ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ಸುತ್ತಮುತ್ತ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದೆ. ಈ ವೇಳೆ ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರು ಘಟನೆ ನಡೆದಿದೆ.
ಮೂಡಿಗೆರೆ ಪಟ್ಟಣದ ನಿವಾಸಿ ವೇಣುಗೋಪಾಲ್ (65 ವರ್ಷ) ಮೃತ ದುರ್ದೈವಿ. ಮೂಡಿಗೆರೆ ಸಮೀಪದ ಚಿಕ್ಕಳ್ಳ ಎಂಬಲ್ಲಿ ಅರುವ ತಮ್ಮ ‘ಮಧುವನ ಹೋಂ ಸ್ಟೇ’ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಭಾನುವಾರ ಸಂಜೆ ಸುಮಾರು 4.45ರ ಸಮಯದಲ್ಲಿ ಮಳೆ-ಗಾಳಿಗೆ ದೊಡ್ಡ ಗಾತ್ರದ ಮರ ಸ್ಕೂಟಿಯ ಮೇಲೆ ಉರುಳಿ ಬಿದ್ದಿದೆ. ಮರದ ಅಡಿಯಲ್ಲಿ ಸಿಲುಕಿದ್ದ ವೇಣುಗೋಪಾಲ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವೇಣುಗೋಪಾಲ್ ಅವರು ಮೂಲತಃ ಹಾಸನದವರಾಗಿದ್ದು, ಮೂಡಿಗೆರೆ ತಾಲೂಕು ಕೆಸವಳಲು ಗ್ರಾಮದ ರಾಧಾ ಅವರನ್ನು ವಿವಾಹವಾಗಿ ಮೂಡಿಗೆರೆಯಲ್ಲಿಯೇ ನೆಲೆಸಿದ್ದರು.
ಹಲವು ವರ್ಷಗಳಿಂದ ಮೂಡಿಗೆರೆಯಲ್ಲಿಯೇ ನೆಲಸಿದ್ದ ವೇಣುಗೋಪಾಲ್ ಪಟ್ಟಣದಲ್ಲಿ ಅಡ್ಯಂತಾಯ ರಂಗಮಂದಿರದ ಎದುರಿನಲ್ಲಿರುವ ಪಟ್ಟಣ ಪಂಚಾಯಿತಿ ಮಳಿಗೆಯಲ್ಲಿ ಈ ಹಿಂದೆ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರು. ಇತ್ತೀಚೆಗೆ ಚಿಕ್ಕಳ್ಳ ಸಮೀಪ ಮಧುವನ ಎಂಬ ಹೋಂ ಸ್ಟೇ ಪ್ರಾರಂಭಿಸಿದ್ದರು. ವೇಣುಗೋಪಾಲ್ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಈ ಸುದ್ದಿ ಓದಿದ್ದೀರಾ? ಜೀರೊ ಟ್ರಾಫಿಕ್ ಜೊತೆಗೆ ಹಾರ-ತುರಾಯಿ ಸನ್ಮಾನ ಬೇಡ; ಸಿದ್ದರಾಮಯ್ಯ