ಮೈಕ್ರೋ ಫೈನಾನ್ಸ್ಗಳ ಮೂಲಕ ಅಮಾಯಕ ಮಹಿಳೆಯರ ಹೆಸರಿನಲ್ಲಿ ₹1 ಕೋಟಿ ರೂ.ಗಳಿಗೂ ಹೆಚ್ಚು ಸಾಲ ಪಡೆದು, ತಾಯಿ-ಮಗಳಿಬ್ಬರು ಹಲವು ಕುಟುಂಬಗಳನ್ನು ವಂಚಿಸಿರುವ ಘಟನೆ ಮಂಡ್ಯ ನಗರದ ಹೊಸಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ನಗರದ ಗಾಂಧಿನಗರ 5ನೇ ತಿರುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಜಯಮ್ಮ ಹಾಗೂ ಆಕೆಯ ಮಗಳು ದಿವ್ಯ ಹಲವು ಅಮಾಯಕರ ಹೆಸರಿನಲ್ಲಿ ಕೋಟಿ ರೂ. ಗೂ ಹೆಚ್ಚು ಸಾಲ ಪಡೆದು ವಂಚನೆ ಮಾಡಿ, ಈಗ ಪರಾರಿಯಾಗಿದ್ದಾರೆ.
ಈಗ ತಮ್ಮ ಹೆಸರಿನಲ್ಲಿ ಸಾಲ ತೆಗೆದುಕೊಟ್ಟಿರುವ ಮಹಿಳೆಯರು, ಸಾಲದ ಕಂತುಗಳನ್ನು ಕಟ್ಟಿ ತೀರಿಸುವ ಅನಿವಾರ್ಯತೆ ಎದುರಾಗಿದ್ದು, ಈ ಇಬ್ಬರು ಮಹಿಳೆಯರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.
ಹೊಸಹಳ್ಳಿ ವೃತ್ತದಲ್ಲಿ ವಂಚಕ ತಾಯಿ, ಮಗಳ ಭಾವಚಿತ್ರವಿರುವ ಫ್ಲೆಕ್ಸ್ ಅನ್ನು ಅಳವಡಿಸಿರುವ ಸಂತ್ರಸ್ತರು, ನಾವು ಸಾಲದ ಕಂತುಗಳನ್ನು ಕಟ್ಟುವುದಿಲ್ಲ, ಈ ವಂಚನೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯ ಪ್ರತಿನಿಧಿಗಳು ಕೂಡ ಭಾಗಿಯಾಗಿದ್ದಾರೆ. ಅವರೆಲ್ಲರೂ ಸೇರಿ ನಮ್ಮನ್ನು ವಂಚಿಸಿದ್ದಾರೆ. ಹಾಗಾಗಿ ಈ ಇಬ್ಬರು ವಂಚಕಿಯರನ್ನು ಹಿಡಿದು ತರುವವರೆಗೂ ಸಾಲದ ಕಂತುಗಳನ್ನು ಪಾವತಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
