ಲೋಕಸಭಾ ಚುನಾವಣೆಯ ಹೊತ್ತಲ್ಲೇ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರ ತಂಡ, ಸುಪಾರಿ ಕೊಟ್ಟಿದ್ದ ಮಗ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಮನೆ ಮಗ ವಿನಾಯಕನೇ ಕುಟುಂಬವನ್ನು ಮುಗಿಸಲು ಸುಪಾರಿ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಗದಗ ನಗರದ ದಾಸರ ಓಣಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಯಾಗಿತ್ತು. ಪ್ರಕಾಶ್ ಬಾಕಳೆ ಅವರ ಮೊದಲ ಪತ್ನಿಯ ಹಿರಿಯ ಮಗ ವಿನಾಯಕ್ ಬಾಕಳೆ ಅವರೇ ಕೊಲೆಗೆ ಸುಪಾರಿ ನೀಡಿದ್ದಾಗಿ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಕರಣದ ಸಂಬಂಧ ಗದುಗಿನ ಫೈರೋಜ್ ಖಾಜಿ (29), ಜಿಶಾನ್ ಖಾಜಿ (24), ಮೀರಜ್ ನ ಕಾಂಟ್ರಾಕ್ಟ್ ಕಿಲ್ಲರ್ಸ್ ಅವಳಿ ಸಹೋದರರಾದ ಸಾಹಿಲ್ ಖಾಜಿ (19), ಸೋಹೆಲ್ ಖಾಜಿ (18), ಸುಲ್ತಾನ್ ಶೇಖ್ (23), ಮಹೇಶ್ ಸಾಳೊಂಕೆ (21) ಹಾಗೂ ವಾಹಿದ್ ಬೇಪಾರಿ (21) ಎಂಬವರನ್ನು ಬಂಧಿಸಲಾಗಿದೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ವಿನಾಯಕ ಹಾಗೂ ಅವರ ತಂದೆ ಪ್ರಕಾಶ ಬಾಕಳೆ ಮಧ್ಯೆ ಆಸ್ತಿ ವಿಷಯಕ್ಕೆ ಮನಸ್ತಾಪ ಉಂಟಾಗಿದೆ. ನನ್ನ ಅನುಮತಿ ಇಲ್ಲದೆ ಆಸ್ತಿ ಮಾರಾಟ ಮಾಡಬಾರದು ಎಂದು ವಿನಾಯಕನಿಗೆ ತಂದೆ ಪ್ರಕಾಶ ಬಾಕಳೆ ಎಚ್ಚರಿಕೆ ನೀಡಿದ್ದರು.
ಇದರಿಂದ ರೊಚ್ಚಿಗೆದ್ದಿದ್ದ ವಿನಾಯಕ ಬಾಕಳೆ, ಫೈರೋಜ್ ಖಾಜಿಗೆ ಸುಪಾರಿ ನೀಡಿದ್ದು, 65 ಲಕ್ಷ ರೂ.ಗೆ ಮಾತುಕತೆ ನಡೆಸಿ, ಮುಂಗಡವಾಗಿ 2 ಲಕ್ಷ ರೂ. ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಟಾರ್ಗೆಟ್ ಮಾಡಿ ಸುಪಾರಿ ನೀಡಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಮನೆಯೊಳಗೆ ಪ್ರವೇಶಿಸಿದ್ದ ಆರೋಪಿಗಳು ಕಾರ್ತಿಕ್ ಬಾಕಳೆ (28), ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಆಕಾಂಕ್ಷಾ (16) ಹತ್ಯೆ ಮಾಡಿದ್ದರು.
ಬೇರೆ ಕೋಣೆಯಲ್ಲಿ ಮಲಗಿದ್ದರಿಂದ ಬಚಾವ್!
ಘಟನೆ ದಿನ ಪ್ರಕಾಶ್ ಹಾಗೂ ಅವರ ಪತ್ನಿ ಸುನಂದಾ ಬೇರೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಅವರು ಸಾವಿನಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ.
ಮನೆಗೆ ನುಗ್ಗಿದ್ದ ಹಂತಕರು ಅವರ ಬದಲಿಗೆ ಕಾರ್ತಿಕ್ ಜೊತೆ ಇದ್ದ ಸಂಬಂಧಿಕರನ್ನು ಹತ್ಯೆ ಮಾಡಿದ್ದಾರೆ. ಪ್ರಕಾಶ್ ಹಾಗೂ ಸುನಂದಾ ಎಂದು ಭಾವಿಸಿ ಹಂತಕರು ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಜತೆಗಿದ್ದ ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಇವರನ್ನು ಹತ್ಯೆ ಮಾಡಿದ್ದರು.
ಮೀರಜ್ನಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ. ಕೊಲೆ ನಂತರ ಮನೆಯಲ್ಲಿದ್ದ ಚಿನ್ನಾಭರಣ, ನಗದು ತೆಗೆದುಕೊಂಡು ಹೋಗುವ ಡೀಲ್ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತ್ಯ ನಡೆದ 72 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ತಂಡಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರಿಂದ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಕೃತ್ಯದ ಬಳಿಕ ಮೂರು ಚಾಕುಗಳನ್ನ ಹಿತ್ತಲಲ್ಲಿ ಎಸೆದುಹೋಗಿದ್ದ ದುಷ್ಕರ್ಮಿಗಳು!
ರಾತ್ರಿ ಮನೆಗೆ ನುಗ್ಗಿ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ಪರಶುರಾಮ್ ಕುಟುಂಬದ ಹತ್ಯೆಗೈಯ್ಯಲಾಗಿದ್ದು, ನಂತರ ನೆಲಮಹಡಿಯಲ್ಲಿ ಮಲಗಿದ್ದ ಕಾರ್ತಿಕ್ ಹತ್ಯೆ ಮಾಡಲಾಗಿತ್ತು. ಕಾರ್ತಿಕ್ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದಿದ್ದ ಸಂಬಂಧಿಕರ ಹತ್ಯೆ ಮಾಡಲಾಗಿತ್ತು.
ಕೊಲೆ ಮಾಡಿ ಮೂರು ಚಾಕುಗಳನ್ನ ದುಷ್ಕರ್ಮಿಗಳು ಹಿತ್ತಲಲ್ಲಿ ಎಸೆದುಹೋಗಿದ್ದರು. ಮೃತರಾದ ಪರಶುರಾಮ, ಲಕ್ಷ್ಮೀ ಹಾದಿಮನಿ, ಪುತ್ರಿ ಆಕಾಂಕ್ಷಾ ಈ ಮೂವರು ಕೊಪ್ಪಳ ಮೂಲದವರಾಗಿದ್ದಾರೆ. ಇವರೆಲ್ಲ ಏಪ್ರಿಲ್ 17ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ನ ಮದುವೆ ಕಾರ್ಯಕ್ರಮಕ್ಕಾಗಿ ಬಂದಿದ್ದರು.
