ಬರಗಾಲ, ಮಳೆ ಕೊರತೆ, ಬತ್ತಿದ ಅಂರ್ತಜಲ, ಅಧಿಕ ಉಷ್ಣಾಂಶ ಸೇರಿದಂತೆ ಸಾಲು ಸಾಲು ಸಮಸ್ಯೆಗಳಿಂದ ಹೈರಾಣಾಗಿದ್ದ ರೈತರ ನಡುವೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ರೈತರೊಬ್ಬರು ಕಲ್ಲಂಗಡಿ ಬೆಳೆದು ಉತ್ತಮ ಆದಾಯ ಪಡೆದು ಮಾದರಿಯಾಗಿದ್ದಾರೆ.
ಹತ್ತಾರು ವರ್ಷಗಳಿಂದ ಏಕ ಬೆಳೆ ಬೆಳೆದಿದ್ದ ಶಿವಪ್ಪ ನವಲಿ ಅವರು ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಯಶಸ್ವಿಯಾಗಿದ್ದಾರೆ. ರಾಸಾಯನಿಕ ಗೊಬ್ಬರವನ್ನು ಬಿಟ್ಟು, ಸಾವಯವ ಕೃಷಿ ಬಳಕೆ ಮಾಡಿ, ಹೆಚ್ಚು ನಿಗಾ ವಹಿಸಿ ಬೆಳೆ ಆರೈಕೆ ಮಾಡಿದ ಪರಿಣಾಮ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇವರು ಬೆಳೆದಿರುವ ದೊಡ್ಡ ಗಾತ್ರದ, ರುಚಿಕರ ಕಲ್ಲಂಗಡಿ ಹಣ್ಣಿಗೆ ಭಾರೀ ಬೇಡಿಕೆ ಇದೆ. ಬಿಸಿಲು, ಜಾತ್ರೆ, ಶಿವರಾತ್ರಿ ನೆಪದಲ್ಲಿ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ದೊರೆತಿದೆ.
ಅವರ 22 ಎಕರೆ ಜಮೀನಿನಲ್ಲಿ ಒಟ್ಟು 6 ಬೋರ್ವೆಲ್ಗಳಿದ್ದು, 3 ಬೋರ್ವೆಲ್ಗಳಲ್ಲಿ ಮಾತ್ರ ಅಲ್ಪ ಪ್ರಮಾಣ ನೀರಿದೆ. ಅದೂ ಸಾಲದಿದ್ದಾಗ ದಿನಕ್ಕೆ ₹1,500ರಂತೆ 20 ದಿನಕ್ಕೂ ಹೆಚ್ಚು ಕಾಲ ಬಾಡಿಗೆ ನೀರು ಪಡೆದು ಕಲ್ಲಂಗಡಿ ಬೆಳೆ ಉಳಿಸಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧಿ ಹಾಗೂ ಹನಿ ನೀರಾವರಿಯಿಂದ ನೀರು ನಿರ್ವಹಣೆ ಮಾಡಿದ್ದರಿಂದ ಉತ್ತಮ ಬೆಳೆ ಪಡೆಯಲು ಸಾಧ್ಯವಾಗಿರುವುದಾಗಿ ರೈತ ಶಿವಪ್ಪ ಹೇಳಿಕೊಂಡಿದ್ದಾರೆ.
ಒಟ್ಟು ನಾಲ್ಕು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದು, ಅದರಲ್ಲಿ ಈಗಾಗಲೇ ಎರಡು ಎಕರೆ ಜಮೀನಿನಲ್ಲಿ ಎರಡು ಬಾರಿ ಕಟಾವು ಮಾಡಿದ್ದಾರೆ. ಒಟ್ಟು 25 ಟನ್ ಉತ್ತಮ ಇಳುವರಿ ಪಡೆದಿದ್ದಾರೆ. ಉಳಿದಿರುವ ಎರಡು ಎಕರೆಯಲ್ಲಿ ಇನ್ನು 25 ಟನ್ ಕಲ್ಲಂಗಡಿ ಬೆಳೆ ಬರುವ ನಿರೀಕ್ಷೆ ಇದೆ. ಈವರೆಗೆ ಒಟ್ಟು ₹1.5 ಲಕ್ಷ ನಿವ್ವಳ ಆದಾಯ ಲಭಿಸಿದೆ. 4 ಎಕರೆ ಶೇಂಗಾ, 2 ಎಕರೆ ಜೋಳ ಕೂಡ ಬೆಳೆದಿದ್ದಾರೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಗದಗ | ನ್ಯಾಯಸಮ್ಮತ ಹಾಗೂ ನಿರ್ಭೀತಿ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ: ಜಿಲ್ಲಾಧಿಕಾರಿ
ಭೀಕರ ಬರದ ಪರಿಸ್ಥಿತಿಯಲ್ಲೂ ಉತ್ತಮ ಇಳುವರಿ ತೆಗೆದಿದ್ದಕ್ಕಾಗಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಹಾವೇರಿ ಜಿಲ್ಲಾ ಘಟಕದಿಂದ ರೈತ ಜಾಗೃತಿ ಕಾರ್ಯಕ್ರಮದಲ್ಲಿ ರೈತ ಶಿವಪ್ಪ ಚನ್ನಬಸಪ್ಪ ನವಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.