ರಾಜ್ಯದ 40ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕಲಬುರಗಿ ನಗರದಲ್ಲಿ ಜನವರಿ 17, 18 ಮತ್ತು 19ರಂದು ಮೂರು ದಿನಗಳ ಕಾಲ ಭಾರತದ ಬಹುತ್ವ ಸಂಸ್ಕೃತಿ ಪ್ರತಿಪಾದನೆ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ-2025ರ ಕಲಬುರಗಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವದ ಸಂಚಾಲಕಿ ಮೀನಾಕ್ಷಿ ಬಾಳಿ ತಿಳಿಸಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಜ. 17 ರಂದು ಬೆಳಗ್ಗೆ 10.30ಕ್ಕೆ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಾತೋಶ್ರೀ ದ್ರಾಕ್ಷಾಯಿಣಿ ಶರಣಬಸಪ್ಪ ಅಪ್ಪ ಅವರು ವಾಹನ ಜಾಥಾಕ್ಕೇ ಚಾಲನೆ ನೀಡಲಿದ್ದಾರೆ. ಈ ವೇಳೆ ನಿವೃತ್ತ ಕುಲಪತಿ ಪ್ರೊ.ಸಬೀಹಾ ಭೂಮಿಗೌಡ ಮತ್ತಿತರರು ಉಪಸ್ಥಿತರಿರಲಿದ್ದಾರೆ. ಶರಣಬಸವೇಶ್ವರ ದೇವಸ್ಥಾನದಿಂದ ಆರಂಭವಾಗುವ ಜಾಥಾವು ಸೆಂಟ್ ಮೇರಿ ಚರ್ಚ್ ಮಾರ್ಗವಾಗಿ ಸಾಗಿ ಸರ್ದಾರ ವಲ್ಲಭಾಯಿ ಪಟೇಲ್ ಮಾರ್ಗದಿಂದ ಜಗತ್ ವೃತದಿಂದ ಹಾಯ್ದು ಖ್ವಾಜಾ ಬಂದೇನವಾಜ್ ದರ್ಗಾದಲ್ಲಿ ಮುಕ್ತಾಯವಾಗಲಿದೆ.
ಜ.18 ರಂದು ಬೆ.10 ಗಂಟೆಯಿಂದ ನಗರದ ಪಂಡಿತ್ ರಂಗಮಂದರಿರದಲ್ಲಿ ‘ಭಾವೈಕ್ಯದ ಸಮನ್ವಯ ಗಾಯನ ಗಮಲು’ ಘೋಷಣೆಯಡಿ ದಿನವಿಡೀ ತತ್ವಪದ, ಸೂಫಿಪದ, ವಚನ ಗಾಯನ ಮತ್ತು ಖವ್ವಾಲಿ ಕಾರ್ಯಕ್ರಮಗಳು ನಡೆಯಲಿವೆ.
ಕೊನೆ ಜ.19 ರಂದು ಬೆ.10 ರಿಂದ ಕನ್ನಡ ಭವನದಿಂದ ಮೆರವಣಿಗೆ ನಡೆಸಿ ಜಗತ್ ವೃತದಲ್ಲಿ ಸೌಹಾರ್ದತೆಯ ಉತ್ಸವದ ಬಹಿರಂಗ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬೆಂಗಳೂರು, ಮಂಗಳೂರು, ಮಂಡ್ಯ, ಕೋಲಾರ ಸೇರಿದಂತೆ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ʼಕಲಬುರಗಿಯಲ್ಲಿ ಇತ್ತೀಚೆಗೆ ಕೋಮು ದಳ್ಳುರಿ ಹೆಚ್ಚಾಗುತ್ತಿದೆ, ನವಯುವಕರಲ್ಲಿ ಕೋಮು ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಕೆಲವರು ಭಾರತೀಯ ಸಂಸ್ಕೃತಿ ಎಂದರೆ ಒಂದೇ ಜನಾಂಗದ ಸಂಸ್ಕೃತಿ ಎಂದು ಬಿಂಬಿಸಲು ಹೊರಟಿದ್ದಾರೆ, ಭಾವೈಕ್ಯತೆಯ ಭಾರತದಲ್ಲಿ ಇಂತಹವುಗಳಿಗೆ ನೆಲೆ ಇಲ್ಲ. ಇದು ಸೂಫಿ, ಸಂತರ ನಾಡಾಗಿದೆ. ನಮ್ಮ ದೇಶ ಬಹುತ್ವ ಸಂಸ್ಕೃತಿಯಿಂದ ಕೂಡಿದೆ, ಹಾಗಾಗಿ ನಾವು ಕಾರ್ಯಕ್ರಮಕ್ಕೆ ಬಹುತ್ವ ಸಂಸ್ಕೃತಿ ಭಾರತೋತ್ಸವ ಎಂದೇ ಹೆಸರಿಟ್ಟಿದ್ದೇವೆʼ ಎಂದರು.
ಈ ಸಮಾವೇಶದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗಳು, ಗದಗದ ಮನಿಪ್ರ ಸಿದ್ದರಾಮ ಶಿವಯೋಗಿಗಳು, ಮಘಚ ಬಸವಲಿಂಗ ಪಟ್ಟದ್ದೇವರು, ಭಾಲ್ಕಿ, ಇಲಕಲ್ ಗುರುಮಹಾಂತ ಸ್ವಾಮಿಗಳು, ಮೈಸೂರಿನ ಜ್ಞಾನಪ್ರಕಾಶ ಸ್ವಾಮಿಗಳು, ಬೈಲೂರು ನಿಜಗುಣಾನಂದ ಸ್ವಾಮಿಗಳು, ಮಾತೆ ಗಂಗಾoಬಿಕೆ ಪಾಟೀಲ, ಖಾದ್ರಿ ಮುಸ್ತಾಫ್, ಮಳಖೇಡ ದರ್ಗಾ ಫಾದರ್ ಲೋಬೋ, ಸೇಂಟ್ ಮೇರಿ ಚರ್ಚ್, ಗುರುಮೀತ್ ಸಿಂಗ್ , ಪೂಜ್ಯ ಜ್ಞಾನಜ್ಯೋತಿ ಭಂತೇಜಿ, ಚೆನ್ನಬಸವ ಸ್ವಾಮಿಜಿ ಸೇರಿದಂತೆ ಮುಂತಾದವರು ಭಾಗವಹಿಸುವುದಲ್ಲದೆ ನೂರಾರು ಚಿಂತಕರು ಈ ಉತ್ಸವಕ್ಕೆ ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಹಾದಿಮನಿ, ಮಹಮ್ಮದ್ ಅಫಜಲ್, ಕಾಶಿನಾಥ್ ಅಂಬಲಗೆ, ಪ್ರಭು ಖಾನಾಪುರೆ, ಧನರಾಜ ತಂಬೋಳೆ, ಮಹಾಂತೇಶ್ ಕೌಲಗಿ ಸೇರಿದಂತೆ ಹಲವರು ಇದ್ದರು.