ಮಂಗಳೂರಿನ ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ ಮೇಲೆ ರಾಮ ಸೇನೆ ಕಾರ್ಯಕರ್ತರು ದಾಂಧಲೆ ಮೆರೆಯಲು ಮಂಗಳೂರು ನಗರದ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ನೇರ ಹೊಣೆ. ಅನೈತಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶಕೊಟ್ಟು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಕಾರಣಕ್ಕೆ ಮತ್ತೆ ನೈತಿಕ ಪೊಲೀಸ್ ಗಿರಿ ತಲೆ ಎತ್ತಿ ಮಂಗಳೂರಿನ ಮಾನವನ್ನು ಹರಾಜಿಗಿಟ್ಟಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆರೋಪಿಸಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಸಾಜ್ ಪಾರ್ಲರ್, ಅಕ್ರಮ ಮರಳುಗಾರಿಕೆ, ವೇಶ್ಯಾವಾಟಿಕೆ, ಜುಗಾರಿ ಅಡ್ಡೆ, ಮಡ್ಕ ಸೇರಿದಂತೆ ಹಲವು ಬಗೆಯ ಗ್ಯಾಂಬ್ಲಿಂಗ್ಗಳು ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಡಿವೈಎಫ್ಐ ಸಂಘಟನೆ ಪ್ರಾರಂಭದಿಂದಲೇ ಆರೋಪಿಸುತ್ತಾ ಬಂದಿದ್ದರೂ, ಈಗಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಈ ಬಗ್ಗೆ ಈವರೆಗೂ ಯಾವುದೇ ಕ್ರಮಕೈಗೊಳ್ಳದೆ ಅವುಗಳಿಗೆ ಮುಕ್ತವಾಗಿ ಅವಕಾಶಕೊಟ್ಟು ನಗರದಲ್ಲಿಂದು ಹರಾಜಕತೆಯನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದೆ.
ಪ್ರಗತಿಪರರು ನಡೆಸುವ ಜನಪರ ಹೋರಾಟಗಳಿಗೆ ಅವಕಾಶ ಕೊಡದೆ ವಿನಾಕಾರಣ ಕೇಸು ದಾಖಲಿಸುವ ಕಮಿಷನರ್, ಅದೇ ಸಂಘಪರಿವಾರದ ಕಾರ್ಯಕ್ರಮಕ್ಕೆ ಎಲ್ಲೆಂದರಲ್ಲಿ (ಕಾನೂನು ನಿಯಮ ಮೀರಿ) ಅವಕಾಶ ಕಲ್ಪಿಸಿ ನೇರ ಬೆಂಬಲಿಸುತ್ತಾ ಬಂದ ಕಾರಣಕ್ಕೆ ಇಂದು ರಾಮ ಸೇನೆ ಕಾರ್ಯಕರ್ತರು ಮತ್ತೆ ನಗರದಲ್ಲಿ ನೈತಿಕ ಗೂಂಡಾಗಿರಿ ಮೆರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಈಗಾಗಲೇ ಒಂದಷ್ಟು ನಿಯಂತ್ರಿಸಲಾಗಿದ್ದ ಸಂಘಪಾರಿವಾರದ ಅನೈತಿಕ ಪೊಲೀಸ್ಗಿರಿ ಮತ್ತೆ ಪುನರಾವರ್ತಿಸುವಲ್ಲಿ ಕಮಿಷನರ್ ಅಗರ್ವಾಲ್ ನೇರ ಹೊಣೆಯಾಗಿದ್ದು, ಮಂಗಳೂರು ನಗರದ ಮಾನವನ್ನು ಮತ್ತೆ ಹರಾಜು ಹಾಕಿ ತಲೆ ತಗ್ಗಿಸುವಂತೆ ಮಾಡಿದೆ ಎಂದು ಡಿವೈಎಫ್ಐ ದೂರಿದೆ.
ನಗರದ ಪೊಲೀಸ್ ಇಲಾಖೆಯ ವೈಫಲ್ಯತೆ ಬಗ್ಗೆ ಮತ್ತು ಕಳಂಕಿತ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಅಮಾನತುಗೊಳಿಸಿ ವರ್ಗಾಹಿಸಲು ಮಾನ್ಯ ಮುಖ್ಯಮಂತ್ರಿ, ಗೃಹ ಮಂತ್ರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಬೇಜವಾಬ್ದಾರಿಯನ್ನು ವಹಿಸಿರುತ್ತಾರೆ. ನಗರದ ಪೊಲೀಸ್ ಅವ್ಯವಸ್ಥೆಯನ್ನು ಸರಿಪಡಿಸದ ಕಾರಣಕ್ಕೆ ಸಂಘಪರಿವಾರದ ಕಾರ್ಯಕರ್ತರು ಮತ್ತೆ ನೈತಿಕ ಪೊಲೀಸ್ ಗಿರಿ ಮೂಲಕ ನಗರದಲ್ಲಿ ಮೆರೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಈ ಎಲ್ಲ ಬೆಳವಣಿಗೆಗೆ ಮಂಗಳೂರು ನಗರದಲ್ಲಿ ಮತ್ತೆ ಅಶಾಂತಿ ಸೃಷ್ಟಿಸಿ ಸಾಮರಸ್ಯ ಕದಡಲು ಅವಕಾಶ ಮಾಡಿಕೊಡುವಂತಹ ಬೆಳವಣಿಗೆಗೂ ಕಾಂಗ್ರೆಸ್ ಸರಕಾರವೂ ನೇರ ಹೊಣೆಯನ್ನು ಹೊರಬೇಕಾಗಿದೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಸೆಲೂನ್ಗೆ ನುಗ್ಗಿ ದಾಂಧಲೆ ಪ್ರಕರಣ: ರಾಮಸೇನೆಯ ಪ್ರಸಾದ್ ಅತ್ತಾವರ ಬಂಧನ
ರಾಜ್ಯ ಸರಕಾರ ಈ ಕೂಡಲೇ ಎಚ್ಚೆತ್ತು ರಾಮ ಸೇನೆ ನಡೆಸಿದ ದಾಂಧಲೆ ನೈತಿಕಪೊಲೀಸ್ ಗಿರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೊಳಪಡಿಸಬೇಕು. ಮಂಗಳೂರು ನಗರದಲ್ಲಿ ಹದಗೆಟ್ಟಿರುವ ಪೊಲೀಸ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಅಕ್ರಮ ಚಟುವಟಿಕೆ ನಿಯಂತ್ರಿಸಲಾಗದ ಕಳಂಕಿತ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಕೂಡಲೇ ಅಮಾನತುಗೊಳಿಸಿ ವರ್ಗಾಯಿಸಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ತಿಳಿಸಿದೆ.
