ಕಲಬುರಗಿ | ಸಂಯುಕ್ತ ಕಿಸಾನ್ ಮೋರ್ಚಾದಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಮನವಿ

Date:

Advertisements

ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆ ಎಂ) ಕರೆಯ ಮೇರೆಗೆ ದೀರ್ಘಕಾಲದಿಂದ ಉಳಿದಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಗಳ ಮೇಲೆ ಮತ್ತು ಕ್ಯಾಬಿನೆಟ್‌ನ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ ದೇಶದೆಲ್ಲೆಡೆ ಸಂಯುಕ್ತ – ಹೋರಾಟ ಸಮಿತಿ ಎಲ್ಲ ಸಂಸದರಿಗೆ ಮನವಿ ಸಲ್ಲಿಸುತ್ತಿದೆ. ಇದರ ಭಾಗವಾಗಿ ರೈತ, ಕಾರ್ಮಿಕ ಮುಖಂಡರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು.

ಬಳಿಕ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜುಲೈ 10 ರಂದು ನವದೆಹಲಿಯಲ್ಲಿ ನಡೆದ ಎಸ್‌ಕೆಎಂನ ರಾಷ್ಟ್ರೀಯ ಸಮ್ಮೇಳನವು ಚುನಾವಣಾ ಉತ್ತರ ಪರಿಸ್ಥಿತಿಯನ್ನು ಅವಲೋಕಿಸಿದೆ. ರೈತ ಚಳುವಳಿ ಪ್ರಬಲವಾಗಿರುವಂತಹ ಐದು ರಾಜ್ಯಗಳ 38 ಕ್ಷೇತ್ರಗಳನ್ನು ಆಳುವ ಮೈತ್ರಿಕೂಟ ಕಳೆದುಕೊಂಡಿರುವುದನ್ನು ಒಕ್ಕೂಟ ಸರ್ಕಾರವು ಅರ್ಥಮಾಡಿಕೊಳ್ಳಬೇಕಿದೆ. ಗ್ರಾಮೀಣ ಮತದಾರರನ್ನು ಹೆಚ್ಚಾಗಿ ಹೊಂದಿರುವ 159 ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿಕೂಟವು ಸೋತಿದೆ. ಇದಕ್ಕೆ ದೀರ್ಘಕಾಲದ ಕೃಷಿ ವಲಯದ ಬಿಕ್ಕಟ್ಟು ಕಾರಣ. ಭವಿಷ್ಯದಲ್ಲಿ ಕೃಷಿ ನೀತಿಗಳಲ್ಲಿ ರೈತಪರ ಸುಧಾರಣೆಗಳನ್ನು ಮಾಡಬೇಕಿರುವ ಅಗತ್ಯವಿದೆ ಎಂದು ಹೋರಾಟಗಾರರು ಹೇಳಿದರು.

Advertisements

ದೀರ್ಘಕಾಲದಿಂದ ಬಗೆಹರಿಯದೆ ಉಳಿಸಲಾಗಿದ್ದ ರೈತರ ಪ್ರಮುಖ ಆಗ್ರಹಗಳಾದ ಲಾಭದಾಯಕ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಗ್ರಹಣೆಯ ಖಾತರಿ ಸಮಗ್ರ ಸಾಲ ಮನ್ನಾ ವಿದ್ಯುತ್ತಿನ ಖಾಸಗೀಕರಣದ ರದ್ದತಿ ಮುಂತಾದವುಗಳಿಗೆ ಸಂಬಂಧಿಸಿದ ಡಿಸೆಂಬರ್ 9ರಂದು ಮಾಡಲಾದ ಒಡಂಬಡಿಕೆಯ ಉಲ್ಲಂಘನೆಗೆ 2 ಸರ್ಕಾರವೇ ಹೊಣೆ ಎಂದು ಸಭೆ ತೀರ್ಮಾನಿಸಿತ್ತು ಎಂದು ರೈತರು ತಿಳಿಸಿದರು.

ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಂಸದರು ಬೆಂಬಲವಾಗಿ ನಿಲ್ಲಬೇಕು. ದೀರ್ಘಕಾಲದಿಂದ ಉಳಿದಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅರ್ಥಪೂರ್ಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಗಳು ಕ್ಯಾಬಿನೆಟಿನ ಮೇಲೆ ಒತ್ತಡ ತರಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಆಗ್ರಹಿದರು.

ಎಸ್‌ಕೆಎಂ

ಪ್ರತಿಭಟನೆ ಹಾಗೂ ಮನವಿಯ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾದ ಶರಣ ಬಸಪ್ಪ ಮಮಶೆಟ್ಟಿ, ಎಐಕೆಎಸ್‌ನ ಅಧ್ಯಕ್ಷರಾದ ಮೌಲಾ ಮುಲ್ಲಾ, ಕರ್ನಾಟಕ ರಾಜ್ಯ ರೈತ ಸಂಘದ ನಾಗೇಂದ್ರಪ್ಪಾ ಥಂಬೆ, ದಸಂಸ ಸಂಚಾಲಕ ಅರ್ಜುನ್ ಗೊಬ್ಬುರ, ಆರ್‌ಕೆಎಂಎಂಎಸ್‌ನ ಅಧ್ಯಕ್ಷರಾದ ಮಹೇಶ್ ಎಸ್. ಬಿ., ಎಸ್ ಆರ್ ಕೊಲ್ಲೂರೆ, ಎಐಎಡಬ್ಲ್ಯೂಯುನ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಸಿಐಟಿಯು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಎಂ.ಬಿ.ಸಜ್ಜನ, ಜೆಎಂಎಸ್‌ನ ಜಿಲ್ಲಾ ಕಾರ್ಯದರ್ಶಿ ಡಾ ಪದ್ಮನಿ ಕಿರಣಗಿ, ಎಐಕೆಎಸ್‌ನ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಕರ್ನಾಟಕ ಪ್ರಾಂತ ರೈತ ಸಂಘದ ಸಾಯಬಣ್ಣ ಗುಡುಬಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಯುಕ್ತ ಕಿಸಾನ್ ಮೋರ್ಚಾದ ಹಕ್ಕೊತ್ತಾಯಗಳು

  1. ಎಲ್ಲಾ ಬೆಳೆಗಳ C2+50% ದರದಲ್ಲಿ ಕಾಯ್ದೆಬದ್ಧ ಕನಿಷ್ಠ ಬೆಂಬಲ ಬೆಲೆ ಮತ್ತು ಸಂಪೂರ್ಣ ಉತ್ಪನ್ನದ ಸಂಗ್ರಹಣೆಯ ಖಾತರಿ ಜಾರಿಗೊಳಿಸಬೇಕು.
  2. ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟದ ವಲಸೆಯಿಂದ ರಕ್ಷಿಸಲು ಸಮಗ್ರ ‘ಸಾಲ ಮನ್ನಾ’ ಜಾರಿ ಮಾಡಬೇಕು.
  3. ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಪ್ರಸ್ತಾಪ ಕೈಬಿಡಬೇಕು.
  4. ರಸಗೊಬ್ಬರ, ಕ್ರಿಮಿನಾಶಕಗಳು, ವಿದ್ಯುತ್, ನೀರಾವರಿಯ ಯಂತ್ರೋಪಕರಣಗಳು, ಬಿಡಿ ಭಾಗಗಳು, ಟ್ರಾಕ್ಟರ್‌ಗಳಂತಹ ಕೃಷಿ ಒಳಸುರಿಗಳ ಮೇಲೆ ಜಿಎಸ್‌ಟಿ ಹಾಕಬಾರದು. ಕೃಷಿ ಒಳಸುರಿಗಳಿಗೆ ಸಬ್ಸಿಡಿ ಪುನಃ ಜಾರಿ ಮಾಡಬೇಕು. ಸರ್ಕಾರಿ ಯೋಜನೆಗಳ ಲಾಭವನ್ನು ಪಾಲು ಬೆಳೆಗಾರರು ಮತ್ತು ಗೇಣಿದಾರರಿಗೂ ವಿಸ್ತರಿಸಬೇಕು.
  5. ಎಲ್ಲ ಕೃಷಿ ಮತ್ತು ಪಶುಸಂಗೋಪನೆ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರವಾದ PMFBY ಯೋಜನೆಯನ್ನು ರದ್ದುಪಡಿಸಬೇಕು.
  6. ಆಹಾರ ಉತ್ಪಾದಕರಾದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡಬೇಕು.
  7. ಭೂಸ್ವಾಧೀನ ಪರಿಹಾರ ಮತ್ತು ಪುನರ್ವಸತಿ ಕಾಯ್ದೆ 2013 ನ್ನು ಎರಡು ವರ್ಷಕ್ಕೊಮ್ಮೆ ದರವನ್ನು ಪರಿಷ್ಕರಣೆ ಮಾಡುವುದನ್ನು ಕಡ್ಡಾಯಗೊಳಿಸಿ ಕಾರ್ಯಗತಗೊಳಿಸಬೇಕು. ಸಾರ್ವಜನಿಕ ಮತ್ತು ಖಾಸಗಿ ವಲಯದ ಯೋಜನೆಗಳೆರಡಕ್ಕಾಗಿಯೂ ಕಡಿಮೆ ಸರ್ಕಲ್ ದರದಲ್ಲಿ ಸ್ವಾಧೀನಪಡಿಸಿಕೊಂಡ ಎಲ್ಲಾ ಭೂಮಿಗೂ ಪರಿಹಾರ ನೀಡಬೇಕು. ಪರಿಹಾರ ಮತ್ತು ಪುನರ್ವಸತಿಗಳನ್ನು ನೀಡದೆ ಯಾವುದೇ ಭೂ ಸ್ವಾಧೀನ ಮಾಡಕೂಡದು. ಮುಂಚಿತವಾಗಿ ಪುನರ್ವಸತಿ ಕಲ್ಪಿಸದೆ ಯಾವುದೇ ಸ್ಲಂ ಮತ್ತು ಅಂತಹ ವಸತಿ ಪ್ರದೇಶಗಳನ್ನು ನೆಲಸಮ ಮಾಡಬಾರದು. ‘ಬುಲ್ಡೋಜರ್ ಆಡಳಿತ’ವನ್ನು ಕೊನೆಗೊಳಿಸಬೇಕು. ಪೂರ್ಣ ಪರಿಹಾರ ನೀಡದೆ ಯಾವುದೇ ಕೃಷಿ ಭೂಮಿಯ ಮೇಲೆ ಹೈ ವೋಲ್ವೇಜ್ ವಿದ್ಯುತ್ ಮಾರ್ಗಗಳನ್ನು ಬಲವಂತವಾಗಿ ನಿರ್ಮಿಸಬಾರದು.
  8. ಅರಣ್ಯ ಹಕ್ಕು ಕಾಯ್ದೆ (FRA) ಮತ್ತು ಪಂಚಾಯತ್ (ಶೆಡ್ಯೂಲ್ಡ್ ಏರಿಯಗಳಿಗೆ ವಿಸ್ತರಣೆ) ಕಾಯ್ದೆ (PESA) ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
  9. ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ರೂಪಿಸಬೇಕು, ಮನುಷ್ಯ ಜೀವಹಾನಿಗೆ 1 ಕೋಟಿ ರೂ. ಹಾಗೂ ಬೆಳೆ ಮತ್ತು ಸಾಕುಪ್ರಾಣಿಗಳ ನಷ್ಟಕ್ಕೆ 2 ಕೋಟಿ ರೂ. ಪರಿಹಾರ ನೀಡಬೇಕು.
  10. ಭಾರತವನ್ನೊಂದು ಪೊಲೀಸ್ ಪ್ರಭುತ್ವವನ್ನಾಗಿಸಿ ಭಿನ್ನಾಭಿಪ್ರಾಯವನ್ನು ಮತ್ತು ಜನತೆಯ ಪ್ರತಿಭಟನೆಗಳನ್ನು ಹತ್ತಿಕ್ಕಲೆಂದೇ, ಸಂಸತ್ತಿನಲ್ಲಿ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗೆ ಒಳಪಡಿಸದೆ ಸಿಪಿಸಿ ಮತ್ತು ಸಿಆರ್ ಪಿಸಿ (ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ) ಕಾಯ್ದೆಗಳನ್ನು ಬದಲಾಯಿಸಿ, ಜನತೆಯ ಮೇಲೆ ಹೇರಿರುವ 3 ಕ್ರಿಮಿನಲ್ ಕಾಯ್ದೆಗಳನ್ನು ರದ್ದು ಮಾಡಬೇಕು.
  11. 736 ರೈತ ಹುತಾತ್ಮರ ಸ್ಮರಣೆಗಾಗಿ ಸಿಂಘು/ಟಿಕ್ರಿ ಗಡಿಯಲ್ಲಿ ಸೂಕ್ತವಾದ ಹುತಾತ್ಮ ಸ್ಮಾರಕವನ್ನು ನಿರ್ಮಿಸಬೇಕು. ಲಖಿಂಪುರ್ ಬೀರಿಯ ಹುತಾತ್ಮರನ್ನೂ ಒಳಗೊಂಡಂತೆ ಚಾರಿತ್ರಿಕ ರೈತ ಹೋರಾಟದ ಎಲ್ಲಾ ಹುತಾತ್ಮರ ಕುಟುಂಬಗಳಿಗೂ ಸೂಕ್ತವಾದ ಪರಿಹಾರವನ್ನು ನೀಡಬೇಕು. ರೈತ ಹೋರಾಟದ ಸಂಬಂಧ ಹಾಕಲಾಗಿರುವ ಎಲ್ಲಾ ಕೇಸುಗಳನ್ನೂ ಹಿಂತೆಗೆಯಬೇಕು.
  12. ಕಾರ್ಮಿಕರು, ರೈತರು ಮತ್ತು ಎಲ್ಲಾ ದುಡಿವ ಜನತೆಯ ನಡುವೆ ಸಂಪತ್ತಿನ ತರ್ಕಸಮ್ಮತ ಮತ್ತು ಸಮಾನ ಹಂಚಿಕೆಗೆ ಬೇಕಾದ ಹಣಕಾಸಿನ ಸಂಪನ್ಮೂಲವನ್ನು ಕಂಡುಕೊಳ್ಳುವುದಕ್ಕಾಗಿ ಅತಿ ಶ್ರೀಮಂತರಿಗೆ ತೆರಿಗೆ ಹಾಕಬೇಕು; ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಬೇಕು: ಸಂಪತ್ತಿನ ತೆರಿಗೆ ಮತ್ತು ಉತ್ತರಾಧಿಕಾರ ತೆರಿಗೆಯನ್ನು ಪುನಃ ಜಾರಿಗೆ ತರಬೇಕು.
  13. ಕೃಷಿಯ ಕಾರ್ಪೊರೇಟೀಕರಣ ಕೂಡದು. ಕೃಷಿ ಉತ್ಪಾದನೆ, ವ್ಯಾಪಾರ ಮತ್ತು ಆಹಾರ ಸಂಸ್ಕರಣೆಯಲ್ಲಿ ಎಂಎನ್ಸಿಗಳಿಗೆ ಪ್ರವೇಶ ನೀಡಕೂಡದು. ಮುಕ್ತ ವ್ಯಾಪಾರ ಒಡಂಬಡಿಕೆಗಳನ್ನು (ಫ್ರೀ ಟ್ರೇಡ್ ಅಗ್ರೀಮೆಂಟ್ FTA) ಮಾಡಿಕೊಳ್ಳಬಾರದು. ಭಾರತವು ಕೃಷಿಗೆ ಸಂಬಂಧಿಸಿದ WTO ಒಪ್ಪಂದದಿಂದ ಹೊರಬರಬೇಕು.
  14. ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ಮಾಡಿ, ಭಾರತೀಯ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ‘ಬಲಿಷ್ಠ ರಾಜ್ಯಗಳು: ಬಲಿಷ್ಠ ಭಾರತ ಒಕ್ಕೂಟ’ ಎಂಬ ಒಕ್ಕೂಟ ತತ್ವಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳ ತೆರಿಗೆ ಹಕ್ಕನ್ನು ಪುನ‌ರ್ ಸ್ಥಾಪಿಸಬೇಕು.
  15. ಸಹಕಾರ ಕ್ಷೇತ್ರವು ರಾಜ್ಯ ವಿಷಯವೆಂಬ ಸಾಂವಿಧಾನಿಕ ನಿಯಮಾವಳಿಯನ್ನು ಎತ್ತಿಹಿಡಿಯಬೇಕು ಹಾಗೂ ಕೇಂದ್ರ ಸರ್ಕಾರದ ಸಹಕಾರ ಇಲಾಖೆಯನ್ನು ರದ್ದುಗೊಳಿಸಬೇಕು.
  16. ಜನತೆಯ ಜೀವನೋಪಾಯ ಮತ್ತು ಪ್ರಕೃತಿಯ ರಕ್ಷಣೆಗಾಗಿ ಭೂಮಿ, ನೀರು, ಆರಣ್ಯಗಳು ಹಾಗೂ ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ಕಾರ್ಪೊರೇಟ್ ಹತೋಟಿ ಮತ್ತು ಸರಕೀಕರಣವನ್ನು ಕೊನೆಗೊಳಿಸಬೇಕು. ಕೃಷಿಯ ರಕ್ಷಣೆ, ಮಳೆ ನೀರಿನ ವೈಜ್ಞಾನಿಕ ಸಂರಕ್ಷಣೆ-ಬಳಕೆಯ (ಮಳೆನೀರು ಕೊಯ್ದು) ಅಭಿವೃದ್ಧಿ, ಜಲಾನಯನ ಪ್ರದೇಶಗಳ ಆಯೋಜನೆ (watershed planning) ಹಾಗೂ ಜಲಮೂಲಗಳ ರಕ್ಷಣೆ ಇವುಗಳಿಗಾಗಿ ಹವಾಮಾನ ಬದಲಾವಣೆಯ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಬೇಕು
  17. ಮನರೇಗಾ ಕೂಲಿಯನ್ನು 600 ರೂಪಾಯಿಗಳಿಗೆ ಹೆಚ್ಚಿಸಿ ಯೋಚನೆಯನ್ನು ಜಲಾನಯನ ಅಭಿವೃದ್ಧಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಚಟುವಟಿಕೆಗಳಿಗೆ ವಿಸ್ತರಿಸಬೇಕು.
  18. ನಾಲ್ಕು ಕಾರ್ಮಿಕ ಬಿಲ್ ಗಳನ್ನು ರದ್ದುಗೊಳಿಸಬೇಕು ಮತ್ತು ಸಾರ್ವಜನಿಕ ವಲಯದ ಖಾಸಗಿಕರಣ ಮತ್ತು ಕಾಂಟಾಕ್ಟ್ ಪದ್ಧತಿಯನ್ನು ನಿಲ್ಲಿಸಬೇಕು.
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X