- ಸಂಪೂರ್ಣವಾಗಿ ಸುಟ್ಟು ಹೋಗುತ್ತಿರುವ ಎಲೆಕ್ಟ್ರಾನಿಕ್ ವಸ್ತುಗಳು
- ಮುಂದೆ ಈ ರೀತಿ ಆಗದ ಹಾಗೇ ನೋಡಿಕೊಳ್ಳುತ್ತೇವೆ; ಹೆಸ್ಕಾಂ ಎಇಇ
ರಾಜ್ಯದೆಲ್ಲೆಡೆ ಮಳೆಯ ಜೊತೆಗೆ ಬಿಸಿಲ ಧಗೆ ಹೆಚ್ಚಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಜೊತೆಗೆ ಹೆಚ್ಚಿನ ಬಿಸಿಲಿನ ಝಳ ಜನರನ್ನು ಕಾಡುತ್ತಿದೆ. ಇದನ್ನೇ ನರಕ ಎಂದುಕೊಂಡು ವಾಸಿಸುತ್ತಿರುವ ಜನರಿಗೆ ‘ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ’ (ಹೆಸ್ಕಾಂ) ಮತ್ತೊಂದು ಶಾಕ್ ನೀಡುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ರಣಬಿಸಿಲು ಸುಡಲಾರಂಭಿಸಿದೆ. ಸಾಯಂಕಾಲವೂ ಧಗೆ ಹೆಚ್ಚಾಗುತ್ತಿದೆ. ಇದರ ನಡುವೆ, ಇಲ್ಲಿನ ಹೆಸ್ಕಾಂ ಘಟಕವು ದಿನನಿತ್ಯ ಏಳರಿಂದ ಎಂಟು ಬಾರಿ ವಿದ್ಯುತ್ ಪೂರೈಕೆ ಕಡಿತಗೊಳಿಸುತ್ತಿದೆ. ಜೊತೆಗೆ ಒಮ್ಮೆಲೆ ಹೆಚ್ಚು-ಕಡಿಮೆ ವೋಲ್ಟೆಜ್ ಕರೆಂಟ್ ನೀಡುವುದರಿಂದ ಮನೆಯಲ್ಲಿರುವ ಫ್ಯಾನ್, ಮೊಬೈಲ್, ಟಿವಿ ಸೇರಿದಂತೆ ಜಾರ್ಜ್ಗೆ ಇಟ್ಟ ಅಥವಾ ವಿದ್ಯುತ್ ಸಂಪರ್ಕದಲ್ಲಿದ್ದ ವಸ್ತುಗಳು ಹಾಳಾಗುತ್ತಿವೆ.
ಬುಧವಾರ, ಅಥಣಿಯ ಸಂಗಮೇಶ್ವರ ಓಣಿಯಲ್ಲಿ ವಿದ್ಯುತ್ ಕಡಿತವಾಗಿ, ಒಮ್ಮೆಲೆ ಹೈ-ವೋಲ್ಟೇಜ್ ವಿದ್ಯುತ್ ಬಂದಿದ್ದು, ಮನೆಗಳಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಹೆಸ್ಕಾಂ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಸಂಗಮೇಶ್ವರ ನಗರದ ನಿವಾಸಿ ಶಿಲ್ಪಾ, “ಕಳೆದ ಒಂದು ತಿಂಗಳಿನಿಂದ ದಿನಕ್ಕೆ ಏಳರಿಂದ ಎಂಟು ಬಾರಿ ಕರೆಂಟ್ ಹೋಗಿ-ಬರುತ್ತದೆ. ಈ ವೇಳೆ, ಫ್ಯಾನ್ ಸೇರಿದಂತೆ ಜಾರ್ಜ್ ಹಾಕಿದ್ದ ಪ್ರತಿಯೊಂದು ವಸ್ತುಗಳು ಸುಟ್ಟು ಕರಕಲಾಗುತ್ತಿವೆ. ಈ ಬಗ್ಗೆ ದೂರು ದಾಖಲಿಸೋಣ ಎಂದರೂ ನಮಗೆ ಆ ಬಗ್ಗೆ ತಿಳಿದಿಲ್ಲ” ಎಂದರು.
ಮತ್ತೋರ್ವ ನಿವಾಸಿ ದಾರಿಗೌಡ ಮಾತನಾಡಿ, “ಕಳೆದ ಹಲವು ದಿನಗಳಿನಿಂದ ಈ ಸಮಸ್ಯೆ ಕಾಡುತ್ತಿದೆ. ಕರೆಂಟ್ ಯಾಕೆ ಪದೇಪದೆ ತೆಗೆಯುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇಷ್ಟು ದಿನ ಬೇರೆಯವರ ಮನೆಯಲ್ಲಿ ಕರೆಂಟ್ನಿಂದ ಫ್ಯಾನ್ ಸುಡುವ ಬಗ್ಗೆ ಕೇಳಿದ್ದೆ, ಇಂದು ನಮ್ಮ ಮನೆಯಲ್ಲಿಯೇ ಫ್ಯಾನ್ ಸುಟ್ಟು ಹೋಗಿದೆ. ಇವಾಗ ಫ್ಯಾನ್ ರಿಪೇರಿ ಮಾಡುವವರನ್ನು ಕರೆದುಕೊಂಡು ಬಂದು ರಿಪೇರಿ ಮಾಡಿಸಿದೆ” ಎಂದು ತಿಳಿಸಿದರು.
ಇನ್ನೋರ್ವ ನಿವಾಸಿ ರಮೇಶ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕರೆಂಟ್ ಒಮ್ಮೆ ಹೆವಿ ವೋಲ್ಟೆಜ್ನೊಂದಿಗೆ ಬರುತ್ತದೆ. ಮತ್ತೋಮೆ ತೀರಾ ಕಡಿಮೆ ವೊಲ್ಟೇಜ್ ಬರುತ್ತದೆ. ಇದರಿಂದ ವಸ್ತುಗಳು ಸುಡುತ್ತಿವೇಯಾ ಎಂಬ ಬಗ್ಗೆ ತಿಳಿದಿಲ್ಲ. ಆದರೆ, ಇಲ್ಲಿಯವರೆಗೂ ನಮ್ಮ ಮನೆಯಲ್ಲಿನ ಫ್ಯಾನ್ ಮೂರು ಬಾರಿ ಸುಟ್ಟಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಡೆಂಗ್ಯೂಗೆ 24 ವರ್ಷದ ಯುವಕ ಬಲಿ
ಈ ದಿನ.ಕಾಮ್ ಜತೆಗೆ ಮಾತನಾಡಿದ ನಿವಾಸಿ ಸಂಪ್ರೀತ್, “ಬೇಸಿಗೆಯ ಜಳಕ್ಕೆ ಸಾಕಾಗಿದೆ. ಹೊರಗೆ ಹೋಗೋಣವೆಂದರೆ ರಣ ಬೀಸಲು ಕಾಡುತ್ತಿದೆ. ಇತ್ತಕಡೆ ಮನೆಯಲ್ಲಿ ಇರೋಣವೆಂದರೆ ಹೆಸ್ಕಾಂನವರು ದಿನಕ್ಕೆ ಏಳು ಬಾರಿ ಕರೆಂಟ್ ತೆಗೆಯುತ್ತಿದ್ದಾರೆ” ಎಂದು ಹೇಳಿದರು.
ಈ ಸಮಸ್ಯೆಗಳ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಹೆಸ್ಕಾಂ ಎಇಇ ವೆಂಕಟ್, ”ಕರೆಂಟ್ಗೆ ಇರುವ ಕ್ಯಾಪಿಸಿಟಿ ಬಿಟ್ಟು ಹೆಚ್ಚಿನದಾಗಿ ಕರೆಂಟ್ ಬಸಿದರೇ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಮುಂದೆ ಈ ರೀತಿ ಆಗದ ಹಾಗೇ ನೋಡಿಕೊಳ್ಳುತ್ತೇವೆ” ಎಂದರು.