ವಿಜಯ ದಶಮಿಯ ಸಾಂಪ್ರದಾಯಿಕ ಪೂಜೆಯನ್ನು ರಾಜ ವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ನೆರವೇರಿಸಿದ್ದಾರೆ. ಬೆಳಗ್ಗೆ 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮಿಸಿದ್ದವು. ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ, ನಂತರ ಸವಾರಿ ತೊಟ್ಟಿಯಲ್ಲಿ ನಡೆದ ಜಟ್ಟಿ ಕಾಳಗವನ್ನು ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ವೀಕ್ಷಣೆ ಮಾಡಿದರು.
ಚಿನ್ನ ಲೇಪಿತ ಪಲ್ಲಕ್ಕಿಯಲ್ಲಿ ಖಾಸಾ ಆಯುಧಗಳನ್ನು ಇಟ್ಟು 11ರಿಂದ 11:40ರ ಸಮಯದಲ್ಲಿ ಅರಮನೆಯಿಂದ ಭುವನೇಶ್ವರಿ ದೇವಾಲಯದವರೆಗೆ ವಿಜಯ ದಶಮಿ ಮೆರವಣಿಗೆ ಸಾಗಿ, ಶಮಿ ಪೂಜೆ ನೆರವೇರಿಸಿದರು.
ಈ ಮೂಲಕ ನವರಾತ್ರಿಯ 10 ದಿನಗಳ ಧಾರ್ಮಿಕ ಕೈಂಕರ್ಯಗಳು ಇಂದಿಗೆ ಕೊನೆಗೊಂಡವು. ಸಂಜೆ ಜಂಬೂಸವಾರಿ ಮೆರವಣಿಗೆ ನಡಯಲಿದೆ. ಗಣ್ಯರೊಂದಿಗೆ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಜಂಬೂಸವಾರಿಯ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 4.40ರಿಂದ 5ರವರೆಗೆ ಸಲ್ಲುವ ಶುಭ ಮೀನ ಮುಹೂರ್ತದಲ್ಲಿ ಅಂಬಾರಿಯಲ್ಲಿನ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ರಾಜಪಥದಲ್ಲಿ ಸುಮಾರು ಐದು ಕಿ.ಮೀ ದೂರದವರೆಗೆ ಮೆರವಣಿಗೆ ಸಾಗಲಿದೆ. ನಂತರ ಬನ್ನಿಮಂಟಪದಲ್ಲಿ ಮೆರವಣಿಗೆ ಕೊನೆಗೊಳ್ಳಲಿದೆ. ಮೆರವಣಿಗೆ ಸಾಗುವ ವೇಳೆ ನಾಡಿನ ಕಲೆ, ಸಂಸ್ಕೃತಿ, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಭಾರಿ ಬಿಗಿ ಭದ್ರತೆ ವಹಿಸಲಾಗಿದೆ. 6,000ಕ್ಕೂ ಹೆಚ್ಚು ಪೊಲೀಸರನ್ನು ಜಂಬೂ ಸವಾರಿ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಒಬ್ಬರು ಡಿಐಜಿ, ಎಂಟು ಜನ ಎಸ್ಪಿ, 10 ಜನ ಅಡಿಷನಲ್ ಎಸ್ಪಿಗಳು ಹಾಗೂ ಸಿಟಿವಿ ಕ್ಯಾಮರಾಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು ಸೇರಿದಂತೆ ಭಾರಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಾಂಬ್ ಪತ್ತೆ ಮತ್ತು ನಿಗ್ರಹದಳ, ಶ್ವಾನದಳ ಸೇರಿದಂತೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.