- ಹಿಂದೆ ಕಂದಾಯ ಇಲಾಖೆಯಿಂದ ದಲಿತರಿಗೆ ಮಂಜೂರಾಗಿದ್ದ ಜಾಗ
- 150ಕ್ಕೂ ಹೆಚ್ಚು ಶವಗಳ ಅಂತ್ಯಕ್ರೀಯೆ ಇದೇ ಜಾಗದಲ್ಲಿ ಮಾಡಲಾಗಿದೆ
ದಲಿತರಿಗೆ ಮೀಸಲಾಗಿದ್ದ ಸ್ಮಶಾನ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಕಾನ್ಸಿರಾಂ ನಗರದ ನಿವಾಸಿಗಳು ಧರಣಿ ನಡೆಸಿದರು.
“ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಹೊದ್ದುರು ಗ್ರಾಮ ಪಂಚಾಯಿತಿ ಪಾಲೆಮಾಡು ಸರ್ವೇ ನಂ. 167/1ಎ ಜಗದಲ್ಲಿ ಕಾನ್ಸಿರಾಂ ನಗರದ ಪರಿಶಿಷ್ಟ ಜಾತಿಯ ಸ್ಮಶಾನಕ್ಕಾಗಿ 2009-10ರಲ್ಲಿ ಜಿಲ್ಲಾಧಿಕಾರಿ ಎರಡು ಎಕರೆ ಜಾಗವನ್ನು ಮಂಜೂರು ಮಾಡಿದ್ದರು” ಎಂದು ದಲಿತ ಮುಖಂಡ ಮೊಣ್ಣಪ್ಪ, ಈದಿನ.ಕಾಮ್ಗೆ ತಿಳಿಸಿದರು.
“ಜಿಲ್ಲಾಧಿಕಾರಿ ಮಂಜೂರು ಮಾಡಿದ್ದ ಜಾಗವನ್ನು ಪರಿಶಿಷ್ಟ ಜಾತಿಯವರು ಸ್ಮಶಾನ ಜಾಗವನ್ನಾಗಿ ಉಪಯೋಗಿಸುತ್ತಾ ಸುಮಾರು 150ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದಾರೆ. ಈ ಸರ್ವೇ ನಂಬರ್ ಜಾಗವನ್ನು ಜಿಲ್ಲಾಡಳಿತವು ಕರ್ನಾಟಕ ಕ್ರಿಕೆಟ್ ಸಂಸ್ಥೆಯವರಿಗೆ ಕ್ರೀಡಾಂಗಣದ ಉದ್ದೇಶಕ್ಕಾಗಿ ಗುರುತಿಸಿದೆ” ಎಂದರು.

“ಕಂದಾಯ ಇಲಾಖೆಯು ಈ ಹಿಂದೆ ಪರಿಶಿಷ್ಟ ಜಾತಿಯವರಿಗೆ ಮಂಜೂರು ಮಾಡಿದ್ದ ಎರಡು ಎಕರೆ ಜಾಗವನ್ನು ಒಳಗೊಂಡಂತೆ ಸರ್ವೇ ಕಾರ್ಯ ನಡೆಸಿದ್ದು, ದಲಿತರ ಸ್ಮಶಾನವನ್ನು ನಾಶಪಡಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಕೊಡಲು ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಈ ಎಲ್ಲ ಪ್ರಕ್ರಿಯೆಗಳಿಗೆ ಜಿಲ್ಲಾಧಿಕಾರಿಗಳು ನೇರ ಹೊಣೆಯಾಗಿದ್ದಾರೆ. ನ್ಯಾಯಾಲಯಕ್ಕೆ ಸರಿಯಾದ ದಾಖಲೆ ಸಲ್ಲಿಸದೆ, ಪಾಲೆಮಾಡು ದಲಿತರಿಗೆ ಮಂಜೂರಾದ ಸ್ಮಶಾನ ಜಾಗವನ್ನು ದುರಸ್ತಿ ಮಾಡದೆ ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿ ಅವರು ಕ್ರಿಕೆಟ್ ಸಂಸ್ಥೆಯ ಜೊತೆ ಸೇರಿ ದಲಿತರಿಗೆ ಮೋಸ ಮಾಡಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಕುರಾನ್ ಪಠಣ ವಿವಾದದಿಂದ ರಥೋತ್ಸವಕ್ಕೆ ಅಡ್ಡಿಯಾಗದು; ವಿದ್ಯುಲ್ಲತಾ ಸ್ಪಷ್ಟನೆ
“ನಮ್ಮ ಸಮುದಾಯದ ಯಾರೇ ನಿಧನರಾದರೂ ಇದೆ ಜಾಗದಲ್ಲಿ ಅಂತ್ಯಕ್ರೀಯೆ ನಡೆಸುತ್ತಾ ಬಂದಿದ್ದು, ಈ ಜಾಗದ ಮೇಲೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಆದರೆ, ಜಿಲ್ಲಾಡಳಿತ ಇದಕ್ಕೆಲ್ಲ ಬೆಲೆ ಕೊಡದೆ ನಮ್ಮಲ್ಲಿರುವ ದಾಖಲೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅನ್ಯಾಯ ಮಾಡುತ್ತಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
“ಕಾನ್ಸಿರಾಂ ನಗರದ ದಲಿತ ಸಮುದಾಯ ಹಾಗೂ ಇತರ ಸಮಾನ ಮನಸ್ಕರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.