- ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆ
- ನಗರ ಬಸ್ ಇಲ್ಲದ ಕಾರಣ 2 ಕಿ.ಮೀ ನಡೆಯಬೇಕಿದೆ
ಕಲಬುರಗಿ ನಗರದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿರುವ ಸೀತನೂರು ಗ್ರಾಮಕ್ಕೆ ನಗರ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಕೆಎಸ್ಆರ್ಟಿಸಿ ಕಲಬುರಗಿ ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರ ಬಸ್ ವ್ಯವಸ್ಥೆ ಇಲ್ಲದ ಕಾರಣ ಗ್ರಾಮಸ್ಥರು ಸುಮಾರು 2 ಕಿ.ಮೀ ವರೆಗೆ, ಅಂದರೆ ಸೀತನೂರು ಗ್ರಾಮದಿಂದ ಕಲಬುರಗಿ ಕೇಂದ್ರ ಕಾರಾಗ್ರಾಹದ ವರೆಗೆ ನಡೆದುಕೊಂಡು ಬರಬೇಕಾಗಿದೆ. ಇದರಿಂದ ಗ್ರಾಮದಿಂದ ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು, ಹೆಣ್ಣು ಮಕ್ಕಳು, ತರಕಾರಿ ಮಾರಾಟ ಮಾಡಲು ಕಲಬುರ್ಗಿ ನಗರಕ್ಕೆ ಹೋಗುವವರು ಮತ್ತು ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ವಿವರಿಸಿದ್ದಾರೆ.
ಆಟೋದಲ್ಲಿ ಕಲಬುರಗಿ ನಗರದ ವರೆಗೆ ಹೋಗಿ ಬರಲು ರೂಪಾಯಿ 300 ರಿಂದ 400 ರವರೆಗೆ ಬಾಡಿಗೆ ನೀಡಬೇಕಿದೆ. ಇದರಿಂದ ಗ್ರಾಮಸ್ಥರು ಆರ್ಥಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯವೂ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ನಗರ ಬಸ್ ವ್ಯವಸ್ಥೆ ಇಲ್ಲದಿರುವುದು ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಆದ್ದರಿಂದ ಸೀತನೂರ ಗ್ರಾಮಕ್ಕೆ ಆದಷ್ಟು ಶೀಘ್ರದಲ್ಲಿ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಹಾಗೂ ಹೊಸದಾಗಿಯೇ ನೃಪತುಂಗ ಬಸನ್ನು ಒದಗಿಸಬೇಕು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ
ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವವನ್ನು ಪವನಕುಮಾರ ಬಿ ವಳಕೇರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಬೂಬ ಪಟೇಲ ಮಾಲಿ, ಎಂ ಎಸ್ ಪಾಟೀಲ, ಅನ್ವರ್ ಪಟೇಲ, ಆಸೀಫ್ ಎನ್, ಅಭಾಸಲಿ, ಬಾವಾ ಸಾಬ, ಮೊಲಾಸಾಬ್, ಸಿದ್ದಪ್ಪ ಜೆ ಹಾಗೂ ಇತರರು ಇದ್ದರು.