿದ್ದು ಶಾಲಾ ಶಿಕ್ಷಕರಿಗೆ ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳನ್ನು ಒತ್ತಾಯಿಸುವದನ್ನು ಬಿಡಬಾರದು. ಈ ಶಾಲಾ ಅವಧಿ ಅತ್ಯಂತ ಅಮೂಲ್ಯ ವಾದದ್ದು ಶಾಲೆಗೆ ಬೇರೆ ಬೇರೆ ಆರ್ಥಿಕ, ಸಾಮಾಜಿಕ ಹಿನ್ನಲೆಯಿಂದ ವಿದ್ಯಾರ್ಥಿಗಳು ಬರುತ್ತಾರೆ, ಈ ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಪರಿಹಾರ ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕವಾಗಿ, ಆರ್ಥಿಕ ವಾಗಿ ಸರ್ವ ಸಮಾನತೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿರುವ ಪ್ರಜಾಪ್ರಭುತ್ವ ಕುರಿತು ವಿದ್ಯಾರ್ಥಿಗಳಿಗೆ ಆಸಕ್ತಿ ಆತ್ಮವಿಶ್ವಾಸ ಬರಲಿ ಎನ್ನುವ ಉದ್ದೇಶದಿಂದ ಈ ಸಭೆಯಲ್ಲಿ ವಿದ್ಯಾರ್ಥಿಗಳನ್ನೇ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಮಕ್ಕಳಿಗಾಗಿಯೇ ಇರುವ ಹಕ್ಕುಗಳನ್ನು ಎಲ್ಲರು ತಿಳಿದುಕೊಳ್ಳಬೇಕು, ತಮ್ಮ ಸುತ್ತ ಮುತ್ತ ಬಾಲ್ಯ ವಿವಾಹ, ಭಿಕ್ಷಾಟನೆ, ಮಕ್ಕಳ ಕಳ್ಳ ಸಾಗಾಟ ಇಂತಹ ಘಟನೆಗಳು ಕಂಡು ಬಂದರೆ ಅದರ ವಿರುದ್ಧ ಧ್ವನಿ ಎತ್ತಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್ ಎಸ್ ಬುರುಡಿ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳನ್ನು ಅರಿಯಬೇಕು, ಇಲಾಖೆಯ ಸಂಪೂರ್ಣ ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸ ಕಡೆಗೆ ಗಮನ ಹರಿಸಬೇಕು, ಹಿರಿಯರಿಗೆ ಗೌರವ ಕೊಡಬೇಕು, ಉತ್ತಮ ಸ್ನೇಹಿತರ ಬಳಗವನ್ನು ಹೊಂದಿ, ಒಳ್ಳೆಯ ವಿಚಾರಗಳನ್ನು ಚರ್ಚೆಮಾಡಿ ಶಿಸ್ತಿನಿಂದ ಓದುವ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ಮಾತನಾಡಿ ಈ ಸಭೆಯೂ ವಿಶೇಷವಾಗಿದ್ದು, ಬಾಲ್ಯ ವಿವಾಹ, ಪ್ಸೊಕೊ ಖಾಯ್ದೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಶಾಲಾ ಹಂತದಲ್ಲಿ ಅರಿವು ಮೂಡಿಸುವ ಕಾರ್ಯಗಾರ ಏರ್ಪಡಿಸಲಾಗುತ್ತದೆ ಹಾಗೂ ಯಾವುದೇ ತೊಂದರೆ ಇದ್ದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಲು ತಿಳಿಸಿದರು.
ಮಕ್ಕಳ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಕು.ಮೇಘಾ ಪುರದ ಅಧ್ಯಕ್ಷೀಯ ,ಕು.ನೇತ್ರಾ ಕುಂಬಾರ ಉಪಾಧ್ಯಕ್ಷೆ ಸ್ಥಾನವನ್ನು ಅಲಂಕರಿಸಿ, ವಿವಿಧ ತಾಲೂಕಿನಿಂದ ಬಂದ ವಿದ್ಯಾರ್ಥಿಗಳು ಉತ್ಸುಕತೆಯಿಂದ ಅಪಾರ ಸಮಸ್ಯೆ, ಪರಿಹಾರ ಕ್ರಮ ವಿಷಯಗಳ ಕುರಿತು ವಿಷಯ ಮಂಡಿಸಿದರು. ಮಕ್ಕಳ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಅನುಸರಿಸಬಹುದಾದ ಕ್ರಮಗಳೆಡೆಗೆ ಆರೋಗ್ಯಕರ ಸಂವಾದ ಮತ್ತು ಚರ್ಚೆ ಜರುಗಿತು.
ಇದನ್ನು ಓದಿದ್ದೀರಾ? ಗದಗ | ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್: ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸದಾವಕಾಶ
ಸಂವಾದ ಮತ್ತು ಚರ್ಚೆಯಲ್ಲಿ ಕೀರ್ತಿ ಕುಲಗೋಡ ಪ್ರಥಮ , ನೇತ್ರಾ ಕುಂಬಾರ ದ್ವಿತೀಯ, ಪೂಜಾ ಗಂಗಾವತಿ ತೃತೀಯ, ಮೇಘಾ ಪುರಸ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರು, ವಿಜೇತರಿಗೆ ಜಿ.ಪಂ ಸಿಇಓ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಸಭೆಯಲ್ಲಿ ಡಯಟ್ ಪ್ರಾಚಾರ್ಯ ಜಿ.ಎಲ್, ಬಾರಟಕ್ಕಿ, ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರು, ವಿದ್ಯಾರ್ಥಿಗಳು, ಅಧಿಕಾರಿಗಳು ಹಾಜರಿದ್ದರು. ಕಾರ್ಯಕ್ರವನ್ನು ಎಂ.ಎಚ್.ಕಂಬಳಿ ಸ್ವಾಗತಿಸಿದರು, ಶಿವಕುಮಾರ ಕುರಿ ವಂದಿಸಿದರು, ಎಂ.ಎ.ಎರಗುಡಿ ನಿರೂಪಿಸಿದರು.
