ಐಪಿಎಲ್ ಕ್ರಿಕೆಟ್ ಟೂರ್ನಿ ಕಳೆದ ಕೆಲ ವರ್ಷಗಳಿಂದ ಕ್ರೀಡೆಯಾಗಿ ಮಾತ್ರವೇ ಉಳಿದಿಲ್ಲ. ಅದೊಂದು ಬೆಟ್ಟಿಂಗ್ ದಂಧೆಯ ಸರಕಾಗಿಯೂ ಮಾರ್ಪಟ್ಟಿದೆ. ಅಂತಹ ಬೆಟ್ಟಿಂಗ್ ಸರ್ಕಾರಿ ಉದ್ಯೋಗಿಯೊಬ್ಬರು ಕೋಟ್ಯಂತರ ರೂ. ಹಣ ಕಳೆದುಕೊಂಡಿದ್ದು, ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಬಸವ ಲೇಔಟ್ನಲ್ಲಿ ಮಾರ್ಚ್ 18ರಂದೇ ಘಟನೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ದರ್ಶನ್ ಬಾಬು ಎಂಬಾತ ಬೇಗನೆ ಹಣ ಗಳಿಸಬೇಕೆಂದು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಪರಿಣಾಮ, ಕೋಟ್ಯಂತರ ರೂ. ಸಾಲ ಮಾಡಿಕೊಂಡಿದ್ದಾರೆ.
ಆತ ಖಾಸಗಿ ಲೇವಾದೇವಿಗಾರರಿಂದ ಬರೋಬ್ಬರಿ ಸುಮಾರು 1 ಕೋಟಿ ರೂ. ಸಾಲ ಪಡೆದಿದ್ದರು. ತಾನು ಮಾಡಿರುವ ಸಾಲ ತೀರಿಸುವಂತೆ ಕುಟುಂಬಕ್ಕೂ ನಿತ್ಯ ಕಿರುಕುಳ ನೀಡುತ್ತಿದ್ದರು. ಲೇವಾದೇವಿಗಾರರ ಕಿರುಕುಳದಿಂದ ಬೇಸತ್ತ ಆತನ ಪತ್ನಿ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದರ್ಶನ್ ಮತ್ತು ರಂಜಿತಾ 2020ರಲ್ಲಿ ವಿವಾಹವಾಗಿದ್ದರು. ಅವರು ವಿವಾಹವಾಗಿ ಒಂದು ವರ್ಷದ ಬಳಿಕ, 2021ರಲ್ಲಿ ದರ್ಶನ್ಗೆ ಬೆಟ್ಟಿಂಗ್ ಚಟ ಇರುವುದಾಗಿ ರಂಜಿತಾಗೆ ಗೊತ್ತಾಗಿತ್ತು ಎಂದು ಪೋಲೀಸರು ತಿಳಿಸಿದ್ದಾರೆ.