ಹಲವಾರು ಮಹನೀಯರ ತ್ಯಾಗ, ಬಲಿದಾನ ಹಾಗೂ ಹೋರಾಟದ ಪ್ರತಿಫಲವಾಗಿ ಅಖಂಡ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು,ಕನ್ನಡನಾಡು,ನುಡಿ,ನೆಲ, ಜಲ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ಎಪ್ಪತ್ತು ವರ್ಷ ಗತಿಸುತ್ತಿದ್ದರೂ, ಪ್ರಾದೇಶಿಕ ಅಸಮಾನತೆಯಿಂದ ಉತ್ತರ ಕರ್ನಾಟಕ ಭಾಗ ಎಲ್ಲ ರಂಗದಲ್ಲೂ ಹಿಂದುಳಿದಿದೆ. ಇದು ದುರದೃಷ್ಟಕರ ಎಂದು ನ್ಯಾಯವಾದಿ ದಾನೇಶ ಅವಟಿ ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಜಯಪುರ ನಗರದ ಸಿಂದಗಿ ರಸ್ತೆಯ ಜೈ ಕರ್ನಾಟಕ ಕಾಲೋನಿಯ ಇಮ್ಮಡಿ ಪುಲಿಕೇಶಿ ಯುವಕ ಸಂಘಟನೆಯ ಮಿತ್ರರೊಂದಿಗೆ ತಾಯಿ ಶ್ರೀ ಭುವನೇಶ್ವರಿ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗ ಎಲ್ಲ ರಂಗದಲ್ಲೂ ಹಿಂದುಳಿಯಲು ಕಾರಣ ಆಳುವ ಸರ್ಕಾರ ಮತ್ತು ಜನಪ್ರತಿನಿಧಿಗಳು. ಅಧಿಕಾರಿ ವರ್ಗ ಉತ್ತರ ಕರ್ನಾಟಕದ ಸಮಗ್ರ ಅಭಿವದ್ಧಿಗೆ ಆದ್ಯತೆ ನೀಡಬೇಕು ಎಂದು ಅವಟಿ ಇದೇ ವೇಳೆ ಆಗ್ರಹಿಸಿದರು.
ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ, ಮಹಾಜನ್, ಸರೋಜನಿ ಮಹಿಷಿ, ಬರಗೂರು ವರದಿಯಂತಹ ಮಹತ್ವದ ವರದಿಗಳ ಶಿಫಾರಸುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೂ, ಅವುಗಳನ್ನು ಇಷ್ಟು ದಿನ ರಾಜ್ಯಭಾರ ಮಾಡಿದ ಸರ್ಕಾರಗಳು, ಜನಪ್ರತಿನಿಧಿಗಳು ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿಲ್ಲ ಎಂದು ದೂರಿದರು.

ಕೇವಲ ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ಘೋಷಣೆ ಮಾಡಿ ಕೆಲವೊಂದಿಷ್ಟು ಜಾತ್ರೆ ಉತ್ಸವ ಮಾಡಲು ಅನುದಾನ ಕೊಟ್ಟರಷ್ಟೇ ಸಾಲದು. ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿ,ನಗರಗಳ ಜನರ ಜೀವನಮಟ್ಟ ಸುಧಾರಣೆಗೆ, ಸರ್ವರ ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಆಳುವ ಸರ್ಕಾರಗಳು ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶರಣು ಜೋಗುರ, ಮೋಹನಕುಮಾರ ಬಣ್ಣದ, ಪರಶುರಾಮ ರಜಪೂತ, ಡಾ.ಸಂಜು ಸಿಳ್ಳಿನ., ಡಾ.ವಾಸು ಢಗೆ, ಶಿವಲಿಂಗಯ್ಯ ತೆಗ್ಗಳ್ಳಿ, ಕರಣ ಸಿಂಗ ಹಜೇರಿ, ಶಿವು ಲೋಗಾವೀ, ಅಪ್ಪು ಗುನ್ನಾಪುರ, ಪ್ರಭು ಮಠ, ರಾಚಯ್ಯ ಚೌಕಿಮಠ, ಶ್ರೀಶೈಲ ಯಾದವಾಡಮಠ, ನಾಗೇಶ ನಿರ್ವಾಣಶೆಟ್ಟಿ, ರುದ್ರು ಪಾಟೀಲ, ಸಂತೋಷ ನಾವಿ, ಮಹಾದೇವ ನಾವಿ, ಬಸವರಾಜ ಇಂಡಿ, ಹರೀಶ್ ಚೌಕಿಮಠ, ಗಿರೀಶ ಚೌಕಿಮಠ, ಅನಿಲ್ ಕುಮಾರ್ ಇಂಡಿ, ರಮೇಶ್ ಹಜೇರಿ, ಜೈ ಕರ್ನಾಟಕ ಕಾಲೋನಿ, ಅಲ್ಲಾಪುರ ಅಗಸಿ, ಸ್ಟೇಟ್ ಬ್ಯಾಂಕ್ ಕಾಲೋನಿ, ನಾಗೇಶ ಕಾಲೋನಿಯ ಅನೇಕ ಜನರು ಉಪಸ್ಥಿತರಿದ್ದರು.
