ಶೈಕ್ಷಣಿಕ ಸುಧಾರಣಾ ಸಮಿತಿಯ ನೇತೃತ್ವವನ್ನು ಸಂಘ ಪರಿವಾರ ಹಿನ್ನೆಲೆಯ ಗುರುರಾಜ ಕರಜಗಿಯವರನ್ನು ನೇಮಕ ಮಾಡಿದ ಸರಕಾರದ ಕ್ರಮ ಖಂಡನೀಯ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಈ ಸಂಬಂಧ ಹೇಳಿಕೆ ನೀಡಿರುವ ಅವರು, “ಸರ್ಕಾರದ ಇಂತಹ ನಡೆ ನೋಡಿದಾಗ ಜನರಿಗೆ ಈಗ ಆಡಳಿತದಲ್ಲಿರುವುದು ಕಾಂಗ್ರೆಸ್ ಸರಕಾರವೋ ಅಥವಾ ಬಿಜೆಪಿ ಸರಕಾರವೋ ಎಂಬ ಅನುಮಾನ ಮೂಡುವಂತಿದೆ” ಎಂದರು.
“ಶಿಕ್ಷಣದ ಸುಧಾರಣಾ ಸಮಿತಿಯಂತಹ ಮಹತ್ವದ ಹುದ್ದೆಗಳಿಗೆ ನೇಮಕ ಮಾಡುವಾಗ ಅವರ ಹಿನ್ನೆಲೆ ಅರಿಯುವಂತಹ ವ್ಯವಧಾನ ಸರಕಾರಕ್ಕೆ ಇಲ್ಲದಾಯಿತೇ? ಇಂತಹವರ ನೇಮಕಾತಿಗೆ ಶಿಫಾರಸು ಮಾಡುವವರು ಬಗ್ಗೆಯೂ ಜನರಿಗೆ ಸಂಶಯವಿದೆ” ಎಂದು ಅನುಮಾನಿಸಿದರು.
“ಶಿಕ್ಷಣ ಕ್ಷೇತ್ರವನ್ನು ಶ್ರೀಮಂತಗೊಳಿಸುವುದು ಬಿಟ್ಟು ಹಾಳು ಮಾಡಲು ಅವಕಾಶ ಮಾಡಿಕೊಡುವ ಸರಕಾರದ ನಿರ್ಧಾರವನ್ನು ವೆಲ್ಪೇರ್ ಪಾರ್ಟಿ ತೀವ್ರವಾಗಿ ಖಂಡಿಸುತ್ತಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹಳೆಬೀಡು | ‘ಬಿಗ್ಬಾಸ್’ನಿಂದ ಸಮಾಜದ ಸಾಮರಸ್ಯ ಹದಗೆಡುತ್ತಿದೆ: ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ
“ಸರಕಾರ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಕನ್ನಡ ನಾಡಿನಲ್ಲಿ ಆ ಹುದ್ದೆಗೆ ಅರ್ಹರಾದ ಹಲವಾರು ಮಂದಿಯಿದ್ದರೂ ಅತ್ತ ಗಮನ ಹರಿಸದೆ ಸಂಘಪರಿವಾರ ಹಿನ್ನೆಲೆಯ ವ್ಯಕ್ತಿಗಳನ್ನು ತಂದು ಕೂರಿಸುವ ಉದ್ದೇಶವಾದರೂ ಏನು ಎಂದು ಮುಬೀನ್ ಅಹ್ಮದ್ ಅವರು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ.
