ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಪಲನಕಮರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಡೆಯಾಜ್ಞೆ ಇರುವುದರಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದನಗೌಡ ಮೂಡಲಗುಂಡಾ ಎಂಬುವವರು ಅಧಿಕಾರಿಗಳನ್ನು ಬೆದರಿಸಿ ಕ್ರಿಯಾ ಯೋಜನೆ ರೂಪಿಸುವಂತೆ ಬೆದರಿಸುತ್ತಿದ್ದಾರೆ ಈ ಕುರಿತು ಜಿಲ್ಲಾಧಿಕಾರಿಯವರು ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಡಿಎಸ್ಎಸ್ ಮುಖಂಡ ಶಿವಪ್ಪ ಪಲಕನಮರಡಿ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, “ಗ್ರಾಮ ಪಂಚಾಯಿತಿಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದಂತಾಗಿದೆ. 11 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. 72 ಲಕ್ಷ ರೂ. ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ, 42 ಲಕ್ಷ ರೂ. ವೆಚ್ಚದಲ್ಲಿ ಎಸ್ಟಿಎಂ, 24 ಲಕ್ಷ ರೂ. ವೆಚ್ಚದಲ್ಲಿ ಒಎಂಟಿ ಕುಡಿಯುವ ನೀರಿನ ಯೋಜನೆ ಹಣ ಖರ್ಚಾದರೂ ಜನರಿಗೆ ನೀರು ದೊರೆಯುತ್ತಿಲ್ಲ. ಅಮರಗುಂಡಪ್ಪ ಮೇಟಿ ಎಂಬ ಗುತ್ತಿಗೆದಾರಿಂದ ಕಾಮಗರಿ ಅಪೂರ್ಣವಾಗಿದೆ” ಎಂದು ಆರೋಪಿಸಿದರು.
“11 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ವಿಫಲವಾಗಿದೆ. ರಸ್ತೆ ಸೇರಿದಂತೆ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯದಂತಾಗಿದೆ. ಈಗ ಸದಸ್ಯರಿಗೆ ಗೊತ್ತಿಲ್ಲದಂತೆ 15ನೇ ಹಣಕಾಸು ಹಾಗೂ ಉದ್ಯೋಗ ಖಾತ್ರಿ ಯೋಜನೆ ಕ್ರಿಯಾ ಯೋಜನೆ ರೂಪಿಸಲು ಆಡಳಿತಾಧಿಕಾರಿ ಹಾಗೂ ಪಿಡಿಒಗಳಿಗೆ ಒತ್ತಡ ಹಾಕಲಾಗುತ್ತಿದೆ. ಈ ಹಿಂದೆ ಮೂಡಲಗುಂಡ ಸಿದ್ದನಗೌಡ ಅವರು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಇಲ್ಲವೆಂದು ದೂರಿದ್ದರು. ಈಗ ಪಿಡಿಒ ಅವರು ಕೆಲಸ ಮಾಡುತ್ತಿದ್ದರೂ ಅವರಿಗೆ ಬೆದರಿಸುತ್ತಿದ್ದಾರೆ. ಹೀಗಾಗಿ ಅಭಿವೃದ್ದಿ ಕೆಲಸಗಳು ನಡೆಯದಂತಾಗಿದೆ” ಎಂದರು.
“ಕಂಪ್ಯೂಟರ್ ಆಪರೇಟರ್ ಸಣ್ಣಬಸವ ಎಂಬುವವರ ಮೇಲೆ ಹಲ್ಲೆ ಮಾಡಿ ಕೆಲಸದಿಂದ ತೆಗೆದು ಹಾಕಿದ್ದರು. ಈಗ ಬೇರೆಯವರನ್ನು ನೇಮಿಸಿಕೊಮಡು ಪಾಸ್ವರ್ಡ್ ನೀಡುವಂತೆ ಹೆದರಿಸಲಾಗುತ್ತಿದೆ. ಶಾಸಕರು ಹಾಗೂ ಮೂಡಲಗುಂಡ ಸಿದ್ದನಗೌಡ ಒತ್ತಡ ಹಾಕುತ್ತಿರುವದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ 13 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡುವದಾಗಿ ಹೇಳಿದ್ದಾರೆ. ಇಲ್ಲದೇ ಹೋದಲ್ಲಿ ದೇವದುರ್ಗ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಗ್ರಾ. ಪಂಚಾಯಿತಿ ಸದಸ್ಯನಿಂದ ವ್ಯಕ್ತಿಗೆ ಅವಮಾನ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹನುಮನಗೌಡ ಮದರಕಲ್, ಅಮರೇಶ ಪೊಲೀಸ್ ಪಾಟೀಲ್ ಇದ್ದರು.
ವರದಿ : ಹಫೀಜುಲ್ಲ