ಕೇಂದ್ರ ಸರ್ಕಾರವು ಇತ್ತೀಚೆಗೆ ಮಂಡಿಸಿರುವ ಬಜೆಟ್ ಜನವಿರೋಧಿಯಾದದ್ದು ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಯುವಜನ ಸೇವಾ ಸಂಘ (KRRKS) ಕರ್ನಾಟಕ ರಾಜ್ಯ ಸಮಿತಿ, ಕಲಬುರಗಿ ವತಿಯಿಂದ ಕಲಬುರಗಿ ಸರ್ದಾರ್ ವಲ್ಲಾಭಾಯಿ ವೃತ್ತದಿಂದ ರೈಲ್ವೆ ನಿಲ್ದಾಣದ ವರಿಗೆ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ ಮಾರುತಿ ಮಾನ್ಪಡೆ ಮಾತನಾಡಿ, “ನಿರ್ಮಲಾ ಸೀತಾರಾಂ ಅವರು ಮಂಡಿಸಿರುವ ಬಜೆಟ್ ದೇಶದ ಬಹುಸಂಖ್ಯಾತ ಜನರನ್ನು ಕಡೆಗಣಿಸಿ ಬೆರಳೆಣಿಕೆಯಷ್ಟು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ತೋರಿಕೆಗಾಗಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಹೊರತುಪಡಿಸಿದರೆ ಎಲ್ಲ ವಲಯದ ಜನರಿಗೆ ನಿರಾಶದಾಯಕ ಬಜೆಟ್ ಆಗಿದೆ” ಎಂದು ಕಿಡಿಕಾರಿದರು.
ಆರ್ಥಿಕ ಸಮೀಕ್ಷೆ ಕಳೆದ ಐದು ವರ್ಷಗಳಲ್ಲಿ ಗಳಿಕೆಯಲ್ಲಿ ಇಳಿಕೆಯಾಗಿದೆ ಎಂದು ಎತ್ತಿ ತೋರಿಸುವ ಮೂಲಕ ಭಾರತದ ಶ್ರಮಿಕರ ಹತಾಶ ಸ್ಥಿತಿಯನ್ನು ತೋರಿಸುತ್ತಿರುವಾಗ, ಈ ಬಾರಿಯ ಕೇಂದ್ರ ಬಿಜೆಪಿ ಸರಕಾರದ ಬಜೆಟ್ ಶ್ರೀಮಂತರಿಗೆ ರಿಯಾಯಿತಿಗಳನ್ನು ನೀಡುತ್ತಲೇ ಸರ್ಕಾರಿ ವೆಚ್ಚಗಳನ್ನು ಕಡಿತಗೊಳಿಸುವತ್ತ ಒತ್ತು ನೀಡಿ ಭಾರತದಲ್ಲಿನ ಬೃಹತ್ ಅಸಮಾನತೆಗಳನ್ನು ಮತ್ತಷ್ಟು ಉಲ್ಬಣಗೊಳಸುತ್ತದೆ. ಶ್ರೀಮಂತರು ಮತ್ತು ದೊಡ್ಡ ಕಾರ್ಪೊರೇಟ್ಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿ ಸಂಪನ್ಮೂಲಗಳನ್ನು ಸಂಗ್ರಹಿಸುವ ಬದಲು, ಮತ್ತು ಉದ್ಯೋಗ ಸೃಷ್ಟಿಸಲು ನಮ್ಮ ಜನರಿಗೆ ಕನಿಷ್ಠ ವೇತನವನ್ನು ಖಚಿತಪಡಿಸಲು ಸಹಾಯ ಮಾಡುವ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ ಬದಲು, ತದ್ವಿರುದ್ಧ ಕ್ರಮಗಳನ್ನೇ ಈ ಸರಕಾರ ತೆಗೆದುಕೊಂಡಿದೆ ಎಂದು ಹೇಳಿದರು.
ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ, ಸಾರ್ವಜನಿಕ ಆಸ್ತಿಗಳು ಮತ್ತು ಸಾರ್ವಜನಿಕ ವೆಚ್ಚವನ್ನು ಕೂಡ ಖಾಸಗಿಯವರ ಸೇವೆಗೆ ಅವಕಾಶ ನೀಡಿ ಶ್ರೀಮಂತರು ಇನ್ನಷ್ಟು ಹೆಚ್ಚಿನ ಸಂಪತ್ತು ಸಂಗ್ರಹಣೆಯನ್ನು ಮಾಡಲು ಈ ಬಜೆಟ್ ಅನುವು ಮಾಡಿಕೊಡುತ್ತಿದೆ. ಈ ಬಜೆಟ್ನಲ್ಲಿ ಸರ್ಕಾರವು ವಿಮಾ ವಲಯದಲ್ಲಿ 100 ಶೇ. ಎಫ್ಡಿಐ ಗೆ ಅವಕಾಶ ಮತ್ತು ವಿದ್ಯುತ್ ವಲಯದ ಖಾಸಗೀಕರಣವನ್ನು ಪ್ರಸ್ತಾಪಿಸುತ್ತದೆ. ಆದ್ದರಿಂದ ಇದು ಶ್ರೀಮಂತರಿಂದ ಶ್ರೀಮಂತರಿಗಾಗಿ ಬಜೆಟ್ ಆಗಿದೆ ಎಂದು ಆರೋಪಿಸಿದರು.
“ಕಳೆದ ವರ್ಷದಲ್ಲಿ ವಾಸ್ತವವಾಗಿ ಬಜೆಟ್ ಭರವಸೆ ನೀಡಿದ್ದಕ್ಕಿಂತ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಕಡಿಮೆ ಖರ್ಚು ಮಾಡಿದೆ ಎಂದು ಬಜೆಟ್ ಕಾಗದಗಳು ಬಹಿರಂಗಪಡಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರಕಾರದ ಹಿಂದಿನ ದಾಖಲೆಯನ್ನು ನೋಡಿದರೆ, ಈ ಬಜೆಟಿನಲ್ಲಿ ಮಾಡಿರುವ ಅಸಮರ್ಪಕ ಹಂಚಿಕೆಗಳನ್ನು ಕೂಡ ಗಂಭೀರವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಏಕೆಂದರೆ ಸರ್ಕಾರವು ಬಜೆಟಿನಲ್ಲಿ ತಾನು ಭರವಸೆ ನೀಡಿದ ಮೊತ್ತವನ್ನು ಕೂಡ ಖರ್ಚು ಮಾಡಿರುವುದಿಲ್ಲ” ಎಂದರು.

“ಕಳೆದ ವರ್ಷದಲ್ಲಿ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ವರ್ಗಾವಣೆಗಳಲ್ಲಿ ಬಜೆಟ್ನಲ್ಲಿ ನಿಗದಿಪಡಿಸಿದ ಅಂಕಿಅಂಶಗಳಿಗೆ ಹೋಲಿಸಿದರೆ 1.12,000 ಕೋಟಿ ರೂ. ಕಡಿತ ಮಾಡಿದೆ- ಕೇಂದ್ರ ಪ್ರಾಯೋಜಿತ ಸ್ತ್ರೀಮುಗಳಿಗೆ 90,000 ಕೋಟಿ ರೂ.ಗಳಷ್ಟು ಮತ್ತು ಹಣಕಾಸು ಆಯೋಗ ಮತ್ತು ರಾಜ್ಯಗಳಿಗೆ ಇತರ ವರ್ಗಾವಣೆಗಳನ್ನು 22,000 ಕೋಟಿ ರೂ.ಗಳಷ್ಟು ಕಡಿಮೆ ಮಾಡಿದೆ. ಹೀಗಾಗಿ ಬಜೆಟ್ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುವ ಮತ್ತು ರಾಜ್ಯಗಳ ಹಕ್ಕುಗಳ ಮೇಲೆ ದಾಳಿ ನಡೆಸುವ ನಿಲುವನ್ನು ಬಿಂಬಿಸುತ್ತದೆ.
2024-25 ರಲ್ಲಿನ ಕಡಿತಗಳು ಬಂಡವಾಳ ವೆಚ್ಚಗಳ ಮೇಲೂ ಪರಿಣಾಮ ಬೀರುತ್ತವೆ-ಬಜೆಟ್ನಲ್ಲಿ ನಿಗದಿಪಡಿಸಿದ್ದಕ್ಕಿಂತ ಸುಮಾರು 93,000 ಕೋಟಿ ರೂ.ಗಳಷ್ಟು ಕಡಿಮೆ ಅಹಾರ ಸಬ್ಸಿಡಿಗಳು, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ನಗರಾಭಿವೃದ್ಧಿ – ಇವೆಲ್ಲವೂ ಈ ಕಡಿತವನ್ನು ಎದಿರುಸುತ್ತಿವೆ” ಎಂದು ತಿಳಿಸಿದರು.
“ಕಳೆದ ಬಜೆಟ್ನಲ್ಲಿ ಆಹಾರಕ್ಕಾಗಿ ಹಂಚಿಕೆ ರೂ. 2.05 ಲಕ್ಷ ಕೋಟಿಗಳಷ್ಟಿತ್ತು ಆದರೆ ಕಳೆದ ವರ್ಷದ ವೆಚ್ಚದ ಪರಿಷ್ಕೃತ ಅಂದಾಜಿನಲ್ಲಿ 7830 ಕೋಟಿಗಳಷ್ಟು ಕಡಿಮೆಯಾಗಿದೆ. ಆದರೆ ಈ ಬಜೆಟ್ನಲ್ಲಿ ಪ್ರಸ್ತಾವಿತ ಅಂಕಿ ಅಂಶವು 2.03 ಲಕ್ಷ ಕೋಟಿಗಳಷ್ಟಿದೆ. ಅಂದರೆ ಕಳೆದ ವರ್ಷದ ಬಜೆಟ್ ನಲ್ಲಿ ಒದಗಿಸಿದ್ದಕ್ಕಿಂತ ಕಡಿಮೆಯಾಗಿದೆ. ಅದೇ ರೀತಿ ಶಿಕ್ಷಣದ ವಿಷಯದಲ್ಲಿ ಕಳೆದ ವರ್ಷದ ಬಜೆಟ್ ಹಂಚಿಕೆ ರೂ. 1.26 ಲಕ್ಷ ಕೋಟಿಗಳಷ್ಟಿತ್ತು. ಅದರೆ ಪರಿಷ್ಕೃತ ಅಂದಾಜು ರೂ.11584 ಕೋಟಿ ಕಡಿಮೆ ಖರ್ಚು ಮಾಡಲಾಗಿದೆ ಎಂದು ತೋರಿಸುತ್ತದೆ” ಎಂದು ತಿಳಿಸಿದರು.
“ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ಕಳೆದ ಬಜೆಟಿನ ಅಂದಾಜು ರೂ. 1.5 ಲಕ್ಷ ಕೋಟಿಗಳಷ್ಟಿತ್ತು ಮತ್ತು ಸರ್ಕಾರವು ಪರಿಷ್ಕೃತ ಅಂದಾಜಿನ ಪ್ರಕಾರ ರೂ.10992 ಕೋಟಿಗಳಷ್ಟು ಕಡಿಮೆ ಖರ್ಚು ಮಾಡಿದೆ. ಎಲ್ಪಿಜಿ ಸಬ್ಸಿಡಿಯನ್ನು ಕಳೆದ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ ರೂ.14.7 ಸಾವಿರ ಕೋಟಿಗಳಿಂದ ಈ ವರ್ಷದ ಬಜೆಟ್ ನಲ್ಲಿ 12 ಸಾವಿರ ಕೋಟಿಗಳಿಗೆ ಇಳಿಸಲಾಗಿದೆ.
ಸರ್ಕಾರದ ಬೂಟಾಟಿಕೆಯ ಸಂಕೇತವಾಗಿ, ಗ್ರಾಮೀಣ ಬಡವರಿಗೆ ಜೀವನಾಡಿಯಾಗಿರುವ ಮತ್ತು ಅವರ ಹಕ್ಕಾಗಿರುವ ‘ಮನರೇಗ’ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ಯೋಜನೆಗೆ ನಿಕೃಷ್ಟ ಹಂಚಿಕೆ ಕೊಡಲಾಗಿದೆ. ಬೇಡಿಕೆ ಹೆಚ್ಚಿದ್ದರೂ ಹಂಚಿಕೆ 86,000 ಕೋಟಿ ರೂಪಾಯಿಗಳಲ್ಲಿ ಸ್ಥಗಿತಗೊಂಡಿದೆ. ಇದು ಗ್ರಾಮೀಣ ಬಡವರ ಮೇಲೆ ಕ್ರೂರ ಹೊಡೆತ ಮಾತ್ರವಲ್ಲ, 100 ದಿನಗಳ ಕೆಲಸದ ಕಾನೂನುಬದ್ದ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ, ಕೃಷಿ ಸಂಕಷ್ಟ ಮತ್ತು ರೈತರ ಆತ್ಮಹತ್ಯೆಗಳನ್ನು ಪರಿಹರಿಸುವಲ್ಲಿ ಒಂದು ನಿರ್ಣಾಯಕ ಸಂಗತಿಯಾಗಿರುವ ರೈತರ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಬೇಡಿಕೆಯನ್ನು ಕೂಡ ಸರ್ಕಾರವು ಬದಿಗೆ ತಳ್ಳಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಜೆಟ್ನಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಮಹಿಳೆಯರಿಗಾಗಿ ಖರ್ಚುಗಳ ಬಗ್ಗೆ ಹೇಳಿಕೆಗಳಿವೆ. ಇವು ಮೇಲ್ನೋಟಕ್ಕೇ ಬಜೆಟ್ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತವೆ. 2024-25ರಲ್ಲಿ ಪರಿಶಿಷ್ಟ ಜಾತಿಗಳಿಗೆ ಹಂಚಿಕೆಯು 27,000 ಕೋಟಿ ರೂ.ಗಳ ಕಡಿತವನ್ನು ಎದುರಿಸಿದೆ. ಪರಿಶಿಷ್ಟ ಪಂಗಡಗಳಿಗೆ ಅದೇ ರೀತಿ 17,000 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ,. ಒಟ್ಟು ಖರ್ಚಿನಲ್ಲಿ ಅಂತಹ ವೆಚ್ಚಗಳ ಪಾಲು ಜನಸಂಖ್ಯೆಯಲ್ಲಿ ಈ ಸಾಮಾಜಿಕ ಗುಂಪುಗಳ ಪಾಲುಗಳಿಗೆ ಅನುಗುಣವಾಗಿ ಇರಬೇಕೆಂಬ ಮಾರ್ಗಸೂಚಿಗಳಿದ್ದರೂ ಗಮನಾರ್ಹವಾಗಿ ಕಡಿತಗೊಂಡಿವೆ. 2025-26ರಲ್ಲಿ, ಹಂಚಿಕೆಗಳು ಎಸ್.ಸಿ. ಮತ್ತು ಎಸ್.ಟಿ. ಗಳಿಗೆ ಒಟ್ಟು ವೆಚ್ಚದಲ್ಲಿ ಕ್ರಮವಾಗಿ 3.4% ಮತ್ತು 2.6% ಮಾತ್ರ. ಮಕ್ಕಳ ಕಲ್ಯಾಣಕ್ಕಾಗಿಯೂ ಸಹ ಕಡಿತಗೊಳಿಸಲಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ “ಮಧ್ಯಮ ವರ್ಗಗಳಿಗೆ ಸಹಾಯ ಮಾಡಲಾಗುತ್ತಿದೆ” ಎಂದು ಬಹಳವಾಗಿ ಹೇಳಿಕೊಳ್ಳಲಾಗುತ್ತಿದೆ. ವಾಸ್ತವವಾಗಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿನ ಈ ಬದಲಾವಣೆಗಳಿಂದ ಮಧ್ಯಮ ವರ್ಗಕ್ಕೆ ಸಿಗುವ ಪ್ರಯೋಜನದ ಪ್ರಮಾಣವು ಶ್ರೀಮಂತ ವರ್ಗಕ್ಕೆ -ಭಾರತದ ಜನಸಂಖ್ಯೆಯ ಶೇಕಡಾ 1 ಕ್ಕಿಂತ ಕಡಿಮೆ ಇರುವ ಮಂದಿಗೆ – ಆಗುವ ಪ್ರಯೋಜನಗಳಿಗೆ ಹೋಲಿಸಿದರೆ ಚಿಕ್ಕದಾಗಿರುತ್ತದೆ, ಆದಾಯ ತೆರಿಗೆ ರಿಯಾಯಿತಿಗಳಿಂದಾಗಿ ಸರ್ಕಾರ ಅನುಭವಿಸುವ ರೂ. 1 ಲಕ್ಷ ಕೋಟಿ ನಷ್ಪದಿಂದ ಪ್ರಯೋಜನದ ಸಿಂಹಪಾಲು ಪಡೆಯುವವರು ಈ ಒಂದು ಶೆಕಡಾ ಮಂದಿ. ಇನ್ನೂ ಮುಖ್ಯವಾಗಿ, ಉನ್ನತ ಆದಾಯದ ಸ್ಟ್ರಾಬ್ಗಳಲ್ಲಿ ತೆರಿಗೆ ದರಗಳನ್ನು ಹೆಚ್ಚಿಸಿ. ಇದನ್ನು ಕೆಳ ಮಧ್ಯಮ ವರ್ಗದ ತೆರಿಗೆ ಹೊರೆಯಲ್ಲಿನ ಕಡಿತದೊಂದಿಗೆ ಸರಿಹೊಂದಿಸಬಹುದಾಗಿತ್ತು. ಆದರೆ ಹಾಗೆ ಮಾಡದಿರಲು ಈ ಸರಕಾರ ನಿರ್ಧರಿಸಿದೆ” ಎಂದು ಹೇಳಿದರು.
“2025-26 ರ ಕೇಂದ್ರ ಬಜೆಟ್ ಮೋದಿ ಸರ್ಕಾರದ ದಿವಾಳಿತನವನ್ನು ಬಿಂಬಿಸುತ್ತದೆ ಎಂದಿರುವ ಪೊಲಿಟ್ಬ್ಯುರೊ, ಶ್ರೀಮಂತರು ಮತ್ತು ಕಾರ್ಪೊರೇಟ್ ವಲಯದ ಹಿತಾಸಕ್ತಿಗಳನ್ನು ರಕ್ಷಿಸಲು ಅದು ಎಷ್ಟು ಕಟಿಬದ್ಧವಾಗಿದೆಯೆಂದರೆ ಅದು ಅರ್ಥವ್ಯವಸ್ಥೆಯ ಮಂದಗತಿಯನ್ನು ಪರಿಹರಿಸಲು ಯಾವುದೇ ನೈಜ ನೀತಿಯನ್ನು ರೂಪಿಸಲು ಸಹ ಅಸಮರ್ಥವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಕಟುವಾಗಿ ಟೀಕಿಸಿದರು.
ಬಿಕ್ಕಟ್ಟಿನ ಪ್ರಮಾಣವಾಗಲಿ, ಅದರ ಸ್ವರೂಪವಾಗಲಿ ಸರ್ಕಾರ ಮತ್ತು ಅದರ ಹಣಕಾಸು ಸಚಿವರಿಗೆ ಗೋಚರಿಸುವಂತೆ ಕಾಣುತ್ತಿಲ್ಲ – ಅವರು ಅರ್ಥವ್ಯವಸ್ಥೆಯ ಉಸ್ತುವಾರಿಯನ್ನು ತಾವು ಎಷ್ಟೊಂದು ಮಹಾನ್ ರೀತಿಯಲ್ಲಿ ನಡೆಸುತ್ತಿದ್ದೇವೆ ಎಂಬ ಭ್ರಮೆಯಲ್ಲೇ ಮುಂದುವರಿಯುತ್ತಿದ್ದಾರೆ. ಅವರ ಉಸ್ತುವಾರಿ ಎಷ್ಟು ಮಹಾನ್ ಆಗಿದೆ ಎಂದರೆ, ಆರ್ಥಿಕ ಸಮೀಕ್ಷೆ ತೋರಿಸಿರುವಂತೆ, ಭಾರತದಲ್ಲಿ ಕೂಲಿ-ಸಂಬಳಗಳು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಕೆಳಗೇ ಇವೆ. ಮತ್ತು ಬೇಡಿಕೆಯ ನಿರ್ಬಂಧಗಳಿಂದಾಗಿ ಬೆಳವಣಿಗೆಯೂ ನಿಧಾನವಾಗುತ್ತಿದೆ ಎಂದು ಗೇಲಿ ಮಾಡಿರುವ ಸಿಪಿಐ(ಎಂ) ಖರ್ಚುಗಳನ್ನು ಸಂಕುಚಿತಗೊಳಿಸುವುದು ಮತ್ತು ಶ್ರೀಮಂತರ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವುದು ಮತ್ತು ಖಾಸಗಿ ಕಾರ್ಪೊರೇಟ್ ಮತ್ತು ವಿದೇಶಿ ಹೂಡಿಕೆದಾರರ ‘ಗೂಳಿ ಉತ್ಸಾಹವನ್ನು ಹರಿಯ’ ಬಿಡಲೆಂಬ ಉದ್ದೇಶದ ಇತರ ಕ್ರಮಗಳು ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಹೂಡಿಕೆ ಮತ್ತು ಉದ್ಯೋಗ ಬೆಳವಣಿಗೆಯನ್ನು ಉತ್ಪಾದಿಸಲು ಕೆಲಸ ಮಾಡಿಲ್ಲ ಎಂಬುದಕ್ಕೆ ಈಗ ಸಾಕಷ್ಟು ಪುರಾವೆಗಳಿವೆ ಎನ್ನುತ್ತ 2025-26ರ ಕೇಂದ್ರ ಬಜೆಟ್ ಹೀನಾಯವಾಗಿ ವಿಫಲವಾಗಿದೆ” ಎಂದು ತಿಳಿಸಿದರು.
“ಮೋದಿ ಸರಕಾರವು ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಪಡೆದು ಅತ್ಯಂತ ಕಡಿಮೆ ಆರ್ಥಿಕ ನೆರವು ನೀಡಿ ಕನ್ನಡಿಗರ ತೆರಿಗೆ ಹಣವನ್ನು ಉತ್ತರಪ್ರದೇಶ, ಬಿಹಾರ ಮತ್ತು ತನಗೆ ಬೇಕಾದ ಸ್ನೇಹಿತರ ರಾಜ್ಯಗಳಿಗೆ ನೀಡುವ ಮೂಲಕ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ. ಯಾರದೋ ದುಡಿಮೆ ಯಾರಿಗೋ ಫಲ ಎಂಬಂತಾಗಿದೆ. ನಮ್ಮ ದುಡಿಮೆಯ ದುಡ್ಡು ಪರರ ಪಾಲು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ, ಯಾದಗಿರಿ ರೈಲ್ವೆ ಬೋಗಿ ಕಾರ್ಖಾನೆ ವಿಸ್ತರಣೆ, ಕಲಬುರಗಿಯಿಂದ ಬೆಂಗಳೂರು ನವದೆಹಲಿ ಮಧ್ಯೆ ವಿಮಾನ ಸೇವೆ, ಕಲಬುರಗಿಯಲ್ಲಿ ನಿಮಾನ್ಸ್ ಆಸ್ಪತ್ರೆ ಸ್ಥಾಪನೆ, ಕಲಬುರಗಿ ಬೈಪಾಸ್ ರಸ್ತೆ, ಯಾದಗಿರಿ ರೈಲ್ವೆ ಮೇಲ್ಲೇತುವೆಗಳ ನಿರ್ಮಾಣ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ವಿಸ್ತರಣೆ ಎಂಬಿತ್ಯಾದಿ ಕಲ್ಯಾಣ ಕರ್ನಾಟಕಕ್ಕೆ ನೀಡಿದ ಘೋಷಣೆಗಳು ಘೋಷಣೆಯಾಗಿಯೇ ಉಳಿದಿದೆ. ಘೋಷಿಸಿರುವ ಯೋಜನೆಗಳನ್ನು ಪೂರ್ತಿ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದರು.
ಈ ಜನವಿರೋಧಿ ಬಜೆಟ್ ನಾವು ಉಗ್ರವಾಗಿ ಖಂಡಿಸುತ್ತೇವೆ. ಬಿ.ಜೆ.ಪಿ ಸರಕಾರಕ್ಕೆ ನಿಜವಾಗಿಯೂ ಜನಪರ ಕಾಳಜಿ ಇದ್ದರೆ ಈ ಕೂಡಲೇ ಕರ್ನಾಟಕಕ್ಕೆ ಹಾಗೂ ದೇಶದ ಜನರಿಗೆ ಅನುಕೂಲವಾಗುವ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಇದನ್ನು ಓದಿದ್ದೀರಾ? ದೆಹಲಿ ಸೋತರೂ ಎಎಪಿ ನಾಯಕಿ ಆತಿಶಿ ಡಾನ್ಸ್ – ಸಂಭ್ರಮಾಚರಣೆ; ವ್ಯಾಪಕ ಟೀಕೆ
ಈ ಸಂದರ್ಭದಲ್ಲಿ ಅಧ್ಯಕ್ಷ ಚಂದು ಜಾಧವ, ಶಾಂತಪ್ಪ ಪಾಟೀಲ್ ಗೌರವ, ಸೋಮಶೇಖರ ಸಿಂಗೆ, ಪ್ರಧಾನ ಕಾರ್ಯದರ್ಶಿ ಸುನೀಲ ಮಾರುತಿ ಮಾನ್ಪಡೆ, ಉಪಾಧ್ಯಕ್ಷ ಮೈಲಾರಿ ದೊಡ್ಡನಿ, ಸಹ ಕಾರ್ಯದರ್ಶಿ ಸಂಗಮೇಶ ಕಲಬುರಗಿ, ಉಪಾಧ್ಯಕ್ಷ ವಿಠಲ ಪೂಜಾರಿ, ಸಹ ಕಾರ್ಯದರ್ಶಿ ಜೈಭೀಮ ದೊಡ್ಡಮನಿ ಇನ್ನಿತರರು ಉಪಸ್ಥಿತರಿದ್ದರು.