ಕಾಸರಗೋಡು ಜಿಲ್ಲೆಯಲ್ಲಿ ರೈಲು ಹಳಿಯಲ್ಲಿ ಕಲ್ಲು, ಕ್ಲೋಸೆಟ್ ತುಂಡು ಇರಿಸಿ ಬುಡಮೇಲು ಮಾಡುವ ಕೃತ್ಯವೊಂದು ಕಂಡುಬಂದಿದ್ದು, ಕೂಡಲೇ ಅದನ್ನು ತಪ್ಪಿಸಲಾಗಿದ್ದು, ದೊಡ್ಡದೊಂದು ಅನಾಹುತ ತಪ್ಪಿದೆ.
ರೈಲು ಹಳಿಯಲ್ಲಿ ಕಲ್ಲು ಹಾಗೂ ಕ್ಲೋಸೆಟ್ನ ತುಂಡುಗಳನ್ನು ಇರಿಸಿದ ಘಟನೆ ಕಾಸರಗೋಡಿನ ಕೋಟಿಕುಲಂನ ಚೆಂಬರಿಕ ಸುರಂಗ ಸಮೀಪ ಬೆಳಕಿಗೆ ಬಂದಿತ್ತು.
ಕಾಸರಗೋಡಿನಿಂದ ಹೊರಟ ಕೊಯಮತ್ತೂರು – ಮಂಗಳೂರು ಇಂಟರ್ ಸಿಟಿಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಇದನ್ನು ಗಮನಿಸಿದ್ದು, ರೈಲು ಹಾದು ಹೋಗುವ ಸಂದರ್ಭದಲ್ಲಿ ಏನೋ ಬಡಿದ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಕಾಸರಗೋಡು ರೈಲ್ವೆ ಅಧಿಕಾರಿಗೆ ಮಾಹಿತಿ ನೀಡಿದ್ದರು. ಬಳಿಕ ರೈಲ್ವೆ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದಾಗ ರೈಲು ಹಳಿ ಬಳಿ ಕಲ್ಲು ಹಾಗೂ ತುಂಡಾದ ಕ್ಲೋಸೆಟ್ ಪತ್ತೆಯಾಗಿದೆ.
ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಸಮೀಪದ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಲಾಗುತ್ತಿದೆ. ಕಣ್ಣೂರು-ಕಾಸರಗೋಡು ನಡುವೆ ಕೆಲ ದಿನಗಳಿಂದ ರೈಲುಗಳ ಮೇಲೆ ಕಲ್ಲೆಸೆದ ಕೆಲವೊಂದು ಘಟನೆಗಳು ನಡೆದಿದ್ದು, ಇದರ ಬಳಿಕ ಇದೀಗ ರೈಲು ಹಳಿಯಲ್ಲಿ ನಡೆದಿರುವ ಇಂತಹ ಕೃತ್ಯಗಳು ಸಂಶಯಕ್ಕೆ ಕಾರಣವಾಗಿವೆ.
ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ರೈಲುಗಳಿಗೆ ಕಲ್ಲು ತೂರುವುದು, ರೈಲು ಹಳಿಯಲ್ಲಿ ಅನಾಹುತವಾಗುವಂತೆ ಕಲ್ಲುಗಳನ್ನಿಡುವಂಥ ಇಂತಹ ಕೃತ್ಯಗಳು ಕೆಲವು ವರ್ಷಗಳಿಂದಲೇ ನಡೆಯುತ್ತಿವೆ.
ಒಂಬತ್ತು ವರ್ಷಗಳ ಹಿಂದೆ ಮಂಜೇಶ್ವರ ರೈಲು ನಿಲ್ದಾಣದ ಹಳಿಯಲ್ಲಿ ಕಬ್ಬಿಣದ ತುಂಡನ್ನಿರಿಸಿ ರೈಲನ್ನು ಬುಡಮೇಲುಗೊಳಿಸಲು ಪ್ರಯತ್ನಿಸಿದ ಘಟನೆ ನಡೆದಿತ್ತು. ವಿದ್ಯುತ್ ಸ್ಥಗಿತಗೊಂಡ ಸಂದರ್ಭ ಹಳಿಯಲ್ಲಿ 35 ಕಿಲೋ ಭಾರ ಹಾಗೂ 20 ಸೆಂಟಿ ಮೀಟರ್ ಉದ್ದ ಇರುವ ಕಬ್ಬಿಣದ ತುಂಡನ್ನು ಇರಿಸಿ ರೈಲು ಹಳಿ ವಿಧ್ವಂಸಗೊಳಿಸುವ ಪ್ರಯತ್ನ ನಡೆದಿತ್ತು. ಆ ದಾರಿಯಲ್ಲಿ ಆಗಮಿಸಿದ ನಾಗರಿಕರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಹುದೊಡ್ಡ ಅನಾಹುತವೊಂದು ತಪ್ಪಿತ್ತು.
ಕುಂಬಳೆ ರೈಲು ನಿಲ್ದಾಣ ದಕ್ಷಿಣ ಭಾಗದ ಸಿಗ್ನಲ್ ಸಮೀಪದ ರೈಲು ಹಳಿಯಲ್ಲಿ ಕಲ್ಲು ಕಾಣಸಿಕ್ಕಿತ್ತು. ಓಖ-ಎರ್ನಾಕುಳಂ ಎಕ್ಸ್ಪ್ರೆಸ್ ಹಾದು ಹೋಗುವ ಸ್ವಲ್ಪ ಮುನ್ನ ಹಳಿಯಲ್ಲಿ ಕಗ್ಗಲ್ಲು ಇಟ್ಟಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿತು.
ಈ ಸುದ್ದಿ ಓದಿದ್ದೀರಾ? ತುಮಕೂರು | ದಾರಿ ತಪ್ಪುವ ರಾಜಕಾರಣಿ, ಅಧಿಕಾರಿಗಳನ್ನು ಸರಿದಾರಿಗೆ ತರುವುದು ಪತ್ರಕರ್ತರ ಕರ್ತವ್ಯ: ಶಾಸಕ ವೆಂಕಟೇಶ
ಉಪ್ಪಳದ ರೈಲು ಹಳಿಯಲ್ಲಿ ಕಲ್ಲನ್ನು ಇರಿಸಲು ಪ್ರಯತ್ನಿಸುತ್ತಿದ್ದಾಗ ಮೂವರು ವಿದ್ಯಾರ್ಥಿಗಳನ್ನು ಸೆರೆ ಹಿಡಿಯಲಾಗಿತ್ತು. ಆದರೆ ಮಕ್ಕಳಿಂದ ಇಂಥ ಕೃತ್ಯಗಳನ್ನು ಭೀತಿವಾದಿ ಸಂಘಟನೆಯವರು ಮಾಡಿಸುತ್ತಿರಬಹುದು ಎಂಬ ಶಂಕೆಯನ್ನು ತನಿಖಾ ಸಂಸ್ಥೆಗಳು ವ್ಯಕ್ತಪಡಿಸಿದ್ದವಾದರೂ ಇದರ ಹಿಂದಿನ ಶಕ್ತಿಗಳನ್ನು ಪತ್ತೆಹಚ್ಚಲು ಈವರೆಗೂ ಸಾಧ್ಯವಾಗಿಲ್ಲ. ಇಂತಹ ಘಟನೆಗಳಾದಾಗ ಇದೊಂದು ಮಕ್ಕಳಾಟಿಕೆ, ಕಿಡಿಗೇಡಿಗಳ ಕೃತ್ಯ ಎಂದು ಪ್ರಕರಣ ಮುಚ್ಚಿಹೋಗುತ್ತದೆ. ಬದಲಾಗಿ ಸಮರ್ಪಕ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ರೈಲು ದುರಂತಕ್ಕೆ ಕೈ ಹಾಕುವವರನ್ನು ಕನಿಷ್ಟ ಐದು ವರ್ಷಕ್ಕಾದರೂ ಜೈಲಿನಲ್ಲಿ ಕೊಳೆಸಬೇಕು ಮಕ್ಕಳಾದರೂ ಸರಿ ಯಾರೆ ಆದರೂ ಸರಿ 😡