- ರಾಜ್ಯದ ಹಲವೆಡೆ ಏಕ ಕಾಲಕ್ಕೆ ಲೋಕಾಯುಕ್ತ ದಾಳಿ
- ಮನೆ ಮುಂದೆ ಬಿದ್ದು ಹೊರಳಾಡಿದ ತಹಶೀಲ್ದಾರ್
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ನಿವೃತ್ತ ಡಿಸಿಎಫ್ ಸೇರಿದಂತೆ ಎಂಟು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ರಾಜ್ಯದ ಹಲವು ಜಿಲ್ಲೆಗಳ 34 ಸ್ಥಳಗಳ ಮೇಲೆ ಸೋಮವಾರ ಏಕಕಾಲಕ್ಕೆ ದಾಳಿ ಮಾಡಿ, ಶೋಧ ನಡೆಸಿದ್ದಾರೆ.
ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹುದ್ದೆಯಿಂದ ಮೂರು ತಿಂಗಳ ಹಿಂದೆ ನಿವೃತ್ತರಾಗಿರುವ ಐ ಎಂ ನಾಗರಾಜ್, ಹೊಳಲ್ಕೆರೆ ತಹಶೀಲ್ದಾರ್ ಎನ್ ಜೆ ನಾಗರಾಜ್, ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನಾ ವಿಭಾಗದ ಉಪ ನಿರ್ದೇಶಕ ಕೆ ಎಲ್ ಗಂಗಾಧರಯ್ಯ, ಬೊಮ್ಮನಹಳ್ಳಿ ವಲಯದ ಮಳೆನೀರು ಕಾಲುವೆ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಟಿ ಹನುಮಂತರಾಯ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಜೊತೆಗೆ, ಬಾಗೇಪಲ್ಲಿಯ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವೆಂಕಟೇಶಪ್ಪ, ಬಳ್ಳಾರಿಯ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಹುಸೇನ್ ಸಾಬ್, ಬೀದರ್ನ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಮೇದ ಮತ್ತು ಬಸವಕಲ್ಯಾಣ ತಾಲ್ಲೂಕಿನ ಮುಡಬಿ ನಾಡ ಕಚೇರಿಯ ಉಪ ತಹಶೀಲ್ದಾರ್ ವಿಜಯಕುಮಾರ ಸ್ವಾಮಿ ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿವೃತ್ತ ಅಧಿಕಾರಿ ಬಳಿ ಆನೆ ದಂತ ಪತ್ತೆ
ಮೂರು ತಿಂಗಳ ಹಿಂದೆ ನಿವೃತ್ತರಾಗಿದ್ದ ಐ ಎಂ ನಾಗರಾಜ್ ಇತ್ತೀಚೆಗೆ ತಾನು ಆಮ್ ಆದ್ಮಿ ಪಾರ್ಟಿಯಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿಕೊಂಡಿದ್ದರು. ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಪರವಾಗಿ ಚುನಾವಣಾ ಪ್ರಚಾರದಲ್ಲೂ ಭಾಗವಹಿಸಿದ್ದರು.
ನಾಗರಾಜ್ ಬಳಿ ಶಿವಮೊಗ್ಗದಲ್ಲಿ ಮನೆ, ವಾಣಿಜ್ಯ ಕಟ್ಟಡ ಹತ್ತು ಎಕರೆ ಅಡಿಕೆ ತೋಟ ಎರಡು ಸರ್ವೀಸ್ ಸ್ಟೇಷನ್ ಸೇರಿದಂತೆ ₹4.29 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಅವರ ಮನೆಯಲ್ಲಿ 8 ಇಂಚು ಉದ್ದದ ಆನೆ ದಂತವೊಂದನ್ನು ತನಿಖಾ ತಂಡ ವಶಕ್ಕೆ ಪಡೆದಿದ್ದು, ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಲೋಕಾಯುಕ್ತ ದಾಳಿ | ಗಂಗಾಧರಯ್ಯ ನಿವಾಸದಲ್ಲಿ ₹1.40 ಕೋಟಿ ನಗದು, ಚಿನ್ನಾಭರಣ ಪತ್ತೆ
ಬಿದ್ದು ಹೊರಳಾಡಿದ ಅಧಿಕಾರಿ
ಬಂಗಾರಪೇಟೆಯಿಂದ ಇತ್ತೀಚೆಗಷ್ಟೇ ಬಾಗೇಪಲ್ಲಿಗೆ ವರ್ಗಾವಣೆಯಾಗಿದ್ದ ವೆಂಕಟೇಶಪ್ಪ ಲೋಕಾಯುಕ್ತ ದಾಳಿಯ ವಿಷಯ ತಿಳಿದು ಮನೆಗೆ ದೌಡಾಯಿಸಿ ಬಂದು, ಮನೆ ಬಾಗಿಲ ಬಳಿ ಬಿದ್ದು ಹೊರಳಾಡಿದರು. ಲೋಕಾಯುಕ್ತ ಪೊಲೀಸರು ಅವರನ್ನು ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿದರು.
ಹುಸೇನ್ ಸಾಬ್ ಅವರಿಗೆ ಸಂಬಂಧಿಸಿದಂತೆ ಬಳ್ಳಾರಿಯ ಐದು ಮತ್ತು ವಿಜಯನಗರ ಜಿಲ್ಲೆಯ ಒಂದು ಕಡೆ ಶೋಧ ನಡೆಸಲಾಗಿದೆ. ಗುತ್ತಿಗೆದಾರರೊಬ್ಬರ ಮನೆಯಲ್ಲೂ ಶೋಧ ನಡೆದಿದೆ. ಮನೆ, ಶಿಡಿಗಿನಮೊಳದಲ್ಲಿ ಫಾರ್ಮ್ ಹೌಸ್, ಆರು ಎಕರೆ ತೋಟ, ₹1.23 ಲಕ್ಷ ನಗದು, 1 ಕೆ.ಜಿ. ಚಿನ್ನ ಸೇರಿದಂತೆ ಹಲವು ಆಸ್ತಿಗಳು ಪತ್ತೆಯಾಗಿವೆ.
ತಹಶೀಲ್ದಾರ್ ಎನ್ ನಾಗರಾಜ್ ತಂಗಿದ್ದ ಹೊಳಲ್ಕೆರೆಯ ಹೋಟೆಲ್ ಕೊಠಡಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಅವರ ಮನೆಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ. ಹನುಮಂತರಾಯಪ್ಪ ಚಿತ್ರದುರ್ಗ ಜಿಲ್ಲೆಯ ಬೋಚಾಪುರದಲ್ಲಿ ಹೊಂದಿರುವ ಫಾರ್ಮ್ ಹೌಸ್ ಮೇಲೂ ದಾಳಿ ನಡೆಸಲಾಗಿದೆ.
ಸುರೇಶ್ ಮೇದಾ ಬಳಿ ಮನೆಗಳು ಸೇರಿದಂತೆ ಹಲವು ಆಸ್ತಿಗಳು ಪತ್ತೆಯಾಗಿವೆ. ವಿಜಯ ಕುಮಾರಸ್ವಾಮಿ ಮನೆ, ಗ್ಯಾರೇಜ್ ಮತ್ತಿತರ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ನಿವಾಸ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ