ಕೃಷ್ಣರಾಜ ಸಾಗರ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಬೆಳೆ ಬೆಳೆಯಲು ಕಟ್ಟೆಯಿಂದ ಕಟ್ಟು ಪದ್ದತಿಯಲ್ಲಿ ನೀರು ಕೊಡುವ ಅವೈಜ್ಞಾನಿಕ ಪದ್ದತಿ ಕೈ ಬಿಟ್ಟು ನಿರಂತರ ನೀರು ಹರಿಸಬೇಕು ಎಂದು ಆಗ್ರಹಿಸಿದ ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ) ಮುಂದಾಳತ್ವದಲ್ಲಿ ರೈತರು ಕಾವೇರಿ ನೀರಾವರಿ ನಿಗಮದ ಎದುರು ಪ್ರತಿಭಟನೆ ನಡೆಸಿ ಕೃಷ್ಣರಾಜ ಸಾಗರ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ಅವೈಜ್ಞಾನಿಕ ಕ್ರಮದ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಸೊ ಸಿ ಪ್ರಕಾಶ್ ಮಾತನಾಡಿ “ಕಳೆದ ಎರಡು ವರ್ಷದಿಂದ ಭೀಕರ ಬರ ಪರಿಸ್ಥಿತಿ ಪರಿಣಾಮ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಬರದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ಸಂಪೂರ್ಣ ತುಂಬಿರುವುದು ರೈತರಲ್ಲಿ ಹುರುಪು ತಂದಿದೆ. ಕನ್ನಂಬಾಡಿ ತುಂಬಿದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನಿರಂತರ ನೀರು ಹರಿಯುವಿಕೆ ವಾಡಿಕೆ ಪದ್ಧತಿ ಇತ್ತು. ಆದರೆ ಇದೀಗ ಜಲಾಶಯ ತುಂಬಿದ್ದರೂ ಕೂಡಾ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲು ಮುಂದಾಗಿರುವುದು ಸರಿಯಲ್ಲ. ಉಸ್ತುವಾರಿ ಸಚಿವರು, ಶಾಸಕರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿಲುವಿನಲ್ಲಿ ಖಚಿತತೆ ಇಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈ ಆತಂಕ ನಿವಾರಣೆಗೆ ನಾಲೆಗಳಿಗೆ ನಿರಂತರ ನೀರು ಹರಿಸುವ ತೀರ್ಮಾನ ಕೈಗೊಂಡು ನೀರು ಹರಿಸಬೇಕು” ಎಂದು ಆಗ್ರಹಿಸಿದರು.
ಮಂಡ್ಯ ಜಿಲ್ಲೆಯ ಕೆರೆ ಕಟ್ಟೆಗಳನ್ನು ಶೀಘ್ರ ತುಂಬಿಸಬೇಕು. ಕೆರೆ ಅಚ್ಚುಕಟ್ಟು ರೈತರಿಗೆ ಭತ್ತದ ಸಸಿ ಮಡಿಗೆ ಅವಕಾಶ ನೀಡಿ ಭತ್ತ ಬೆಳೆಯಲು ಅನುವು ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
“ವಿಸಿ ನಾಲೆ ಕೊನೆಯ ಭಾಗದ ಮದ್ದೂರು, ಮಳವಳ್ಳಿ, ಕೆ ಎಂ ದೊಡ್ಡಿ, ಕೊಪ್ಪ ಭಾಗದ ನಾಲೆಗಳಿಗೆ ನೀರು ಹರಿಸಿ ಮುಂಗಾರು ಬೆಳೆಗೆ ಅವಕಾಶ ಮಾಡಬೇಕು. ಮುಖ್ಯ ನಾಲೆಗಳಿಂದ ಉಪನಾಲೆಗಳಿಗೆ ಸಮರ್ಪಕವಾಗದೆ ನೀರು ಸರಬರಾಜಾಗದೆ ರೈತರ ಜಮೀನುಗಳಿಗೆ ನೀರು ದೊರಕದೆ ತೊಡಕಾಗಿದೆ. ಹಾಗಾಗಿ ನಾಲೆಗಳಲ್ಲಿನ ಹೂಳು, ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಬೇಕು. ಜಿಲ್ಲಾ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಕೊರತೆ ಉಂಟಾಗಿ ನಿರಂತರ ಕಬ್ಬು ಅರೆಯುವಿಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾರ್ಖಾನೆಗಳಿಗೆ ನೀರಿನ ಲಭ್ಯತೆ ಪೂರೈಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಗುಂಡಿಮಯವಾದ ಅನುಪಿನಕಟ್ಟೆ ಗ್ರಾಮದ ರಸ್ತೆ : ಹೈರಾಣಾದ ವಾಹನ ಸವಾರರು!
ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಸೋ ಸಿ ಪ್ರಕಾಶ್, ರಾಮಕೃಷ್ಣಯ್ಯ, ಎಸ್ ಮಂಜೇಶ್, ಬೋರಲಿಂಗೇಗೌಡ, ವೆಂಕಟೇಶ್ ಪಣ್ಣೆದೊಡ್ಡಿ, ಆರ್ ಕಾಂತಯ್ಯ, ಡಿ ಎಸ್ ಚಂದ್ರಣ್ಣ, ಶಿವಲಿಂಗೇಗೌಡ, ಕಾಂತರಾಜು, ಪಿ ಕೆ ರಮೇಶ್ ಇದ್ದರು.