ಕೇಂದ್ರ ಸರ್ಕಾರ ಚಾಲಕರ ವಿರೋಧಿ ಅವೈಜ್ಞಾನಿಕ ಬಿಲ್ ಮಂಡನೆ ಮಾಡಿದೆ ಎಂದು ಕರ್ನಾಟಕ ಚಾಲಕರ ಒಕ್ಕೂಟ ಈ ಬಿಲ್ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ನಗರದ ಟಿಪ್ಪುಸುಲ್ತಾನ್ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾರವರು ಸಂಸತ್ನಲ್ಲಿ ಚಾಲಕರ ವಿರುದ್ಧ ಅವೈಜ್ಞಾನಿಕವಾದ ಬಿಲ್ಲನ್ನು ಪಾಸು ಮಾಡಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೂ ಹೋಗಿದೆ. ಈ ಬಿಲ್ನಿಂದ ಚಾಲಕರಿಗೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ದೂರಿದರು.
ಒಬ್ಬ ಚಾಲಕ ರಸ್ತೆಯಲ್ಲಿ ಅಪಘಾತ ಮಾಡಿದ ಸಂದರ್ಭದಲ್ಲಿ ಅಪಘಾತವಾದಂತಹ ವ್ಯಕ್ತಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗುವ ಹಾಗಿಲ್ಲ. ಸ್ಥಳದಲ್ಲಿಯೇ ಇದ್ದು ಆಸ್ಪತ್ರೆಗೆ ಸಾಗಿಸಬೇಕು, ಮಹಜರು ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿರಬೇಕು. ಇಲ್ಲವಾದರೆ ಚಾಲಕನು ಅಲ್ಲಿಂದ ತಪ್ಪಿಸಿಕೊಂಡು ಹೋದರೆ ಅಂತಹ ಚಾಲಕನಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಲಕ್ಷ ರೂ. ಜುಲ್ಮಾನೆಯನ್ನು ಹಾಕಬೇಕು ಎನ್ನುವ ಕಾನೂನನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಸಾಕಷ್ಟು ರಸ್ತೆ ಅಪಘಾತ ಸಂದರ್ಭದಲ್ಲಿ ಚಾಲಕ ರಸ್ತೆಯಲ್ಲಿದ್ದಾಗ ಸಾರ್ವಜನಿಕರು ಥಳಿಸಿ ಕೊಲೆ ಮಾಡಿರುವ ಘಟನೆಗಳು ನಡೆದಿವೆ. ಈ ಮಸೂದೆಯಿಂದ ಚಾಲಕರಿಗೆ ತೊಂದರೆಯಾಗಲಿದೆ. ಅಪಘಾತವಾದಂತ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಮತ್ತು ಸಂಬಂಧಿಕರು ಎಷ್ಟೋ ಚಾಲಕರನ್ನು ಕೊಂದಿರುವ ಉದಾಹರಣೆಗಳಿವೆ. ಚಾಲಕರ ಜೀವಕ್ಕೆ ಹೊಣೆಗಾರರು ಯಾರಾಗಿರುತ್ತಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಈ ಹೊಣೆಯನ್ನು ಹೊರಲು ಸಾಧ್ಯವೇ ಕೊಲೆಗಡುಕರಿಗೆ ವಿಧಿಸುವಂತಹ ಕಾನೂನನ್ನು ಚಾಲಕರ ಮೇಲೆ ಹೇರಲು ಸರ್ಕಾರ ಹೊರಟಿದೆ ಎಂದು ದೂರಿ, ಈ ಹಿನ್ನಲೆಯಲ್ಲಿ ಮಸೂದೆ ಹಿಂಪಡೆಯಬೇಕು. ರಾಜ್ಯದ 31ಜಿಲ್ಲೆಗಳಲ್ಲಿ ಹೋರಾಟ ನಡೆಸಿ ಮನವಿ ಸಲ್ಲಿಸುತ್ತಿದ್ದಾರೆ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ ಮಡಿವಾಳ, ಗೌರವಾಧ್ಯಕ್ಷ ರವೀಂದ್ರನಾಥ.ಎಸ್, ಕಾರ್ಯಾದ್ಯಕ್ಷ ರಾಮು ಸಿ.ಅಂಬಿಗೇರ, ತಾ.ಪ್ರ. ಕಾರ್ಯದರ್ಶಿ ಜಯಪ್ಪ ಬಸವರಾಜ್, ಪ್ರ.ಕಾರ್ಯದರ್ಶಿ ರಘು ಇಟೇಕರ್, ಶರಣಬಸವ, ಹನುಮಂತಪ್ಪ, ರಮೇಶ, ಬಾಬು, ಕಿರಣ್, ವೆಂಕಟೇಶ, ನರಸಿಂಹಲು ಸೇರಿದಂತೆ ಅನೇಕರು ಇದ್ದರು.