“ರೈತ ಸಂಘಟನೆ ಮೌಢ್ಯದ ವಿರುದ್ಧ ಹೋರಾಟಗಳು, ಮಹಿಳಾ ಹೋರಾಟ, ಸ್ವಾಭಿಮಾನಿ ಹೋರಾಟ, ರೈತ ಹೋರಾಟ ಸಾಕಷ್ಟು ನಡೆದಿವೆ. ಗ್ರಾಮೀಣ ಪ್ರಜ್ಞೆ ಇಲ್ಲದ ಸಮಯದಲ್ಲಿ, ಪ್ರಜ್ಞಾವಂತಿಕೆ ಮೂಡಿಸಿದ ಶ್ರೇಯಸ್ಸು ರೈತ ಸಂಘಟನೆಗೆ ಸಲ್ಲಬೇಕು” ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಎನ್ ಎಸ್ ಸಭಾಂಗಣದಲ್ಲಿ ನ.9ರ ಶನಿವಾರದಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕಾಯಕ ಯೋಗಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.
“ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹಿಂದೆ ರೈತ ಸಂಘ ಪ್ರಬಲವಾಗಿತ್ತು. ರಾಮಕೃಷ್ಣ ಹೆಗಡೆ ಪಿರಿಯಾ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಿದ್ದರು. ಅಷ್ಟರಮಟ್ಟಿಗೆ ರೈತ ಸಂಘಟನೆ ಪ್ರಬಲವಾಗಿತ್ತು. ಈಗ ಅಂತಹ ವಾತಾವರಣ ಇಲ್ಲ. ಜಾತಿಯ ಜಡತ್ವ ಇರುವುದರಿಂದ ವರ್ಗ ಹೋರಾಟ ರೂಪುಗೊಂಡಿತ್ತು. ಅಂದಿನ ಸಮಯದಲ್ಲಿ ಆಧುನಿಕತೆ ಇರದ ವೇಳೆ ರೈತ ಸಂಘಟನೆ ಬಲವಾಗಿ ರೂಪಿತವಾಗಿತ್ತು” ಎಂದು ತಿಳಿಸಿದರು.

ರೈತ ಸಂಘ ಬರೀ ಹೋರಾಟ ಅಷ್ಟೇ ಅಲ್ಲ. ಸಾಕ್ಷರತೆ ರೂಪಿಸುವಲ್ಲಿಯೂ ಸಾಕಷ್ಟು ಕೆಲಸ ಮಾಡಿದೆ. ಸಾಮೂಹಿಕ ಬೇಸಾಯಕ್ಕೆ ಬುನಾದಿ ಹಾಕಿದ್ದು ರೈತ ಸಂಘ. ಈಗ ರಚನಾತ್ಮಕ ಕೆಲಸ ನಡೆಯುತ್ತಿಲ್ಲ. ರೈತ ಶಾಲು ಹಾಕೋದು ಪುಡಾರಿತನ ಮಾಡುವುದು, ವಸೂಲಿ ಮಾಡುವ ಕೆಲಸ ಮಾಡಿದ್ದಾರೆ.ಅಂತಹ ಅಪವಿತ್ರ ಕೆಲಸ ಮಾಡಬಾರದು ಎಂದು ಬಡಗಲಪುರ ನಾಗೇಂದ್ರ ಮನವಿ ಮಾಡಿದರು.
ಸಂಘಟನೆಯ ಕಾರ್ಯಕರ್ತ ಯಾವುದೇ ಕಾರಣಕ್ಕೂ ಇಂತಹ ಧೋರಣೆ ಮಾಡಕೂಡದು. ಮೊದಲು ಮಾಡಬೇಕಿರುವುದು ಯಾವುದೇ ರಾಜಕೀಯ ಪಕ್ಷಗಳ ಬಾವುಟ ಹಿಡಿದು ಹೋಗಬಾರದು. ಇಲ್ಲವಾದಲ್ಲಿ ಸಂಘಟನೆಯ ಕಾರ್ಯಕರ್ತರ ಮೇಲಿನಿ ನಂಬಿಕೆ ಉಳಿಯುವುದಿಲ್ಲ. ಜನರು ನಂಬುವುದು ನಂಬಿಕೆ ,ವಿಶ್ವಾಸದಿಂದ ಹೊರತು ಯಾವುದೇ ಕಾರಣಕ್ಕೂ ರೈತ ಶಾಲು ಹಾಕಿ ನಂಬಿಕೆ ದ್ರೋಹ ಮಾಡುವುದನ್ನಲ್ಲ. ರೈತ ಸಂಘ ಅಂದರೆ, ತನ್ನ ಮಗ ತಪ್ಪು ಮಾಡಿದರೂ ದಂಡ ಹಾಕಿದ ನಡೆ ನಮ್ಮ ಸಂಘಟನೆಯದು. ಪ್ರಾಮಾಣಿಕವಾಗಿ ಇದ್ದರೆ ಹಸಿರು ಟವೆಲ್ ಹಾಕಿ, ಇಲ್ಲವಾದರೆ ಹಾಕಬಾರದು ಎಂದರು.
ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತರಿಗೆ ಅನುಕೂಲ ಆಗುವಂತಹ,ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ರೈತ ಹೋರಾಟ ಚುರುಕಾಗಬೇಕು. ಯುವಕರು ಹೆಚ್ಚು ಹೆಚ್ಚು ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡು ರೈತ ಹೋರಾಟಕ್ಕೇ ಬಲ ತುಂಬಬೇಕು. ಸರ್ಕಾರಗಳು ರೈತರಿಗೆ ಭರವಸೆ ಕೊಡುವುದು ಆಗುತ್ತಿದೆಯೇ ಹೊರತು, ಯಾವುದೇ ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡುತ್ತಿಲ್ಲ. ರೈತರ ಭೂಮಿ ಬಂಡವಾಳ ಶಾಹಿಗಳ ಹಿಡಿತಕ್ಕೆ ಹೋಗುತ್ತಿದ್ದು, ಬಹು ಸಂಖ್ಯಾತರಾದ ರೈತ ಕುಲ ಇಂದು ಕಾರ್ಪೊರೇಟ್ ಕುಳಗಳ ಕೂಯ್ಯಲ್ಲಿ ಸಿಲುಕಿ ನಲುಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ಮಾತನಾಡಿ, ‘ಕಟ್ಟುತ್ತೇವ ನಾವು ಕಟುತ್ತೇವೆ, ಒಡೆದ ಮನಸುಗಳ ನಾವು ಕಟ್ಟುತ್ತೇವ ಅನ್ನುವ ಹಾಡಿನಂತೆ ರೈತರ ಕಷ್ಟಕ್ಕೆ ಹೆಗಲು ಕೊಟ್ಟು, ರೈತರ ಕಷ್ಟಕ್ಕೆ ಸ್ಪಂದಿಸಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲ ಒಗ್ಗೂಡಬೇಕಿದೆ. ಜನ ಪ್ರತಿನಿಧಿಗಳು ರೈತರ ಮತ ಪಡೆಯುವುದಷ್ಟೇ. ಅದನ್ನ ದಾಟಿ ರೈತರು ನಮ್ಮವರು, ನಾಡಿಗೆ ಅನ್ನ ಕೊಡುವವರು. ಅವರ ಪರವಾಗಿ ಕೆಲಸ ಮಾಡಬೇಕು ಅನ್ನುವ ಯಾವುದೇ ಇರಾದೆ ಇಲ್ಲದವರಿಗೆ ಸಂಘಟನೆಯ ಹೋರಾಟದ ಮೂಲಕ ಪಾಠ ಕಲಿಸಬೇಕಿದೆ ಎಂದರು.
ನಾಡಿಗೆ ಅನ್ನ ನೀಡುವ ರೈತ ಸರ್ಕಾರ, ಅಧಿಕಾರಿಗಳ ದಬ್ಬಾಳಿಕೆ ಸಿಲುಕಿ ಇಂದು ಆತ್ಮಹತ್ಯೆಯ ಕಡೆಗೆ ಹೆಜ್ಜೆ ಹಾಕ್ತಾ ಇದ್ದಾನೆ. ಅನ್ನ ಕೊಡುವ ಕೈ ವಿಷ ಕುಡಿಯುವ ಪರಿಸ್ಥಿತಿಗೆ ದೂಡಿದವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಅಸಮರ್ಪಕ ರಸ್ತೆಯಿಂದಾಗಿ ಸ್ಕಿಡ್ ಆಗಿ ಬಿದ್ದ ಬೈಕ್: ಟ್ಯಾಂಕರ್ ಹರಿದು ಮಹಿಳೆ ಮೃತ್ಯು
ಕಾರ್ಯಕ್ರಮದಲ್ಲಿ ಡಾ ರಾಜೇಶ್, ಡಾ ವೈ ವಿ ಪ್ರಕಾಶ್, ಶ್ರೀಮತಿ ಜವರಮ್ಮ, ಕರೀಗೌಡ, ಭರತ್ ಅರಸು ಹಾಗೂ ಶಾರದಮ್ಮ ಅವರಿಗೆ ‘ಕಾಯಕ ಯೋಗಿ ಪ್ರಶಸ್ತಿ’ ಪ್ರದಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಕಿಪುರ ಚಿಕ್ಕಣ್ಣ, ಮರಂಕಯ್ಯ, ಅಗ್ರಹಾರ ರಾಮೇಗೌಡ, ಸ್ವಾಮಿ ಗೌಡ, ಮಹಾದೇವ, ಮೀನಾಕ್ಷಿ ಮಹೇಶ್, ಗಡಿಗೌಡ, ಪ್ರಕಾಶ್ ರಾಜ್ ಅರಸ್ ಮೊದಲಾದವರು ಉಪಸ್ಥಿತರಿದ್ದರು.

