- ಸಾರಿಗೆ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕೆ 17 ಕೋಟಿ ರೂ. ಮೀಸಲು
- ‘ಚಾಲಕರಿಗೆ ವಸತಿ ಯೋಜನೆ ನೀಡಲು ವಸತಿ ಇಲಾಖೆಗೆ ಪತ್ರ ಬರೆದಿದ್ದೇನೆ’
ಸಾರಿಗೆ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕೆ 4 ಕೋಟಿ 7 ಲಕ್ಷ ರೂ. ಕೊಡಲಾಗಿತ್ತು. ಈ ಬಾರಿ 17 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸಾರಿಗೆ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿ ಮಾತನಾಡಿದ ಅವರು, “ರಾಜ್ಯ ಸಾರಿಗೆ ಇಲಾಖೆಯಿಂದ ಇನ್ನು ಎರಡ್ಮೂರು ತಿಂಗಳಲ್ಲಿ ಅಗ್ರಿಗೇಟರ್ ಆ್ಯಪ್ ಬಿಡುಗಡೆ ಮಾಡುತ್ತೇವೆ. ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಕೇಳಿದ್ದಾರೆ. ಅದನ್ನು ನೀಡಲು 4,370.28 ಕೋಟಿ ಬೇಕಾಗುತ್ತದೆ” ಎಂದು ಹೇಳಿದರು.
“ಚಾಲಕರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಚಾಲಕರಿಗೆ ವಸತಿ ಯೋಜನೆ ನೀಡಲು ವಸತಿ ಇಲಾಖೆಗೆ ಪತ್ರ ಬರೆದಿದ್ದೇನೆ. ಇನ್ನು ಸಾರಿಗೆ ಅಭಿವೃದ್ದಿ ನಿಗಮ ಸ್ಥಾಪನೆಗೆ ಕೋರಿದ್ದಾರೆ” ಎಂದರು.
“ಖಾಸಗಿ ಬಸ್ಗಳಿಗೂ ಶಕ್ತಿ ಯೋಜನೆ ವಿಸ್ತರಣೆ ಕೋರಿಕೆ ಇಟ್ಟಿದ್ದಾರೆ. ಹಣಕಾಸಿನ ವಿಚಾರ ಆಗಿರುವುದರಿಂದ ಅದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ತೆರಿಗೆ ವಿನಾಯಿತಿ ಕೇಳಿದ್ದಾರೆ. ನಾವು ಕೊಟ್ಟರೆ ಬೇರೆ ರಾಜ್ಯದಲ್ಲೂ ನೀಡಬೇಕು. ಮುಂದೆ ನೋಡೋಣ” ಎಂದು ವಿವರಿಸಿದರು.
ಸೆ.11 ಕ್ಕೆ ಖಾಸಗಿ ಸಾರಿಗೆ ಒಕ್ಕೂಟ ಬಂದ್ ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ಬಂದ್ ಮಾಡುವವರು ಬೇಕಿದ್ದರೆ ಬಂದು ಮಾತನಾಡಲಿ. ಸಾರಿಗೆ ಕಚೇರಿ ಬಾಗಿಲು ಯಾವಾಗಲೂ ತೆರೆದಿರುತ್ತೆ. ಸಭೆ ಕರೆದಾಗ ಬಂದು ಸಿಎಂ ಜೊತೆಗೆ ಮಾತನಾಡದೆ ಬಂದ್ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬರಗಾಲದಲ್ಲೂ ಸರ್ಕಾರ ಸಚಿವರಿಗಾಗಿ ಐಷಾರಾಮಿ ಕಾರು ಕೊಳ್ಳುವ ಅಗತ್ಯವಿತ್ತೇ?
“ಖಾಸಗಿ ವಾಹನಗಳನ್ನು ಕಿಮೀ ಆದಾರದ ಮೇಲೆ ಸರ್ಕಾರವೇ ಬಾಡಿಗೆಗೆ ಪಡೆಯಬೇಕು ಎಂದು ಕೇಳಿದರು. ಅವಶ್ಯಕತೆಗೆ ತಕ್ಕಂತೆ ಪಡೆಯುತ್ತೇವೆ, ಆದರೆ ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಬೇಕಿದೆ. ಟೂರಿಸ್ಟ್ ಮತ್ತು ಕಂಟ್ರಾಕ್ಟ್ ಕ್ಯಾರೇಜು ಬಸ್ಸುಗಳಿಗೆ ರಸ್ತೆ ತೆರಿಗೆ ಕಡಿತಗೊಳಿಸಲು ಸಿಎಂ ತೀರ್ಮಾನ ತೆಗೆದುಕೊಳ್ಳಬೇಕು. ಟ್ಯಾಕ್ಸಿ, ಮ್ಯಾಕ್ಸಿ ಹಾಗೂ ಒಪ್ಪಂದ ವಾಹನಗಳಿಗೆ ವಿಶೇಷ ರಹದಾರಿ ನೀಡುವ ಬಗ್ಗೆ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಭರವಸೆ ನೀಡಿದರು.
“ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಮಾಡಲಾಗುತ್ತದೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಜೊತೆ ಮಾತನಾಡಲಾಗಿದೆ. ಇ-ಆಟೋಗಳಿಗೆ ರಹದಾರಿ ಕುರಿತು ಪತ್ರ ಬರೆಯಲಾಗಿದೆ. ಜೀವಾವಧಿ ಟ್ಯಾಕ್ಸ್ ಅನ್ನು ಲೈಫ್ ಟ್ಯಾಕ್ಸ್ ಬೇಡ, ಮೊದಲಿನಂತೆ ಮಾಡುವಂತೆ ಕೋರಿದ್ದಾರೆ. ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ” ಎಂದರು.