ಜಿಲ್ಲೆಯ ಬೀದಿಬದಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಆಹಾರ ತಿನಿಸುಗಳ ಗುಣಮಟ್ಟ ಹಾಗೂ ಆಹಾರದ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮನದಟ್ಟುಪಡಿಸಬೇಕೆಂದು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಜಿಲ್ಲಾ ಅಂಕಿತ ಅಧಿಕಾರಿಗಳಿಗೆ ರಾಮನಗರ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಕಾರ್ಯಕ್ರಮದ ಮುಂಚಿನ ಸಭೆಯ ಅಧ್ಯಕ್ಷ್ಯತೆ ವಹಿಸಿ ಅವರು ಮಾತನಾಡಿದರು.
ಬೀದಿಬದಿಗಳಲ್ಲಿ ಮಾರಾಟವಾಗುವ ಆಹಾರ ತಿನಿಸುಗಳು, ಆಹಾರ ಕೇಂದ್ರಗಳ ನೈರ್ಮಲ್ಯ ಮತ್ತು ಗುಣಮಟ್ಟವನ್ನು ಮತ್ತು ಸ್ಥಳೀಯ ವಿವಿಧ ಜನಪ್ರಿಯ ತಿಂಡಿಗಳನ್ನು ಮಾರಾಟ ಮಾಡುವ, ಮಾರಾಟಗಾರರು, ಅಂಗಡಿಗಳು, ಸ್ಟಾಲ್ಗಳು ತಯಾರಿಸುವ ಆಹಾರ ಪದ್ದತಿಗಳ ಗುಣಮಟ್ಟ ಉತ್ತಮವಾಗಿರಬೇಕು. ಇದು ಗ್ರಾಹಕರಲ್ಲಿ ಸುರಕ್ಷಿತ ಮತ್ತು ಆರೋಗ್ಯಕರ ಸ್ಥಳೀಯ ತಿಂಡಿಗಳನ್ನು ತಿನ್ನುವ ನಂಬಿಕೆಯನ್ನು ಮೂಡಿಸಬೇಕು. ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಮತ್ತೊಮ್ಮೆ ಅಡುಗೆ ಮಾಡಲು ಬಳಸಿದರೆ ಅದರಲ್ಲಿ ಉತ್ಪತ್ತಿ ಆಗುವ ಕೆಲವೊಂದು ಹಾನಿಕಾರಕ ಅಂಶಗಳು ಅಡುಗೆ ಎಣ್ಣೆಯ ರುಚಿಯನ್ನು ಬದಲಾಯಿಸಿ ತಯಾರು ಮಾಡುವ ತಿನಿಸಿನ ರುಚಿಯನ್ನು ಹದಗೆಡಿಸುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ಬಳಸಿದ ಅಡುಗೆ ಎಣ್ಣೆಯನ್ನು ಒಂದು ದಿನ ಇಲ್ಲವೇ ಎರಡು ದಿನಗಳಲ್ಲಿ ಸೇವಿಸಬೇಕು. ಅದನ್ನು ಹೆಚ್ಚು ಕಾಲ ಸಂಗ್ರಹಿಸಿಡಬಾರದು. ಹೆಚ್ಚು ಕಾಲ ಕರಿದ ಎಣ್ಣೆಯನ್ನೇ ಅಡುಗೆಗೆ ಉಪಯೋಗಿಸುವುದರಿಂದ ಹೃದಯಿ ಸಂಬಂಧಿ ಕಾಯಿಲೆಗಳು, ನರ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಎಫ್ಎಸ್ಎಸ್ಎಐ ನಿಯಮಗಳಂತೆ ಅಡುಗೆಗೆ ಬಳಸುವ ಎಣ್ಣೆಯಲ್ಲಿ ಟೋಟಲ್ ಪೋಲಾರ್ ಕಾಂಪಚಿಡ್ಸ್ (ಟಿಪಿಸಿ)ನ ಮಿತಿಯು ಗರಿಷ್ಠ ಶೇ. 25ನ್ನು ಮೀರಬಾರದು ಎಂದರು.
ಕರಿದ ತಿನಿಸುಗಳನ್ನು ಹಳೆಯ ಸುದ್ದಿ ಹಾಳೆ, ಪ್ಲಾಸ್ಟಿಕ್ಕಿನಲ್ಲಿ ಸುತ್ತಿ ಕೊಡುವುದು ಅತ್ಯಂತ ಅಪಾಯಕಾರಿಯಾಗಿದೆ. ಇಂತಹವು ಕಂಡರೆ ಸಂಬಂಧ ಪಟ್ಟ ನಗರ ಸಭೆಯೊಂದಿಗೆ ಅಂಕಿತ ಅಧಿಕಾರಿಗಳು, ಮೊದಲು ಅರಿವು ಮೂಡಿಸಿ ನಂತರದಲ್ಲಿ ದಾಳಿ ಮಾಡಬೇಕು ಎಂದರು.
ಜಿಲ್ಲೆಯ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಚತೆ ಮತ್ತು ಆಹಾರ ತಯಾರಿಕೆ ಸುರಕ್ಷತೆ ಬಗ್ಗೆ ತಪ್ಪದೆ ಪರಿಶೀಲನೆ ನಡೆಸಬೇಕು. ಜಿಲ್ಲೆಯ ದಿನಸಿ ಅಂಗಡಿಗಳಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಬೇಕು. ಜಿಲ್ಲೆಯ ಹೋಟೆಲ್ಗಳು, ಬೇಕರಿಯೊಳಗೆ ಹೋಗಿ ಆಹಾರ ಸುರಕ್ಷತೆ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಬೇಕು ಹಾಗೂ ನಿಯಾಮಾನುಸಾರವಾಗಿ ಕ್ರಮ ಕೈಗೊಳ್ಳದೆ ಇದ್ದರೆ ದಂಡ ವಿಧಿಸಬೇಕು. ಕೊಬ್ಬರಿ ಎಣ್ಣೆ ಸೇರಿದಂತೆ ಖೋವಾ ಸಿದ್ದಪಡಿಸುವ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ನೀಡಿ ತಪಾಸಣೆ ಮಾಡಬೇಕು. ಗೋಬಿ ಮಂಚೂರಿಗೆ ಕೃತಕ ಬಣ್ಣ ನಿಷೇಧಿಸಲಾಗಿದ್ದು, ಅದರ ಉಲ್ಲಂಘನೆ ಕಂಡುಬಂದಿದಿಯೇ ಎಂಬುದನ್ನು ತಪಾಸಣೆ ನಡೆಸಬೇಕು ಎಂದರು.
ಈ ವಿಷಯಕ್ಕೆ ಸಂಬಂಧಿಸಿದ ಜಿಲ್ಲೆಯ 2 ಹೋಟೆಲ್ಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ. ರೋಚನಾ ತಿಳಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | ಸಿದ್ದರಾಮಯ್ಯರನ್ನು ಬೆಂಬಲಿಸಿ ಆ. 29ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ದಸಂಸ
ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ಆಹಾರ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ಕೃತಕ ಬಣ್ಣಗಳನ್ನು ವೆಜ್, ಕೋಳಿ, ಮೀನು ಇತರೆ ಕಬಾಬ್ಗಳ ತಯಾರಿಕೆಯಲ್ಲಿ ಯಾವುದೇ ಅಸಹಜ ಬಣ್ಣಗಳನ್ನು ಬಳಸುವುದನ್ನು ತಡೆಯಲು ಆದೇಶಿಸಲಾಗಿದೆ, ಮೀರುವ ಪ್ರಕರಣಗಳು ಕಂಡು ಬಂದಲ್ಲಿ ತಯಾರಿಸುವವರ ಮೇಲೆ ಆಹಾರ ಮತ್ತು ಗುಣಮಟ್ಟ ಕಾಯ್ದೆ-2006ರ ನೀಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಜೈಲು ದಂಡನೆಯನ್ನು ಮತ್ತು 10ಲಕ್ಷ ರೂ.ಗಳ ವರೆಗೆ ದಂಡವನ್ನು ಹಾಕಲು ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಅದರಂತೆ ಖಾಸಗಿಯಾಗಿ ಆಹಾರ ಸಿದ್ದಪಡಿಸುವರು ಅಲ್ಲಿನ ಸ್ಪಚ್ಚತೆ ಹಾಗೂ ಸುರಕ್ಷತೆಯ ಬಗ್ಗೆ ಗಮನ ಹರಿಸಲು ತಾಕೀತು ಮಾಡಬೇಕು ಹಾಗೂ ಅವರನ್ನೆಲ್ಲಾ ನೋಂದಾಯಿಸಲು ಅರಿವು ಮೂಡಿಸಬೇಕು ಹಾಗೂ ಕಡ್ಡಾಯವಾಗಿ ಕ್ರಮವಹಿಸಬೇಕು ಎಂದು ತಿಳಿಸಿದರು.
ಆಹಾರ ಸುರಕ್ಷತೆಯ ಅಧಿಕಾರಿ ಡಾ.ಚಂದ್ರಶೇಖರ್, ಆರ್.ಸಿ.ಎಚ್ ಅಧಿಕಾರಿ ಡಾ.ರಾಜು, ನಗರಸಭೆ ಆಯುಕ್ತ ಜಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
