ಜೀವನದಿಯಾಗಿರುವ ಭೀಮಾ ನದಿಯನ್ನು ಕಲುಷಿತ ಮಾಡದಂತೆ ಆಗ್ರಹಿಸಿ ಯುವ ಮುನ್ನಡೆ ತಂಡ ಮತ್ತು ಸಂವಾದ ಸಂಸ್ಥೆಯ ಸಹಯೋಗದಲ್ಲಿ ಕಲಬುರಗಿಯಲ್ಲಿ ಕಾಲ್ನಡಿಗೆಯ ಜಾಥಾ ನಡೆಸಲಾಯಿತು.
ಪರಿಸರ ರಕ್ಷಣೆಗಾಗಿ ಯುವಧ್ವನಿ ನಮ್ಮ ನಡೆ, ಭೀಮಾ ನದಿಯ ಕಡೆ ಎಂಬ ಶೀರ್ಷಿಕೆಯಡಿಯಲ್ಲಿ ಯುವ ಮುನ್ನಡೆ ತಂಡ ಮತ್ತು ಸಂವಾದ ಸಂಸ್ಥೆಯ ಸಹಯೋಗದಲ್ಲಿ ಕಲಬುರಗಿ ಜಗತ್ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆಯ ಜಾಥಾದ ಮೂಲಕ ತೆರಳಿ, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಯುವ ಮುನ್ನಡೆ ತಂಡದ ಅಸ್ಮಿತಾ, ಕಲಬುರಗಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ ಮರಗಳ ಸಂಖ್ಯೆ ಕಡಿಮೆ ಇದ್ದ ಕಾರಣಕ್ಕೂ ಸಮಯಕ್ಕೆ ಸರಿಯಾಗಿ ಮಳೆಯಾಗದೆ ಬೇಸಿಗೆ ಕಾಲದಲ್ಲಿ ಕಲಬುರಗಿ ಜನರು ಮತ್ತು ಪ್ರಾಣಿ ಪಕ್ಷಿಗಳು ಹನಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಭೀಮಾ ನದಿಗೆ ಸಂಬಂಧಿಸಿದಂತೆ ಮರಳು ಗಣಿಗಾರಿಕೆ, ನದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದು ಹಾಗೂ ನಗರ ಮತ್ತು ಗ್ರಾಮಗಳ ಚರಂಡಿ ನೀರನ್ನು ನದಿಗೆ ಬಿಡುವುದರಿಂದ ಸಂಪೂರ್ಣವಾಗಿ ಕಲುಷಿತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವ ಮುನ್ನಡೆ ತಂಡದ ರಾಜೇಶ್ರೀ ಮಾತನಾಡಿ, “ನದಿ ಎಂದರೆ ಬರೀ ನೀರಲ್ಲ. ಸಕಲ ಜೀವಗಳಿಗೂ ಪರಿಸರ ಒಂದು ಜೀವರಕ್ಷೆಯಾಗಿದೆ. ಹಾಗಾಗಿ ನದಿಯನ್ನು ಸಂರಕ್ಷಿಸುವ, ಕಾಳಜಿ ಮಾಡುವ ಮತ್ತು ಸುಸ್ಥಿರವಾಗಿ ಮತ್ತು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂವಾದ ಯುವ ಸಂಪನ್ಮೂಲ ಕೇಂದ್ರ, ಯುವ ಮುನ್ನಡೆ ತಂಡ ಹಾಗೂ ಪರಿಸರವಾದಿಗಳು ಸೇರಿಕೊಂಡು ಭೀಮಾ ನದಿ ಉಳಿವಿಗಾಗಿ ಮತ್ತು ಪರಿಸರ ಉಳಿಸುವ ಕಾಳಜಿಯಿಂದಾಗಿ ಪಾದಯಾತ್ರೆಯ ಮೂಲಕ ಪರಿಸರ, ಜಲಮಾಲಿನ್ಯ ತಡೆಯಲು ಅಭಿಯಾನವನ್ನು ಕೈಗೊಂಡಿದ್ದೇವೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಕಲಬುರಗಿ ಜನರು ಕೈ ಜೋಡಿಸಬೇಕು” ಎಂದು ತಿಳಿಸಿದರು.
ಜಾಗೃತಿ ಜಾಥಾದಲ್ಲಿ, ಕಲಬುರಗಿ ಜಿಲ್ಲೆಗೆ ಭೀಮಾ ನದಿಯೇ ಜೀವಜಲವಾಗಿದೆ. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರೀಕರಣದಿಂದಾಗಿ ನದಿಯು ಪ್ರತಿ ವರ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯುತ್ತಿದೆ ಎಂದು ಯುವಜನರು ಕಳವಳ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ ಕೇಂದ್ರೀಯ ವಿವಿ ವಿವಾದ: ಆರ್ಎಸ್ಎಸ್ನ ಧ್ಯೇಯಗೀತೆ ಹಾಡಿದರು, ಬೆದರಿಕೆ ಒಡ್ಡಿದರು
ಸುರಿಯುವ ಮಳೆ ಹನಿಗಳ ಜೊತೆಗೆ ಯುವಜನತೆಯ ತಂಡವು ಕಲಬುರಗಿ ನಗರದ ಜಗತ್ ಸರ್ಕಲ್ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪರಿಸರ ಜಾಗೃತಿ ಹಾಡುಗಳನ್ನು ಹಾಡುತ್ತಾ, ಪರಿಸರ ರಕ್ಷಣೆ ಘೋಷಣೆಗಳನ್ನು ಕೂಗುತ್ತಾ ಹೆಜ್ಜೆಯನ್ನು ಹಾಕಿದರು.
ಈ ಜಾಥಾದಲ್ಲಿ ಅನುರಾಗ, ನೀತಾ, ನಿಖೀತಾ, ವಿಜಯ ಕುಮಾರ್, ಶಾಂತು, ತಾಯಮ್ಮ, ಭಾಗ್ಯಶ್ರೀ, ರಾಧಿಕಾ, ಬೀರಲಿಂಗ, ವಿಜಯ ಮತ್ತಿತರು ಉಪಸ್ಥಿತರಿದ್ದರು.
ವರದಿ: ಪ್ರಿಯಾಂಕ ಮಾವಿನರ್, ಸಿಟಿಜನ್ ಜರ್ನಲಿಸ್ಟ್
