ವಿಜ್ಞಾನ ಪ್ರತಿಯೊಬ್ಬರ ಜೀವನದ ಅನಿವಾರ್ಯವಾಗಿದ್ದು, ನಿತ್ಯ ಬದುಕಿನಲ್ಲಿ ನಾವು ವಿಜ್ಞಾನವನ್ನು ಅವಲಂಭಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಲಬುರಗಿ ಪಿಡಿಎ ಎಂಜಿನಿಯರ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಸಲಹೆ ನೀಡಿದರು.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ವಿಜ್ಞಾನ ಮಾದರಿ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಜಗತ್ತಿನಲ್ಲಿ ಪ್ರತಿಕ್ಷಣವೂ ಹೊಸ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳು ನಡೆದಿವೆ. ವಿದ್ಯಾರ್ಥಿಗಳು ಪ್ರಶ್ನಿಸುವ, ಚರ್ಚಿಸುವ ಮೂಲಕ ಸುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕು. ವಿಶೇಷವಾಗಿ ಪರಿಸರ ಮತ್ತು ಪ್ರಾಕೃತಿಕ ಸಂಪತ್ತಿನ ಸಂವರ್ಧನೆ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಅಗತ್ಯವಾಗಿದೆ” ಎಂದರು.
ಎ ವಿ ಪಾಟೀಲ ಪದವಿ ಕಾಲೇಜು ಪ್ರಾಂಶುಪಾಲ ಎಸ್ ಎಚ್ ಹೊಸಮನಿ ಮಾತನಾಡಿ, “ನಮ್ಮಲ್ಲಿನ ಮೌಢ್ಯತೆ, ಅಜ್ಞಾನ ಹೋಗಲಾಡಿಸಲು ವೈಚಾರಿಕ ಚಿಂತನೆ ಅವಶ್ಯಕವಾಗಿದೆ. ಸರ್ ಸಿ ವಿ ರಾಮನ್, ಜಗದೀಶ್ಚಂದ್ರ ಬೋಸ್, ಅಬ್ದುಲ್ ಕಲಾಂ ಮುಂತಾದ ಭಾರತೀಯ ವಿಜ್ಞಾನಿಗಳು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿದೆ” ಎಂದರು.
ಸಂಬುದ್ಧ ಪದವಿ ಕಾಲೇಜು ಪ್ರಾಂಶುಪಾಲ ಸಂಜಯ ಎಸ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, “ವೈಚಾರಿಕತೆ ನಮ್ಮ ಮಾನಸಿಕ ಶಕ್ತಿಯಾದರೆ, ವೈಜ್ಞಾನಿಕತೆಯು ನಮ್ಮ ಬದುಕನ್ನು ಪ್ರಗತಿಶೀಲಗೊಳಿಸಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಕಸ ವಿಲೇವಾರಿ ಘಟಕದಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಮಸ್ಯೆ; ಪಾಲಿಕೆ, ಜಿಲ್ಲಾಡಳಿತಕ್ಕಿಲ್ಲ ಕಾಳಜಿ!
ವಿದ್ಯಾರ್ಥಿನಿ ಪ್ರೀಯಾಂಕಾ ಎಸ್ ಪಾಟೀಲ ಅವರು ಸರ್ ಸಿ ವಿ ರಾಮನ್ ಅವರ ವೈಜ್ಞಾನಿಕ ಕೊಡುಗೆ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ತಿನ ತಾಲೂಕಧ್ಯಕ್ಷ ಎಲ್ ಎಸ್ ಬೀದಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಧ್ಯಾಪಕರಾದ ಶರಣಬಸಪ್ಪ ಪರಾಣೆ, ಬಾಬುರಾವ ಚಿಕಣಿ, ಜಗದೀಶ ಮುಲಗೆ, ಮಹಾದೇವಿ ಮುನ್ನೋಳ್ಳಿ, ಶಹಗುಫ್ತಾ ನಾಜ್, ವಿಜಯಲಕ್ಷ್ಮಿ, ಪಟ್ನೆ, ಸುಖಮುನಿ ಪಾಟೀಲ ಇದ್ದರು.
ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ರಂಗೋಲಿ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.