2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಗಳಲ್ಲಿ ಟೀಕೆಟುಗಳಿಗಾಗಿ ದೊಡ್ಡ ಪೈಪೋಟಿ ನಡೆದಿದೆ. ಈ ಪೈಪೋಟಿಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಪೈಪೋಟಿ ಆರಂಭವಾಗಿದ್ದು ಆಕಾಂಕ್ಷಿಗಳು ಟಿಕೆಟ್ಗಾಗಿ ಸಾಲು ಸಾಲಾಗಿ ನಿಂತಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿಯಿಂದ ಶಿವಕುಮಾರ್ ಉದಾಸಿ ಅವರು ಸಂಸದರಾಗಿದ್ದು, ಒಂದು ವರ್ಷದ ಹಿಂದೆಯೇ ಅವರು ಈ ಚುನಾವಣೆಯಲ್ಲಿ ನಾನು ಭಾಗವಹಿಸುವುದಿಲ್ಲ, ನಿವೃತ್ತಿಯನ್ನು ಹೊಂದುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಹಾವೇರಿ ಲೋಕಸಭಾ ಚುಣಾವಣೆ ಬಿಜೆಪಿಗರಲ್ಲಿ ಕುತೂಹಲ ಕೆರಳಿಸಿದ್ದು, ಬಿಜೆಪಿ ಪಕ್ಷದಲ್ಲಿ ಟಿಕೇಟಿಗಾಗಿ ಪೈಪೋಟಿ ನಡೆದಿದೆ. ಬಿಜೆಪಿ ಹೊಸ ಅಭ್ಯರ್ಥಿಯ ಹುಡುಕಾಟ ನಡೆಸಿದೆ. ಮೂರು ಭಾರಿ ತಮ್ಮದೇ ಪಕ್ಷದ ಸಂಸದರಾಗಿದ್ದ ಈ ಕ್ಷೇತ್ರಕ್ಕೆ ಚುನಾವಣಾ ಆಕಾಂಕ್ಷೆಗಳು ಟಿಕೇಟಗಾಗಿ ಪೈಪೋಟಿ ನಡೆಸಿದ್ದಾರೆ.
ಆಕಾಂಕ್ಷೆಗಳ ಪಟ್ಟಿ:
ಬಿಜೆಪಿ ಭದ್ರಕೋಟೆಯಾಗಿರುವ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿ ಪಕ್ಷದಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಶಿಗ್ಗಾವಿ ಕ್ಷೇತ್ರದಿಂದ ಆಯ್ಕೆಯಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಮಾಜಿ ಡಿಸಿಎಮ್ ಕೆ.ಎಸ್.ಈಶ್ವರಪ್ಪ ಅವರ ಮಗ ಕಾಂತೇಶ್, ರೋಣ ಕ್ಷೇತ್ರದ ಮಾಜಿ ಶಾಸಕ ಕಳಕಪ್ಪ ಬಂಡಿ, ಮಾಜಿ ಸಚಿವ ಬಿ.ಸಿ.ಪಾಟೀಲ್, ಡಾ. ಮಹೇಶ್ ನಾಲವಾಡ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದರಾಜು ಕಲಕೋಟೆ, ಸಂದೀಪ್ ಪಾಟೀಲ್, ರಾಜ ಶೇಖರ್ ಕಟ್ಟೆಗೌಡರ್, ಶರಣಬಸವ ಅಂಗಡಿ, ಶಿವರಾಜ್ ಸಜ್ಜನ, ಮಂಜುನಾಥ ಮಡಿವಾಳರ, ಡಾ. ಫಕೀರಗೌಡ ಪಾಟೀಲ್, ಇಷ್ಟು ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಎಂದು ಕೇಳಿ ಬರುತ್ತಿರುವ ಹೆಸರುಗಳು.
ಆದರೆ, ಬಿಜೆಪಿಯಲ್ಲಿ ಆಂತರಿಕವಾಗಿ ಮುನ್ನೆಲೆಯಲ್ಲಿ ಕೇಳಿ ಬರುತ್ತಿರುವ ಆಕಾಂಕ್ಷಿಗಳು ಬಸವರಾಜ ಬೊಮ್ಮಾಯಿ, ಡಾ. ಮಹೇಶ ನಾಲವಾಡ, ಕೆ.ಎಸ್. ಕಾಂತೇಶ್.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೊದ ಮೊದಲು ಲೋಕಸಭಾ ಚುನಾವಣೆಯ ಅಭ್ಯರ್ಥಿ ನಾನಲ್ಲ ಎಂದು ಹೇಳುತ್ತಿದ್ದರು. ಈಗ ಹೈ ಕಮಾಂಡ್ ಸೂಚಿಸಿದರೆ ಸಿಎಂ ವರ್ಚಸ್ಸಿನ ಮೇಲೆ ಲೋಕಸಭೆ ಮೆಟ್ಟಿಲೇರುವ ಆಸೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬಂದಿರುವ ಡಾ. ಮಹೇಶ ನಾಲವಾಡ ಅವರ ಹೆಸರು ಪ್ರಭಲವಾಗಿ ಕೇಳಿಬರುತ್ತಿದೆ. ಈಗಾಗಲೇ ಹಾವೇರಿ-ಗದಗ ಕ್ಷೇತ್ರಗಳಲ್ಲಿ ಓಡಾಟ ನಡೆಸಿರುವ ಇವರು ಟೀಕೆಟ್ ಸಿಗುವ ಭರವಸೆಯಲ್ಲಿದ್ದಾರೆ.
ಮಾಜಿ ಡಿಸಿಎಮ್ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಎಸ್.ಕಾಂತೇಶ ಕೂಡ ಮೂರು ನಾಲ್ಕು ತಿಂಗಳ ಹಿಂದೆಯಿಂದಲೂ ಕಾಂತೇಶ್ ಹಾವೇರಿ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಕೆ.ಎಸ್. ಈಶ್ವರಪ್ಪ ಕೇಂದ್ರ ಬಿಜೆಪಿ ಮುಖಂಡರು, ಹೈಕಮಾಂಡ್ ಸ್ನೇಹ ಹೊಂದಿರುವುದರಿಂದ ತಮ್ಮ ಪುತ್ರನಿಗೆ ಟಿಕೆಟ್ ಸಿಗುವ ಭರವಸೆಯನ್ನು ಹೊಂದಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ಮಾಜಿ ಸಚಿವ ಬಿ.ಸಿ. ಪಾಟೀಲ್ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಹಿರೆಕೇರೂರು ಕ್ಷೇತ್ರದಿಂದ ಮೂರು ಬಾರಿ ಪ್ರತಿನಿಧಿಸಿದ್ದರಿಂದ ಟಿಕೆಟ್ ಕೊಡಬೇಕೆಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದರಾಜು ಕಲಕೋಟಿ ರಾಜ್ಯ ಬಿಜೆಪಿ ಮುಖಂಡರೊಂದಿಗೆ ನಿಕಟ ಸಂಪರ್ಕದಲ್ಲಿರುವ ಟಿಕೆಟ್ ಆಕಾಂಕ್ಷಿ.
ರೋಣ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ಕಳಕಪ್ಪ ಬಂಡಿಯು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಹೈಕಮಾಂಡ್ ಅವಕಾಶ ನೀಡಿದರೆ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಸಂದೀಪ್ ಪಾಟೀಲ್, ರಾಜ ಶೇಖರ್ ಕಟ್ಟೆಗೌಡರ್, ಶರಣಬಸವ ಅಂಗಡಿ, ಶಿವರಾಜ್ ಸಜ್ಜನ, ಮಂಜುನಾಥ ಮಡಿವಾಳರ. ಡಾ. ಫಕೀರಗೌಡ ಪಾಟೀಲ್ ಇವರುಗಳು ಹಿರಿಯ ಬಿಜೆಪಿ ಮುಖಂಡರಿಗೆ ಟಿಕೆಟ್ ಕೊಡಬೇಕೆಂದು ಮನವಿ ಮಾಡುತ್ತಿದ್ದಾರೆ.
ಇನ್ನೂ ಕಾಂಗ್ರೆಸ್ನಲ್ಲಿ ಮಂಜುನಾಥ ಕುನ್ನೂರು, ಸಲೀಂ ಅಹ್ಮದ್, ಆನಂದ ಗಡ್ಡದೇವರಮಠ, ಡಾ.ಆರ್.ಎಂ.ಕುಬೇರಪ್ಪ, ಎಚ್.ಕೆ. ಪಾಟೀಲ, ಬಿ.ಆರ್. ಪಾಟೀಲ, ಸೋಮಣ್ಣ ಬೇವಿನಮರದ, ಎಸ್.ಆರ್. ಪಾಟೀಲ, ಸಂಜೀವ ನೀರಲಗಿ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಹೆಸರುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಪಕ್ಷದ ಆಂತರಿಕದಿಂದ ಕೇಳಿಬರುತ್ತಿರುವುದು ಬಂದ ಪ್ರಬಲ ಆಕಾಂಕ್ಷಿಗಳು ಆನಂದ ಗಡ್ಡದೇವರಮಠ, ಬಸವರಾಜ್ ಶಿವಣ್ಣವರ ಹೆಸರುಗಳು.
ಆನಂದ ಗಡ್ಡದೇವರಮಠ ಕಾಂಗ್ರೆಸ್ ಪಕ್ಷದ ಹಿನ್ನೆಲೆಯ ಇರುವ ಕುಟುಂಬದವರು. ಸ್ವ ವರ್ಚಸ್ಸು, ಹಿರಿಯ ರಾಜಕಾರಣಿಗಳೊಂದಿಗೆ ಒಡನಾಟ ಹಾಗೂ ಕ್ಷೇತ್ರದಲ್ಲಿ ಓಡಾಟ ನಡೆಸಿ ಜನರ ಸಂಪರ್ಕದಲ್ಲಿದ್ದಾರೆ. ಇನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಕಳೆದ ವಿಧಾನ ಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದು, ಕಾಂಗ್ರೆಸ್ ಹಿರಿಯ ಮುಖಂಡರು, ರಾಜ್ಯ ಮುಖಂಡರೊಂದಿಗೆ ಆಪ್ತತೆ ಹೊಂದಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಹೈಕಮಾಂಡ್ ಗದಗ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ವಹಿಸಿದ್ದು. ಲೋಕಸಭಾ ಚುನಾವಣೆಯಲ್ಲಿ ಇವರ ಹೆಸರು ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ಹಾವೇರಿ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೇಸ್ ಎರಡು ಪಕ್ಷಗಳಲ್ಲಿ ಟಿಕೆಟಿಗಾಗಿ ದೊಡ್ಡ ಮಟ್ಟದ ಪೈಪೋಟಿ ನಡೆದಿದ್ದು, ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಕುತೂಹಲ ಕೆರಳಿಸಿದೆ.