ದೇಶದ ಯುವ ಜನರಿಗೆ ಗಾಂಧಿ ಚಿಂತನೆಯನ್ನು ತಿಳಿಸುವುದು ಎಂದಿಗಿಂತ ಇಂದಿನ ತುರ್ತು ಆದ್ಯತೆಯಾಗಬೇಕು ಎಂದು ಈ ದಿನ.ಕಾಮ್ ವಿಡಿಯೋ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ. ಬಸವರಾಜು ತಿಳಿಸಿದರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ಚಿತ್ರಕೂಟದ ವತಿಯಿಂದ ಭಾನುವಾರ ಸಂಜೆ ನಡೆದ ಹಾಡು, ಹಸೆ, ಕವಿತೆಗಳ ಜತೆ ಮಾತುಕತೆ ಎಂಬ ವಿಭಿನ್ನ ಕಾರ್ಯಕ್ರಮದಲ್ಲಿ ‘ಗಾಂಧಿ ಮತ್ತು ಮಾಧ್ಯಮ’ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಅವರು ಮಾತನಾಡುತ್ತಿದ್ದರು.
“ಇಂದಿನ ಜನರಲ್ಲಿ ಗಾಂಧಿ ಚಿಂತನೆಯನ್ನು ಅರ್ಥ ಮಾಡಿಸುವ ಮನಸ್ಥಿತಿ ಕಡಿಮೆಯಾಗಿದೆ. ಒಂದು ವೇಳೆ ನಾವು ಗಾಂಧಿಯನ್ನು ತಿಳಿದುಕೊಳ್ಳಲು ವಿಫಲವಾದರೆ, ಈ ಒಕ್ಕೂಟವನ್ನು ಅವರ ಆಶಯದ ಭಾರತವನ್ನಾಗಿ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
ದೇಶ ವಿಭಜನೆಯ ಕಾರಣಕ್ಕಾಗಿ ಗಾಂಧಿಯನ್ನು ಕೊಲ್ಲಲಾಯಿತು ಎಂಬುದು ಸುಳ್ಳು. ನಿಜವಾಗಲೂ ಆಗಿನ ಸಂದರ್ಭದಲ್ಲಿ ಗಾಂಧಿಯವರ ವೈಚಾರಿಕ ಸಿದ್ದಾಂತಕ್ಕೆ ವಿರುದ್ದವಾದ ವರ್ಣಾಶ್ರಮ, ಮನುವಾದವನ್ನು ಪ್ರತಿಪಾದಿಸುತ್ತಿದ್ದ ಸಂಘ ಪರಿವಾರದ ಗುಂಪು ಅವರನ್ನು ಹತ್ಯೆ ಮಾಡಿತು. ಏಕೆಂದರೆ ಗಾಂಧಿಜೀಯವರು ಮನುವಾದಿಗಳ ಸಿದ್ದಾಂತಕ್ಕೆ ಎದುರಾಗಿದ್ದರು ಎಂದು ತಿಳಿಸಿದರು.

ಪತ್ರಿಕೋದ್ಯಮವು ಸಮಾಜ ಸೇವೆಯಾಗಬೇಕೆಂದು ಗಾಂಧೀಜಿಯವರು ಬಯಸಿದ್ದರು. ಆದರೆ, ಈ ದೇಶದಲ್ಲಿ ಮಾಧ್ಯಮಗಳ ಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಿದರೆ, ಅವರು ಬಂಡವಾಳ ಶಾಹಿಗಳು ಹಾಗೂ ಉದ್ಯಮಿಗಳ ಕೈಯಲ್ಲಿ ಸಿಲುಕಿ, ಪತ್ರಕರ್ತರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿವೆ. ಇದು ಅಪಾಯಕಾರಿ ಬೆಳವಣಿಗೆ ಎಂದರು.
ಸಹ ಪ್ರಾಧ್ಯಾಪಕರಾದ ಡಾ. ಶಿಲ್ಪಶ್ರೀ ಹರವು ‘ಗಾಂಧೀ ಮತ್ತು ಗ್ರಾಮ’ ವಿಚಾರ ಕುರಿತು ಮಾತನಾಡಿ, ಗಾಂಧೀಜಿಯವರ ಸರ್ವೋದಯವೆಂದರೆ ಒಬ್ಬ ವ್ಯಕ್ತಿಯ ಹಿತ, ಎಲ್ಲರ ಹಿತದಲ್ಲಿದೆ ಎಂಬುದಾಗಿತ್ತು. ಅವರ ಸರ್ವೋದಯ ತತ್ವವು ಒಂದು ದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಇಡೀ ವಿಶ್ವಕ್ಕೆ ಸಂಬಂಧಿಸಿದ್ದಾಗಿತ್ತು ಎಂದರು.
ಇದನ್ನು ಓದಿದ್ದೀರಾ? ಬೀದರ್ | ತೊಗರಿ ಬೆಳೆ ಮಧ್ಯೆ ಗಾಂಜಾ ಬೆಳೆದ ರೈತ : 700 ಗಿಡ ಜಪ್ತಿ ಮಾಡಿದ ಪೊಲೀಸರು
ಶಿಕ್ಷಣ ತಜ್ಞ ವೋಡೇ ಪಿ.ಕೃಷ್ಣ ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ಲಂಕೇಶ್ ಪತ್ರಿಕೆ ಅಂಕಣಕಾರ ಬಿ. ಚಂದ್ರೇಗೌಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ ಭಾಗವಹಿಸಿದ್ದರು. ಹರವು ದೇವೇಗೌಡರು ಕಾರ್ಯಕ್ರಮದ ನಿರೂಪಣೆ ಮಾಡಿದರು.

