- ಡಾ. ಡಿ ಎಂ ನಂಜುಂಡಪ್ಪ ಸಮಿತಿ ವರದಿ ಸಲ್ಲಿಸಿ 20 ವರ್ಷ ಕಳೆದಿವೆ
- ಉದ್ಯೋಗಕ್ಕಾಗಿ ಬೆಂಗಳೂರು, ಹೈದರಬಾದ್, ಪುಣೆ ನಗರಗಳಿಗೆ ವಲಸೆ
ಡಾ. ಡಿ ಎಂ ನಂಜುಂಡಪ್ಪ ವರದಿ ಆಧರಿಸಿ, ಬೀದರ್ ಜಿಲ್ಲೆಯಲ್ಲಿ ಐ.ಟಿ ಪಾರ್ಕ್ ಸ್ಥಾಪನೆ ಮಾಡಬೇಕು ಎಂದು ಸಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಒತ್ತಾಯಿಸಿದ್ದಾರೆ. ಬೀದರ್ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆ ರಾಜ್ಯದ ರಾಜಧಾನಿಯಿಂದ ದೂರದ ಜಿಲ್ಲೆಯಾಗಿದೆ. ವಿಜ್ಞಾನ ತಂತ್ರಜ್ಞಾನದ ಜೊತೆಗೆ ಅಭಿವೃದ್ಧಿಯಲ್ಲೂ ಬಹು ಹಿಂದೆ ಉಳಿದಿದೆ. ಆದ್ದರಿಂದ ಹಿಂದುಳಿದ ಬೀದರ ಜಿಲ್ಲೆಯಲ್ಲಿ ಐ.ಟಿ. ಪಾರ್ಕ್ ಸ್ಥಾಪನೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಮನವಿ ಮಾಡಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಐ.ಟಿ. ಪಾರ್ಕ್ ಸ್ಥಾಪನೆಗಾಗಿ 2014 ರಿಂದ ಸರ್ಕಾರಕ್ಕೆ ನಿರಂತರ ಮನವಿ ಮಾಡಲಾಗುತ್ತಿದ್ದು, ಇಂದಿನವರೆಗೆ ಸರ್ಕಾರದಿಂದ ಯಾವುದೇ ಸಕರಾತ್ಮಕ ಕ್ರಮ ಆಗಿಲ್ಲ. ಡಾ. ಡಿ ಎಂ ನಂಜುಂಡಪ್ಪ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಐ.ಟಿ. ಪಾರ್ಕ್ ಸ್ಥಾಪಿಸಬೇಕೆಂದು ಸೂಚಿಸಿದ್ದಾರೆ. ಆದರೆ, ವರದಿ ಸಲ್ಲಿಸಿ 20ವರ್ಷ ಕಳೆದರೂ ಸರ್ಕಾರದಿಂದ ಡಾ. ಡಿ ಎಂ ನಂಜುಂಡಪ್ಪ ವರದಿ ಅನುಷ್ಠಾನಗೊಂಡಿಲ್ಲ. ಬೀದರ ಜಿಲ್ಲೆಯಲ್ಲಿ ಐ.ಟಿ. ಪಾರ್ಕ್ ಸ್ಥಾಪನೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಸಾವಿರಾರು ಐ.ಟಿ. ಉದ್ಯೋಗಿಗಳು ಕೆಲಸಕ್ಕಾಗಿ ರಾಜಧಾನಿ ಬೆಂಗಳೂರು ಅಲ್ಲದೇ ನೆರೆ ರಾಜ್ಯದ ಹೈದರಬಾದ್ ಹಾಗೂ ಪುಣೆಯಲ್ಲಿ ಉದ್ಯೋಗಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದೆ. ಬೀದರನಲ್ಲಿ ಐ.ಟಿ. ಉದ್ಯಮಿಗಳಿದ್ದರೂ ಐ.ಟಿ. ಪಾರ್ಕ್ ಇಲ್ಲದ ಕಾರಣ ಅವರೂ ಸಂಕಷ್ಟದಲ್ಲಿದ್ದಾರೆ ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲುಷಿತ ನೀರು ಸೇವನೆ; ಮತ್ತೊಂದು ಗ್ರಾಮದಲ್ಲಿ 8 ಮಂದಿ ಅಸ್ವಸ್ಥ
“ಇದರಿಂದಾಗಿ ಬೀದರ ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತು ಬೀದರ ಜಿಲ್ಲೆಯಲ್ಲಿನ ಐ.ಟಿ. ಉದ್ಯೋಗಿಗಳ ಅನುಕೂಲಕ್ಕಾಗಿ ಹಾಗೂ ಉದ್ಯಮಿಗಳ ಅನುಕೂಲಕ್ಕಾಗಿ ಬೀದರ ಜಿಲ್ಲೆಯಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸುವುದಕ್ಕಾಗಿ ಸರ್ಕಾರದಿಂದ ತಕ್ಷಣ ಬೀದರ ಜಿಲ್ಲೆಯಲ್ಲಿ ಐ.ಟಿ. ಪಾರ್ಕ್ ಸ್ಥಾಪನೆ ಮಾಡಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ, ಸಿಎಂಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.