ನಾಡಿನಾದ್ಯಂತ ಗಮನ ಸೆಳೆದಿದ್ದ ಹೆಣ್ಣುಭ್ರೂಣ ಹತ್ಯೆ ಜಾಲವನ್ನು ಮಂಡ್ಯ ಜಿಲ್ಲಾ ಪೊಲೀಸರು ಭೇದಿಸಿದ್ದು, ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್, ವಿರೇಶ್, ಪುಟ್ಟರಾಜು, ಕುಮಾರ್, ಶಾರದಮ್ಮ, ದಾಸೇಗೌಡ, ಲ್ಯಾಬ್ ಸತ್ಯ, ಮೀನಾ, ಮಲ್ಲಿಕಾರ್ಜುನ್, ಸೋಮಶೇಖರ್, ರತ್ನಮ್ಮ ಮತ್ತು ಪ್ರೇಮ ಆಲಿಯಾಸ್ ಪಾರ್ವತಿ ಬಂಧಿತ ಪ್ರಮುಖ ಆರೋಪಿಗಳು.
ಈ ಪ್ರಕರಣದಲ್ಲಿ ಹೆಣ್ಣುಭ್ರೂಣವನ್ನು ಅಕ್ರಮವಾಗಿ ಸ್ಕ್ಯಾನಿಂಗ್ ಮೂಲಕ ಪತ್ತೆ ಮಾಡಲಾಗುತ್ತಿತ್ತು. ಆಶಾ ಕಾರ್ಯಕರ್ತರು ಮತ್ತು ಖಾಸಗಿ ಲ್ಯಾಬ್ ತಂತ್ರಜ್ಞರು ಕೂಡ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದರು. ಇವರು ಲಿಂಗಪತ್ತೆ ಮತ್ತು ನಂತರ ಭ್ರೂಣಹತ್ಯೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಈ ಪ್ರಕರಣದ ಸಂಬಂಧ ನಾಡಿನ ಹಲವು ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಾಗಿತ್ತು ಎಂದು ಎಸ್ಪಿ ತಿಳಿಸಿದರು.

ಪಾಂಡವಪುರದ ಆರೋಗ್ಯ ಇಲಾಖೆಯ ವಸತಿಗೃಹದಲ್ಲಿ, ಗ್ರೂಪ್ ಡಿ ನೌಕರ ಅಶ್ವಿನಿ ಮನೆಯಲ್ಲಿ ನಡೆದ ಪ್ರಕರಣದಲ್ಲಿ ಒಟ್ಟು 19 ಆರೋಪಿಗಳ ಪೈಕಿ 12 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಏಳು ಮಂದಿ ತಲೆಮರೆಸಿಕೊಂಡಿದ್ದಾರೆ. ಇದೇ ರೀತಿಯ ಪ್ರಕರಣ ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಲ್ಲೂ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೆಣ್ಣುಭ್ರೂಣ ಪತ್ತೆ ಪ್ರಕರಣದಲ್ಲಿ, ನಾಲ್ವರಲ್ಲಿ ಮೂವರು ಬಂಧಿತರಾಗಿದ್ದಾರೆ. ಇನ್ನು ಮೈಸೂರು ಉದಯಗಿರಿ ಮತ್ತು ಬೆಂಗಳೂರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಪ್ರಕರಣ ದಾಖಲಾಗಿತ್ತು. ಈ ಕೃತ್ಯದಲ್ಲಿ ಭಾಗಿಯಾದ ಕೆಲವರು ಇನ್ನೂ ತಲೆಮರೆಸಿಕೊಂಡಿದ್ದು ಅವರನ್ನು ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ ಎಂದರು.
ಇದನ್ನು ಓದಿದ್ದೀರಾ? ಬೀದರ್ | ಪ್ರೀತಿಸಿದವನಿಂದಲೇ ಯುವತಿಯ ಕೊಲೆ; ಮೂವರ ಬಂಧನ
ಆರೋಪಿಗಳನ್ನು ಬಂಧಿಸಲು ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಆರೋಪಿಗಳ ಜೊತೆಗೆ ಈ ಸಂದರ್ಭದಲ್ಲಿ ಎರಡು ಸ್ಕ್ಯಾನಿಂಗ್ ಯಂತ್ರಗಳು, ಮೂರು ಕಾರುಗಳು ಮತ್ತು ಮೊಬೈಲ್ಗಳು ವಶಪಡಿಸಿಕೊಳ್ಳಲಾಗಿದೆ. ಅಪರಾಧವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ಘೋಷಿಸಲಾಗಿದೆ.
