ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ಸಿ ಬಿ.ಕೆ ಹರಿಪ್ರಸಾದ್ಗೆ ಸಚಿವ ಸ್ಥಾನ ತಪ್ಪಿಸಿದ್ದು ದುರಂತ. ಅವರಿಗೆ ಸಚಿವ ಸ್ಥಾನ ನೀಡದೆ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ ಕುರುಬ ಸಮುದಾಯಕ್ಕೆ 10 ಸಾವಿರ ಕೋಟಿ ಅನುದಾನ ನೀಡಿದ್ದರು. ಅಂತೆಯೇ, ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗರಿಗೆ ಸ್ಥಾನಮಾನ ದೊರೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಜಾತಿಪ್ರೇಮ ಈಡಿಗ ಸಮುದಾಯದ ನಾಯಕರಿಗೂ ಅರಿವಾಗಬೇಕು” ಎಂದು ಹೇಳಿದ್ದಾರೆ.
“ಅಹಿಂದ ವರ್ಗದಲ್ಲಿ ಈಡಿಗ ಸಮುದಾಯವೂ ಸೇರಿದಂತೆ ಹಲವು ಸಮುದಾಯಗಳಿವೆ. ಅವರಿಗೂ ನಿರೀಕ್ಷಿತ ಪ್ರಾತಿನಿಧ್ಯ ಸಿಗಬೇಕಿದೆ. ಈಡಿಗ, ನಾಮಧಾರಿ, ಬಿಲ್ಲವ ಸಮುದಾಯದವರಲ್ಲಿ ರಾಜಕೀಯ, ಸಾಮಾಜಿಕ ಜಾಗೃತಿ ಮೂಡಿಸಬೇಕು. ಅದಕ್ಕಾಗಿ, ಜೂನ್ 3 ಮತ್ತು 4 ರಂದು ಕುಮಟಾದಲ್ಲಿ ವಿಶೇಷ ಚಿಂತನ ಶಿಬಿರ ಆಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.