ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಹಾರುವ ಬೂದಿಯಿಂದ ರೈತರ ತೋಟದ ಫಸಲುಗಳು ಹಾಳಾಗುತ್ತಿವೆ. ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ರೈತರ ಬದುಕಿನ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ತಾಲೂಕು ರೈತಸಂಘದ ನೇತೃತ್ವದಲ್ಲಿ ನೂರಾರು ರೈತರು ತಾಲೂಕು ಪಂಚಾಯತಿ ಕಾರ್ಯಾಲಯದ ಬಳಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ರೂಪಶ್ರೀ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ರೈತ ಹೋರಾಟಗಾರ ಕರೋಟಿ ತಮ್ಮಣ್ಣ, “ರೈತರ ಜೀವನಾಡಿ ಹೇಮಾವತಿ ನದಿ ಸಮೀಪವಿರುವ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯಿಂದ ಬರುವ, ಹಾರುವ ವಿಷಕಾರಿ ಬೂದಿಯಿಂದ ಕಾರ್ಖಾನೆ ವ್ಯಾಪ್ತಿಗೆ ಬರುವ ಮಾಕವಳ್ಳಿ, ಕರೋಟಿ, ವಡ್ಡರಹಳ್ಳಿ ಹೆಗ್ಗಡಹಳ್ಳಿ, ಕರಿಗನಹಳ್ಳಿ, ಮಾಣಿಕನಹಳ್ಳಿ, ಲಿಂಗಾಪುರ, ರಾಮನಹಳ್ಳಿ, ಬಿಚೇನಹಳ್ಳಿ, ಕುಂದನಹಳ್ಳಿ, ಗ್ರಾಮಗಳ ರೈತರ ತೋಟದ ಫಸಲಗಳು ಮೇಲೆ ಭಾರಿ ಪರಿಣಾಮ ಬೀರುತ್ತಿವೆ” ಎಂದು ಕೇಳಿದರು.
“ಹಾರುವ ಬೂದಿಯಿಂದ ಈ ಭಾಗದ ಜನರ ಆರೋಗ್ಯದ ಮೇಲೂ ಸಮಸ್ಯೆ ಎದುರಾಗುತ್ತಿರುವುದಾಗಿ ಹತ್ತು ವರ್ಷಗಳಿಂದ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ವರದಿಯೊಂದಿಗೆ ಕಾರ್ಖಾನೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುಂತೆ ಹಲವು ಬಾರಿ ಮನವಿ ಮಾಡಿದರೂ ಕೂಡಾ ಬಡವರ ಕೋಪ ದವಡೆಗೆ ಮೂಲ ಎಂಬಂತೆ ತಾಲೂಕು ತೋಟಗಾರಿಕಾ ಇಲಾಖೆಐು ಕಾರ್ಖಾನೆಯ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದೆ” ಎಂದು ಆರೋಪಿಸಿದರು.
“ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಮತ್ತು ನಮಗೆ ನ್ಯಾಯ ದೊರಕಿಸಿಕೊಡಿ” ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ರೂಪಶ್ರೀ ಅವರಿಗೆ ಕಾರ್ಖಾನೆ ವ್ಯಾಪ್ತಿಯ ರೈತರು ಪಟ್ಟು ಹಿಡಿದರು.
ಬಳಿಕ ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ, “ಪರಿಸರ ಮತ್ತು ಕಾರ್ಖಾನೆ ವ್ಯಾಪ್ತಿಯ ರೈತರ ಉಳಿವಿಗಾಗಿ ನಾನೂ ಕೂಡ ಕಾರ್ಖಾನೆಯ ಸ್ಥಳೀಯ ಸಮಿತಿಯ ಸದಸ್ಯನಾಗಿದ್ದೇನೆ. ನಿಮ್ಮ ಸ್ಥಳೀಯ ಇಲಾಖೆ ಅಧಿಕಾರಿಗಳು ಸಮಿತಿಯ ಎಷ್ಟು ಬಾರಿ ಸಭೆಗೆ ಹಾಜರಾಗಿದ್ದಾರೆ?. ನಿಮ್ಮ ಎದುರೇ ನೀವೇ ಕೇಳಬೇಕು. ತಾಲೂಕಿನ ತೋಟಗಾರಿಕೆ ಇಲಾಖೆ ಸಾರ್ವಜನಿಕ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೋ ಅಥವಾ ಉದ್ಯಮಿಗಳ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೋ ಎಂದು ಸಾಮಾನ್ಯ ಜನರಲ್ಲಿ ಆತಂಕ ಮೂಡಿದೆ” ಎಂದರು.
“ಸರ್ಕಾರ ನೀಡುವ ಸಂಬಳಕ್ಕಾದರೂ ಮುಂದಿನ ದಿನಗಳಲ್ಲಿ ಸ್ವಾಭಿಮಾನದಿಂದ ಪ್ರಾಮಾಣಿಕ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲು ಸಿದ್ದರಿದ್ದೇವೆ” ಎಂದು ಸಭೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದರು.
ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ರೂಪಶ್ರೀ ಸಮಸ್ಯೆ ಸ್ವೀಕರಿಸಿ ಮಾತನಾಡಿ, “ಕಾರ್ಖಾನೆಗಳಿದ್ದಲ್ಲಿ ಆ ಭಾಗದ ರೈತರ ಸಮಸ್ಯೆ ನನಗೂ ಅರಿವಿದೆ. ನಾನೂ ಕೂಡಾ ರೈತನ ಮಗಳು. ಅಂತಹ ರೈತ ಸಂಕುಲದ ಆರೋಗ್ಯಕ್ಕೆ ಮತ್ತು ಪರಿಸರದ ಮೇಲೆ ಹಾನಿ ಉಂಟುಮಾಡುವ ಕಾರ್ಖಾನೆಯಾದರೆ ಅವರ ಮೇಲೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುತ್ತೇನೆ” ಎಂದು ತಿಳಿಸಿದ್ದು, ಕಾರ್ಖಾನೆಯಿಂದ ಬರುವ ಹಾರುವ ಬೂದಿಯ ಬಗ್ಗೆ ತಮಗೆ ಮತ್ತು ತಾಲೂಕು ರೈತರಿಗೆ ಶೀಘ್ರವೇ ವರದಿ ನೀಡುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಲೋಕೇಶ್ ಅವರಿಗೆ ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸತೀಶ್, ತಾ ಪಂ ಅಭಿವೃದ್ದಿ ಅಧಿಕಾರಿ ನರಸಿಂಹರಾಜು, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ ಡಿ ಲೋಕೇಶ್, ಹಿರಿಯ ರೈತ ಮುಖಂಡರುಗಳಾದ ಮಂದಗೆರೆ ಜಯರಾಮ್, ಜಗದೀಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಸಂಘದ ತಾಲೂಕು ಕಾರ್ಯದರ್ಶಿ ಬೂಕನಕೆರೆ ನಾಗರಾಜು, ಮಾಕವಳ್ಳಿ ರವಿ, ಕರೋಟಿ ತಮ್ಮಯ್ಯ, ಹೊನ್ನೇಗೌಡ, ಪಿ ಬಿ ಮಂಚನಹಳ್ಳಿ ನಾಗೇಗೌಡ, ನಗರೂರು ಕುಮಾರ್, ಕೃಷ್ಣಾಪುರ ರಾಜಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ, ಕಾರಿನಗಹಳ್ಳಿ ಮಂಜುನಾಥ್ ಸೇರಿದಂತೆ ಬಹುತೇಕ ಮಂದಿ ರೈತರು ಇದ್ದರು.
ವರದಿ: ಮನು ಮಾಕವಳ್ಳಿ ಕೆ ಆರ್ ಪೇಟೆ