ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ಎಲ್ಲ ನೂತನ ಸದಸ್ಯರಿಗೆ ದೇವರು ಮತ್ತು ಸಂವಿಧಾನದ ಹೆಸರು ಹೊರತುಪಡಿಸಿ ಬೇರೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸದಂತೆ ಹಂಗಾಮಿ ಸಭಾಧ್ಯಕ್ಷ ಆರ್ ವಿ ದೇಶಪಾಂಡೆ ಸೂಚಿಸಿದ್ದರೂ ಕೆಲವು ಶಾಸಕರು ತಮ್ಮ ಇಚ್ಛೆ ಅನುಸಾರ ಪ್ರಮಾಣ ವಚನ ಸ್ವೀಕರಿಸಿದರು.
16ನೇ ವಿಧಾನಸಭೆಯ ಮೊದಲ ದಿನದ ಅಧಿವೇಶನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಆರ್ ವಿ ದೇಶಪಾಂಡೆ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಕುರಿತು ಸೂಚನೆ ನೀಡಿದರು. ಆದರೂ ಸಭಾಧ್ಯಕ್ಷರ ಮಾತಿಗೆ ಕಿವಿಗೊಡದ ಮೂವರು ಶಾಸಕರು ತಮ್ಮ ಇಚ್ಛೆಯ ಅನುಸಾರ ಪ್ರಮಾಣ ವಚನ ಸ್ವೀಕರಿಸಿ, ಸಭಾಧ್ಯಕ್ಷರ ಸಿಟ್ಟಿಗೆ ಕಾರಣರಾದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಗಂಗಾ ಅವರು ʼನನ್ನ ಆರಾಧ್ಯ ದೈವ ಡಿ ಕೆ ಶಿವಕುಮಾರ್” ಎಂದು ಪ್ರಮಾಣ ವಚನ ಸ್ವೀಕರಿಸಿದರು. ಬಸನಗೌಡ ಪಾಟೀಲ ಯತ್ನಾಳ್ ಅವರು ಹಿಂದುತ್ವ ಮತ್ತು ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಭಾಗೀರಥಿ ಮುರುಳ್ಯ ಅವರು ಕುಲದೇವರಾದ ಸತ್ಯಸಾರಮಣಿ ಮತ್ತು ಸತ್ಯಪದನಾದಿ ಹಾಗೂ ಮತದಾರರು ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬಸವರಾಜ ರಾಯರೆಡ್ಡಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಸನಗೌಡ ಪಾಟೀಲ ಯತ್ನಾಳ್ ಮಧ್ಯ ಪ್ರವೇಶಿಸಿ ಇದನ್ನೆಲ್ಲ ಆರಂಭಿಸಿದ್ದು ಯಾರು ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ, ನಿಮ್ಮ ಇಷ್ಟದ ಅನುಸಾರ ಪ್ರಮಾಣ ವಚನ ಸ್ವೀಕರಿಸುವ ಹಾಗಿಲ್ಲ. ದಯವಿಟ್ಟು ನಾನು ಎಲ್ಲ ಶಾಸಕರಲ್ಲಿ ಮನವಿ ಮಾಡುವೆ; ಸಂವಿಧಾನ ಹೆಸರು ಇಲ್ಲವೇ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ. ಅದನ್ನು ಬಿಟ್ಟು ಅನವಶ್ಯಕ ಹೆಸರುಗಳನ್ನು ತೆಗೆದುಕೊಳ್ಳಬೇಡಿ” ಎಂದು ಸೂಚಿಸಿದರು.