ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ಕಂಡು ಬಂದಲ್ಲಿ ಮೇಲ್ವಿಚಾರಕರು ಸೇರಿದಂತೆ ನಿಯೋಜಿಸಿದ ಅಧಿಕಾರಿಗಳನ್ನೂ ಅಮಾನತು ಮಾಡಲಾಗುವುದು ಎಂದು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಸಭೆಯ ಘನತ್ಯಾಜ್ಯ ಸಂಗ್ರಹ ವಿಲೇವಾರಿ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದರು.
“ನಗರ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರದ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು 10 ಮಂದಿ ಒಳಗೊಂಡಂತೆ ಎರಡು ತಂಡ ರಚನೆ ಮಾಡಿ ಕಸ ಸಂಗ್ರಹಿಸಬೇಕು. ಮೇಲ್ವಿಚಾರಕರ ನೇತೃತ್ವದಲ್ಲಿ ಸಮರ್ಪಕವಾಗಿ ವೀಲೆವಾರಿ ಮಾಡಬೇಕು. 4 ದಿನಗಳ ಒಳಗಾಗಿ ಎಲ್ಲವನ್ನೂ ಸರಿಪಡಿಸಬೇಕು” ಎಂದು ಸೂಚನೆ ನೀಡಿದರು.
“ನಗರದಲ್ಲಿರುವ 35 ವಾರ್ಡ್ಗಳಲ್ಲಿ ನಿತ್ಯ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ವಾಹನಗಳ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಕಸ ಸಂಗ್ರಹಕ್ಕೆ ಪ್ರತೇಕ ಕಸ ಹಾಕುವ ಸ್ಥಳದಲ್ಲಿ ಕಸ ನಿತ್ಯ ಸಂಗ್ರಹವಾಗುತ್ತಿದೆ. ಇದರಿಂದ ಹಂದಿ ನಾಯಿಗಳು ಚೆಲ್ಲಾಪಿಲ್ಲಿಯಾಗಿಸಿ ದುರ್ವಾಸನೆ ಹರಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡಿದರೆ ಕಸ ರಸ್ತೆಯಲ್ಲಿ ಯಾಕೆ ಸಂಗ್ರಹವಾಗುತ್ತದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸದೇ ಇರುವುದರಿಂದ ರಸ್ತೆಗೆ ಕಸ ಎಸೆಯುತ್ತಿದ್ದಾರೆ. ಇದರಿಂದ ನಿತ್ಯ ತೊಂದರೆಯಾಗುತ್ತಿದೆ” ಎಂದರು.
“ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವುದರ ಜೊತೆಗೆ ಕಸ ಸಂಗ್ರಹವಾಗುವ ಸ್ಥಳದಲ್ಲಿ ಕಸ ವಿಲೇವಾರಿ ಮಾಡಬೇಕು. ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಸಿಬ್ಬಂದಿ, ನಿವಾಸಿಗಳಿಗೆ ರಸ್ತೆಯಲ್ಲಿ ಕಸ ಹಾಕದಂತೆ ಮನವರಿಕೆ ಮಾಡಿ, ವಾಹನ ಬಂದ ಸಂದರ್ಭದಲ್ಲಿ ಕಸ ಹಾಕುವಂತೆ ಮನವರಿಕೆ ಮಾಡಬೇಕು” ಎಂದು ತಿಳಿಸಿದರು.
“ಕಸ ವಿಲೇವಾರಿ ಮಾಡುವ ವಾಹನ ಚಾಲಕರೂ ಕಸವನ್ನು ಬಿಟ್ಟು ಹೋಗದೇ ಕಸ ವಿಲೇವಾರಿ ಕಡ್ಡಾಯವಾಗಿ ಮಾಡಬೇಕು. ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕಸವನ್ನು ವಾಹನ ಬಂದಾಗ ನೀಡಬೇಕು ಎಲ್ಲೆಂದರಲ್ಲಿ ಹಾಕುವಂತಿಲ್ಲ. ಈ ಬಗ್ಗೆ ನೋಟಿಸ್ ನೀಡಿ” ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
“ನಗರದ ಕೆಲ ಪ್ರದೇಶದಲ್ಲಿ ವಿಪರೀತವಾಗಿ ಕಸ ಶೇಖರಣೆಯಾಗುತ್ತಿದೆ. ವಿಲೇವಾರಿ ಮಾಡದೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ವಾಹನಗಳಲ್ಲಿ ಸ್ಪೀಕರ್ ಅಳವಡಿಸಿ ವಾಹನದಲ್ಲಿ ಕಸ ಹಾಕಲು ತಿಳಿಸಿ ಜಾಗೃತಿ ಮೂಡಸಬೇಕು. ನಗರದಲ್ಲಿ ಭಿತ್ತಿ ಪತ್ರಗಳು ಗೋಡೆ ಬರಹ ಸೇರಿ ಜಾಗೃತಿ ಫಲಕಗಳನ್ನು ಅಳವಡಿಸಬೇಕು” ಎಂದು ತಿಳಿಸಿದರು.
“ಮೇಲ್ವಿವಾರಕರು ಕಸ ಗುಡಿಸುವವರನ್ನು ಮತ್ತು ವಾಹನ ಚಾಲಕರನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಸ ವಿಲೇವಾರಿಗೆ ಮುಂದಾಗಬೇಕು. ನಗರಕ್ಕೆ ವಿಸಿಟ್ ಮಾಡುವ ಸಂದರ್ಭದಲ್ಲಿ ಕಸ ವಿಲೇವಾರಿ ಆಗದೇ ಇರುವುದು ಸ್ಥಳದಲ್ಲಿ ಕಂಡುಬಂದರೆ ಸಂಬಂಧಪಟ್ಟವರನ್ನು ಅಮಾನತು ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾಡುಪ್ರಾಣಿಗಳ ಹಾವಳಿ ತಡೆಗೆ ರೈತ ಸಂಘ ಒತ್ತಾಯ
“ಮುಂದಿನವಾರದಿಂದ ಪ್ರತಿಯೊಂದು ವಾರ್ಡ್ಗಳನ್ನು ಪರಿಶೀಲನೆ ಮಾಡಲಾಗುವುದು. ಜನರಿಂದ ದೂರು ಬಂದಲ್ಲಿ ಕೆಲಸ ಮಾಡುತ್ತಿಲ್ಲವೆಂದು ಗೊತ್ತಾಗುತ್ತದೆ. ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ಹಂಪಣ್ಣ ಸಜ್ಜನ್, ಸ್ಯಾನಿಟರ್ ಇನ್ಸ್ಪೆಕ್ಟರ್ ಸೇರಿದಂತೆ ಮೇಲ್ವಿಚಾರಕರು(ಸೂಪರ್ ವೈಜರ್) ಇದ್ದರು.