ಯುವಜನತೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಮತ್ತು ವಿದ್ಯಾವಂತರನ್ನು ವ್ಯವಸಾಯದೆಡೆಗೆ ಆಕರ್ಷಿಸಲು ಮಂಡ್ಯದಲ್ಲಿ ಅಕ್ಟೋಬರ್ 20ರಂದು ರೈತರ ಶಾಲೆಗೆ ಶಂಕುಸ್ಥಾಪನೆ ನಡೆಯಲಿದೆ.
ರೈತರ ಶಾಲೆಯ ಮುಖ್ಯಸ್ಥ ಪ್ರೊ. ಸತ್ಯಮೂರ್ತಿ ಗಂಜಾಂ ಅವರು ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದು, “ಮಂಡ್ಯ ತಾಲೂಕಿನ ಕೀಲಾರ ಸಮೀಪದ ಆಲಕೆರೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 10.30ಕ್ಕೆ ಭಾರತದ ಮೊದಲ ರೈತರ ಶಾಲೆಗೆ ಪ್ರಗತಿಪರ ರೈತರು ಶಂಕುಸ್ಥಾಪನೆ ನೆರವೇರಿಸಲಿದ್ದು, ಅಕ್ಕಪಕ್ಕದ ಊರುಗಳ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಯುವಜನರು ಪಟ್ಟಣಗಳಿಗೆ ಸಮರೋಪಾದಿಯಲ್ಲಿ ವಲಸೆ ಹೋಗುತ್ತಿರುವುದನ್ನು ತಡೆಯಲು ʼಭಾರತದ ಆತ್ಮ ಹಳ್ಳಿಗಳಲ್ಲಿದೆ. ರೈತರ ಉದ್ಧಾರವಾದರೆ ದೇಶದ ಉದ್ಧಾರವಾಗುತ್ತದೆʼ ಎಂಬ ಗಾಂಧಿಯ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಪ್ರಯತ್ನಿಸುವತ್ತ ಹೆಜ್ಜೆ ಇಡಲಾಗುತ್ತಿದೆ” ಎಂದರು.
“ನಗರಗಳಿಗೆ ಯುಜನತೆ ವಲಸೆ ಹೋಗುವುದನ್ನು ತಪ್ಪಿಸುವುದು ಮತ್ತು ವ್ಯವಸಾಯದೆಡೆಗೆ ವಿದ್ಯಾವಂತರನ್ನು ಆಕರ್ಷಿಸಲು ರೈತರ ಶಾಲೆ ಆರಂಭಿಸುತ್ತಿದ್ದು, ಕೃಷಿ ವಿಜ್ಞಾನಿಗಳು, ವಿಶ್ವ ವಿದ್ಯಾಲಯಗಳ ಪ್ರೊಫೆಸರ್ಗಳು, ಮಾರುಕಟ್ಟೆ ತಜ್ಞರು, ಪ್ರಗತಿಪರ ಕೃಷಿಕರು ಮತ್ತು ಯುವ ಸಾಫ್ಟ್ವೇರ್ ತಂತ್ರಜ್ಞರು ರೈತರ ಶಾಲೆಯನ್ನು ರೂಪಿಸುತ್ತಿದ್ದಾರೆ. ರೈತರಿಗೆ ಅಗತ್ಯವಾಗಿ ಬೇಕಾದ ಸಿಲಬಸ್ ಕೂಡ ತಯಾರಾಗುತ್ತಿದೆ. ಹೊಸ ವರ್ಷ 2025ರ ಜನವರಿ 1ಕ್ಕೆ ರೈತರ ಶಾಲೆಯ ಕಾರ್ಯಾಚರಣೆ ಶುರುವಾಗಲಿದೆ” ಎಂದು ಪ್ರೊ. ಸತ್ಯಮೂರ್ತಿ ಗಂಜಾಂ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರವಾದಿ ಮಹಮ್ಮದ್ರಿಗೆ ಅವಹೇಳನ; ಯತಿ ನರಸಿಂಹಾನಂದ ವಿರುದ್ಧ ಕ್ರಮಕ್ಕೆ ಆಗ್ರಹ
“ಕೃಷಿಯ ಹೊಸ ಸಾಧ್ಯತೆಗಳನ್ನು ಪರಿಚಯಿಸುವುದರ ಜತೆಗೆ ಬೆಳೆ ವಿಧಾನ, ರೋಗಬಾಧೆಗಳ ನಿವಾರಣೆಯ ಕ್ರಮಗಳು ಮತ್ತು ಮಾರುಕಟ್ಟೆ ಜ್ಞಾನವನ್ನು ಗ್ರಾಮಮಟ್ಟದಲ್ಲಿ ನೀಡುವುದು ರೈತರ ಶಾಲೆಯ ಸದಾಶಯವಾಗಿದೆ” ಎಂದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಗ್ರಾಮದ ಸತ್ಯಮೂರ್ತಿಯವರು ಕೃಷಿ ಅರ್ಥಶಾಸ್ತ್ರದ ಬಗ್ಗೆ ಸಾಕಷ್ಟು ಓದಿಕೊಂಡಿದ್ದು, ಸ್ವತಃ ಕೃಷಿಕರಾಗಿದ್ದರೂ, ಐದಾರು ವರ್ಷಗಳಿಂದ ಮಂಡ್ಯ ಹಳ್ಳಿಹಳ್ಳಿಗಳನ್ನು ಸುತ್ತಾಡಿ, ರೈತರೊಂದಿಗೆ ಒಡನಾಡಿ ರೈತರನ್ನು ಎಲ್ಲ ಬಗೆಯಿಂದ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಇದೀಗ ರೈತರ ಶಾಲೆಯೊಂದಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ.