ದಲಿತ ಕುಟುಂಬ ಬೆಳೆದಿದ್ದ ಕಾಫಿ ಮತ್ತು ಬಾಳೆ ಗಿಡವನ್ನು ನಾಶ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಸವರ್ಣೀಯರ ವಿರುದ್ಧ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ವನಗೂರು ಎಸ್ಟೇಟ್ ಸರ್ವೇ ನಂ.2ರಲ್ಲಿ ವೆಂಕಟೇಶ್ ಬಿನ್ ನಿಂಗಯ್ಯ ಎಂಬವರಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರಾಗಿತ್ತು. ವೆಂಕಟೇಶ್ ಅವರ ಮಗ ಅಭಿಜಿತ್ ಮನೆ ಎದುರು ಇದ್ದ ಖಾಲಿ ಜಾಗವನ್ನು ಉಳುಮೆ ಮಾಡಿ ಕಾಫಿ ಗಿಡ ಮತ್ತು ಬಾಳೆ ಗಿಡಗಳನ್ನು ಹಾಕಿದ್ದರು. ಆದರೆ, ಮಕ್ಕಳು ಆಟ ಆಡಲು ಈ ಜಾಗವನ್ನು ಮೀಸಲಿಡಲು ತೀರ್ಮಾನ ಮಾಡಲಾಗಿತ್ತೆಂದು ಗ್ರಾಮಸ್ಥರ ವಾದವಾಗಿದೆ.
ಅಭಿಜಿತ್ ಇತ್ತೀಚೆಗೆ ತಹಶೀಲ್ದಾರ್, ಆರ್.ಐ ಮತ್ತು ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಿ 4 ಎಕರೆ ಜಾಗವನ್ನು ಗುರುತಿಸಿಕೊಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್ ಐ, ಗ್ರಾಮ ಲೆಕ್ಕಾಧಿಕಾರಿ ಮತ್ತು ಶಾಸಕ ಸಿಮೆಂಟ್ ಮಂಜು ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ ಕೆಲವು ಗ್ರಾಮಸ್ಥರು ಅಧಿಕಾರಿಗಳನ್ನು ಲೆಕ್ಕಿಸದೆ ಅಭಿಜಿತ್ ಹಾಕಿರುವ ಕಾಫಿ ಗಿಡ ಮತ್ತು ಬಾಳೆ ಗಿಡಗಳನ್ನು ಕಡಿದು ಬೆಳೆ ನಾಶ ಮಾಡಿದ್ದು, ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ‘ಬುಡಕಟ್ಟು ಸಂಶೋಧನಾ ಸಂಸ್ಥೆ’ಯ ನಿರ್ದೇಶಕನ ಬಿಡುಗಡೆ ಒತ್ತಾಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಯಸಳೂರು ಪೊಲೀಸ್ ಠಾಣೆಯಲ್ಲಿ 7 ಮಂದಿ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.