ಶಿವಮೊಗ್ಗ, ಭದ್ರಾ ಅಭಯಾರಣ್ಯದಿಂದ ತುಂಗಾ ನದಿ ದಾಟಿ ಸಕ್ರೆಬೈಲ್ ಸುತ್ತ ಮುತ್ತ ಒಂಟಿ ಸಲಗ ಪ್ರತ್ಯಕ್ಷವಾಗಿದೆ.ಅಷ್ಟೇ ಅಲ್ಲದೆ ಸಕ್ರೆಬೈಲ್ ಸುತ್ತಾಮುತ್ತಾ ಈ ಒಂಟಿ ಸಲಗ ದಾಂಧಲೆ ನಡೆಸುತ್ತಿದ್ದು, ರೈತರು ಬೆಳೆದ ತೆಂಗು ಹಾಗೂ ಬಾಳೆಗಿಡಗಳನ್ನು ನಾಶ ಮಾಡಿದೆ. ಆನೆಯ ಓಡಾಟವನ್ನು ವಿಡಿಯೋದಲ್ಲಿ ಸೆರೆ ಹಿಡಿದಿರುವ ಸಾರ್ವಜನಿಕರು ಅದನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಆದರೆ ಅದ್ಯಾವುದಕ್ಕೂ ಕ್ಯಾರೇ ಮಾಡದ ಒಂಟಿ ಸಲಗ ತೋಟದಲ್ಲಿ ಸಿಕ್ಕ ವಸ್ತುಗಳನ್ನು ತಿನ್ನುತ್ತಾ ನದಿಯಲ್ಲಿ ಈಜುತ್ತಾ ಆನೆ ನಡೆದಿದ್ದೇ ದಾರಿ ಎಂಬಂತೆ ಓಡಾಡುತ್ತಿದೆ. ಈ ಹಿಂದೆಯೂ ಸಹ ಅನೇಕ ಕಾಡಾನೆಗಳು ಭದ್ರಾ ಅಭಯಾರಣ್ಯದಿಂದ ನದಿ ದಾಟಿ ಈಚೆಗೆ ಬಂದಿದ್ದವು.
ಕಳೆದ ತಿಂಗಳು ಸಹ ಸಕಲೇಶ್ಪುರದಿಂದ ರೇಡಿಯೋ ಕಾಲರ್ ಆನೆಯೊಂದು ಬಂದಿತ್ತು, ನಂತರ ಸಕ್ರೆಬೈಲ್ನ ಕುಮ್ಕಿ ಆನೆಗಳ ಸಹಾಯದಿಂದ ಅದನ್ನು ಸೆರೆಹಿಡಿಯಲಾಗಿತ್ತು. ಇದೀಗ ಮತ್ತೊಂದು ಆನೆ ಪ್ರತ್ಯಕ್ಷವಾಗಿದ್ದು, ರೈತರಿಗೆ ಸಂಕಟವಾಗಿ ಪರಿಣಮಿಸಿದೆ. ಆನೆಯನ್ನು ಕೂಡಲೇ ಸೆರೆಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.