ಮೈಸೂರು ಜಿಲ್ಲೆ ನಂಜನಗೂಡು ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಯೋಜಕ ಶಾಖೆಯ ವತಿಯಿಂದ “ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ಸಮಕಾಲೀನ ಸವಾಲುಗಳು” ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಸಂಸ ರಾಜ್ಯ ಸಂಸ್ಥಾಪಕ ಸಂಯೋಜಕ ವಿ ನಾಗರಾಜ್, “ಬಾಬಾ ಸಾಹೇಬರ ಸಂವಿಧಾನ ಎಲ್ಲರಿಗೂ ಸಮಾನತೆ ಕಲ್ಪಿಸಿದೆ. ಆದರೆ ಸಮಾನತೆ ಎಲ್ಲಿದೆ? ಯಾರಲ್ಲಿ ಸಮಾನತೆ ಇದೆ. ಸಮಾಜದಲ್ಲಿ ಎಲ್ಲ ಜಾತಿ ಧರ್ಮಗಳ ನಡುವೆ ಸಮಾನತೆ ಇದೆಯೇ ಅಂದ್ರೆ ಖಂಡಿತ ಇಲ್ಲ. ಈಗಲೂ ಮೇಲು-ಕೀಳು ಅನ್ನುವ ಅಮಾನವೀಯ ನಡಾವಳಿಗಳಿಂದ ಬೇಸತ್ತು, ಬಸವಳಿದಿದ್ದೇವೆ. ಸಂವಿಧಾನ ಎಲ್ಲರಿಗೂ ಮೂಲಭೂತ ಹಕ್ಕನ್ನು ನೀಡಿದೆ. ಆದರೆ, ಮೇಲ್ವರ್ಗದವರ ಷಡ್ಯಂತ್ರದಿಂದ ದಲಿತರಿಗೆ ಸಿಗಬೇಕಿದ್ದ ರಾಜಕೀಯ ಸ್ಥಾನಮಾನ, ಮೀಸಲಾತಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ” ಎಂದು ವಿಷಾದ ವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿ ಪ್ರಾಧ್ಯಾಪಕರಾದ ಡಾ ಆನಂದ್ ಮಾತನಾಡಿ, “ಇತಿಹಾಸ ಗಮನಿಸುವುದೇ ಆದರೆ ಇದುವರೆಗೆ ಶೋಷಣೆಯಿಂದಲೇ ಕೂಡಿದೆ. ಇದುವರೆಗೂ ಬದಲಾಗಲೇ ಇಲ್ಲ. ಮನುಷ್ಯರನ್ನು ಮನುಷ್ಯರಂತೆ ಕಾಣಲೇ ಇಲ್ಲ. ಸಮಾಜದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಎಲ್ಲಿ ನೋಡಿದರೂ, ಯಾವುದರಲ್ಲೂ ತಾರತಮ್ಯ. ಜನರನ್ನ ಮೇಲು ,ಕೀಳು ಎಂಬರ್ಥದಲ್ಲಿ ಅಳೆಯುವುದು, ಕಾಣುವುದು ಇಂದಿನ ಸಮಾಜದ ದುರಂತ. ಬಾಬಾ ಸಾಹೇಬರು ಸಹ ಇದರಿಂದ ನೋವುಂಡವರು. ಇದನ್ನೆಲ್ಲ ತೊಲಗಿಸಿ ಸಮಾಜದಲ್ಲಿ ಸಮಾನರಾಗಿ ಎಲ್ಲರೂ, ಎಲ್ಲ ಹಕ್ಕುಗಳನ್ನು ಅನುಭವಿಸಬೇಕು. ಸಮಾನರಾಗಿ ಬದುಕಬೇಕು ಎಂದು ಸಂವಿಧಾನ ನೀಡಿದರು. ಆದರೆ ಇವತ್ತಿನ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ಹೋಗಲಾಡಿಸಿ ಬಾಬಾ ಸಾಹೇಬರ ಆಶಯಗಳನ್ನು ಅನುಷ್ಠಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದರು.
ಇದನ್ನು ಓದಿದ್ದೀರಾ? ತುಮಕೂರು | ಬಂಡೆಕಲ್ಲು, ನೀರಿನ ಮಧ್ಯೆ 12 ಗಂಟೆ ಕಳೆದಿದ್ದು ಹೇಗೆ? ಬದುಕುಳಿದ ವಿದ್ಯಾರ್ಥಿನಿ ಹೇಳಿದ್ದು ಹೀಗೆ..
ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ವಿದ್ಯಾಸಾಗರ,ಹರಕು ಕುಮಾರ್, ಮಹದೇವಸ್ವಾಮಿ, ಕಾರ್ಯ ಬಸವಣ್ಣ,ಕುಮಾರ್ ಕಳಲೆ, ಸೋಮಣ್ಣ, ಬೆಳಗೆರೆ ಕೃಷ್ಣ, ಮಲ್ಕೊಂಡೆ ಪುಟ್ಟ ಬುದ್ಧಿ, ಮಲ್ಕೊಂಡೆ ಕೃಷ್ಣಮೂರ್ತಿ, ಚಿಕ್ಕಣ್ಣ, ಶಿವರಾಜು, ಸಿದ್ದರಾಜು, ಮಹದೇವಸ್ವಾಮಿ ಶಂಕರ್ ಪುರ, ಮಹದೇವಸ್ವಾಮಿ, ರವಿ ಮೊದಲಾದವರು ಇದ್ದರು.
