ತುಮಕೂರು ತಾಲೂಕು ಪಂಚಾಯ್ತಿ ವ್ಯಾಪ್ತಿಗೆ ಬರುವ ಹೆತ್ತೇನಹಳ್ಳಿ ಗ್ರಾಪಂ ಪಿಡಿಒ ಬಡವರನ್ನು ಅಲಕ್ಷ್ಯದಿಂದ ಕಾಣುತ್ತಿದ್ದು, ನೀತಿ ಬಾಹಿರವಾಗಿ ನಡೆದುಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.
ಹೆತ್ತೇನಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಕೊಂಡಾಪುರ ಗೋಮಾಳದಲ್ಲಿ ಪುಟ್ಟಸ್ವಾಮಯ್ಯ ಎಂಬುವವರ ಪುತ್ರ ರಾಮಲಿಂಗಪ್ಪ ಎಂಬುವವರು ವಾಸವಿದ್ದು, ತಮ್ಮ ಮನೆಯ ಪಕ್ಕದಲ್ಲೇ ಇರುವ 12 ಅಡಿ ಉಳಿಕೆ ಜಾಗವನ್ನೂ ಒಳಗೊಂಡಂತೆ ಸುಮಾರು 25 ವರ್ಷಗಳಿಂದ ಆ ಸ್ಥಳದ ಸಮೀಪದಲ್ಲೇ ಜೀವನ ಸಾಗಿಸುತ್ತಿದ್ದಾರೆ.
ರಾಮಲಿಂಗಪ್ಪನವರಿಗೆ ಸೇರಿದ ಈ ಜಾಗಕ್ಕೆ ಪಂಚಾಯಿತಿಯಿಂದಲೇ ಮಾಡಿಕೊಟ್ಟ ನಮೂನೆ 11 ಖಾತೆ ಇದ್ದು,, 2021ರವರೆಗೆ ಆ ಸ್ಥಳಕ್ಕೆ ಕಂದಾಯವನ್ನೂ ಕಟ್ಟಿಕೊಂಡು ಬರುತ್ತಿದ್ದಾರೆ. ಸ್ಥಳೀಯ ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಪಿಡಿಒ, ರಾಮಲಿಂಗಪ್ಪ ಅವರನ್ನು ಆ ಸ್ಥಳದಿಂದ ತೆರಳುವಂತೆ ಹರಸಾಹಸ ಪಡುತ್ತಿರುವ ಆರೋಪ ಕೇಳಿ ಬಂದಿದೆ.
ರಾಮಲಿಂಗಪ್ಪನವರು, ಕೊಂಡಾಪುರ ಗೋಮಾಳ ಗ್ರಾಮದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿಕೊಂಡು ಬದುಕು ನಡೆಸುತ್ತಿದ್ದಾರೆ. ಕೃಷಿ ಬದುಕನ್ನೇ ನಂಬಿರುವ ಇವರ ಮನೆ ಗ್ರಾಮದ 4ನೇ ಬೀದಿಯ ಕೊನೆಯಲ್ಲಿದೆ.
ಇವರ ನಿವೇಶನದ ಪಕ್ಕದಲ್ಲಿ 12×30 ಜಾಗವಿದ್ದು, ಅದನ್ನೊಳಗೊಂಡಂತೆ ಅನುಭವದಲ್ಲಿದ್ದಾರೆ. ಅನುಭವದ ಆಧಾರದ ಮೇಲೆ ಹಂಗಾಮಿ ಖಾತೆಯನ್ನು ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ಇಂದ ಖಾತೆಯನ್ನು ಮಾಡಿಕೊಟ್ಟು ವಿದ್ಯುತ್ ಮೀಟರ್ ಅನ್ನೂ ನೀಡಿದ್ದಾರೆ. ಇಷ್ಟೆಲ್ಲಾ ಇದ್ದರೂ ರಾಜಕೀಯ ಉದ್ದೇಶದಿಂದ ಪಿಡಿಒ ಅನುಭವದಲ್ಲಿರಲು ತೊಂದರೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಈಗಿರುವ ಪಿಡಿಒ ಅವರೇ, ನೀವು ಆ ಜಾಗದಲ್ಲಿ ಅನುಭವದಲ್ಲಿರಬಹುದು ಎಂದು ಸಂತ್ರಸ್ತ ಕುಟುಂಬದವರಿಗೆ ಮೌಖಿವಾಗಿ ತಿಳಿಸಿರುವ ಆಡಿಯೋ ಕೂಡ ಲಭ್ಯವಾಗಿದೆ. ಈ ಹಿಂದೆ ಹೆತ್ತೇನಹಳ್ಳಿ ಪಂಚಾಯಿತಿ ಉಸ್ತುವಾರಿ ಪಿಡಿಒ ಆಗಿದ್ದ ನಾಗರಾಜ್ ಅವರೂ ಕೂಡ ಕಾಂಪೌಂಡ್ ನಿರ್ಮಿಸಿಕೊಳ್ಳಲು ಮೌಖಿಕವಾಗಿ ಹೇಳಿದ್ದರು ಎಂದು ಸಂತ್ರಸ್ತರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ರಾಮಲಿಂಗಪ್ಪನವರು ತಮ್ಮ ಮನೆಗೆ ಸೇರಿದಂತೆ ಉಳಿಕೆ ಜಾಗದಲ್ಲೂ ಜಾನುವಾರುಗಳನ್ನು ಕಟ್ಟಲು ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳಲು ಮುಂದಾದಾಗ, ಸ್ಥಳೀಯ ರಾಜಕೀಯ ಒತ್ತಡಕ್ಕೆ ಮಣಿದಿರುವ ಪಿಡಿಒ ಕಾಂಪೌಂಡ್ ನಿರ್ಮಾಣಕ್ಕೆ ತಡೆಯೊಡ್ಡಿದ್ದಾರೆ. ಇದೆಲ್ಲದಕ್ಕೂ ಮೂಲಕಾರಣ ಸಂತ್ರಸ್ತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬುದಾಗಿದೆ ಎಂದು ತಿಳಿದು ಬಂದಿದೆ.
ಕೊಂಡಾಪುರ ಗೋಮಾಳ ಗ್ರಾಮದ ಜಾಗವನ್ನು ಕೆ.ಲಕ್ಕಪ್ಪನವರು ಎಂಪಿ ಆಗಿದ್ದ ಸಂದರ್ಭದಲ್ಲಿ ಬಡವರಿಗಾಗಿ ಮೀಸಲಿರಿಸಿದ್ದರು. ಆಗ ಸೂರಿಲ್ಲದ ಬಡವರು ತಮಗೆ ಸ್ಥಳ ತೋರಿಸಿದ ಜಾಗಲ್ಲಿ ಗುಡಿಸಲು ಹಾಕಿಕೊಂಡು ವಾಸವಿರಲು ಅನುಕೂಲವಾಗಿತ್ತು.
ಮುಖ್ಯವಾಗಿ ಇದು ಕಂದಾಯ ಭೂಮಿಯಾಗಿರದೆ ಗ್ರಾಮ ಠಾಣವಾಗಿದ್ದು, ಅರ್ಧಕ್ಕಷ್ಟು ನಿವಾಸಿಗಳಿಗೆ ಇಲ್ಲಿ ಹಕ್ಕು ಪತ್ರಗಳು ದೊರೆತಿಲ್ಲ. ಪಂಚಾಯತ್ನ ವತಿಯಿಂದ ಮಾಡಿಕೊಟ್ಟಿರುವ ಹಂಗಾಮಿ ಖಾತೆಯ ದಾಖಲೆಯೇ ಇಲ್ಲಿ ಆಧಾರವಾಗಿದೆ. ಜನರು ವಾಸವಿರುವ ನಿವೇಶನಗಳನ್ನು ಸಕ್ರಮ ಮಾಡಿಕೊಳ್ಳಲು ಅರ್ಜಿ ಹಾಕಿಕೊಳ್ಳಬೇಕು. ಹೀಗಿರುವಾಗ ಅನುಭವದಲ್ಲಿರುವ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನೈತಿಕವಾದುದಲ್ಲ ಎಂಬ ಮಾತು ಕೇಳಿಬಂದಿದೆ.
ದಿಕ್ಕು ತಪ್ಪಿಸುತ್ತಿರುವ ಪಿಡಿಒ
ಹೆತ್ತೇನಹಳ್ಳಿ ಪಿಡಿಒ ಓಬಳೇಶ್ ಅವರು ರಾಮಲಿಂಗಪ್ಪನವರು ಅನುಭವದಲ್ಲಿರುವ ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶೀಲಿಸಿದ್ದರೂ ಬಡವರ ಪರ ನಿಲ್ಲದೆ, ರಾಜಕೀಯ ಬಲಾಢ್ಯರ ಪರ ನಿಲ್ಲುತ್ತಿರುವುದು ಈ ಎಲ್ಲ ಬೆಳವಣಿಗೆಗಳಿಂದ ಸಾಬೀತಾಗಿದೆ ಎಂಬ ಆರೋಪ ಕೇಳಿಬಂದಿದೆ.
ನಿಮ್ಮ ಪಂಚಾಯ್ತಿಯವರೇ ಮಾಡಿಕೊಟ್ಟ ಖಾತೆ 126/A ಇದೆ ನೋಡಿ ಎಂದು ಸಂತ್ರಸ್ತರು ಪಿಡಿಓ ಅವರಿಗೆ ತೋರಿಸಿದರೆ, ಮನೆ ನಂಬರ್ 66 ಎಂಬುದು ಇದೆ. ಈ ಸ್ಥಳವೇ ನಿಮ್ಮದಲ್ಲ. ನೀವು ಮೊದಲನೇ ಬೀದಿಗೆ ಹೋಗಿ ಮನೆ ಕಟ್ಟಿಕೊಳ್ಳಬೇಕು ಎಂದು ಬೆದರಿಸುತ್ತಾರೆ. ಇದನ್ನು ಜಿಲ್ಲಾ ಪಂಚಾಯತ್ ಸಿಇಓ ಅವರ ಗಮನಕ್ಕೆ ತೆಗೆದುಕೊಂಡು ಹೋದಾಗ, ನೀವು ಹೆದರುವ ಅಗತ್ಯವಿಲ್ಲ. ಮನೆ ನಂಬರ್ಗಳು ಯಾವಾಗ ಬೇಕಾದರೂ ಬದಲಾಗಬಹುದು. ಖಾತೆಯಾಗಿರುವುದು ಮತ್ತು ಅನುಭವದಲ್ಲಿರುವುದು ಅಷ್ಟೇ ಮುಖ್ಯ ಎಂದು ಸಮಾಧಾನಪಡಿಸಿದ್ದಾರೆ. ಆದರೆ ಪಿಡಿಓ ಈ ರೀತಿಯಾಗಿ ಬಡವರನ್ನು ದಿಕ್ಕು ತಪ್ಪಿಸುವ ಮೂಲಕ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ಕುಟುಂಬಸ್ಥರು ದೂರಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ವೈದ್ಯರ ಕರ್ತವ್ಯಕ್ಕೆ ಅಡ್ಡಿ ನೆಪ; ದಲಿತ ಮಹಿಳೆ, ಗ್ರಾಕೂಸ್ ಕಾರ್ಯಕರ್ತರ ಮೇಲೆ ಹಲ್ಲೆ; ಆರೋಪ
ಸಮರ್ಪಕವಲ್ಲದ ಇಓ ಮೇಲುಸ್ತುವಾರಿ
ಒಬ್ಬ ಸರ್ಕಾರಿ ನೌಕರ ನ್ಯಾಯದ ಪರವಿರುವುದರ ಬದಲು ಬಲಾಢ್ಯರೊಂಡಿಗೆ ಕೈ ಜೋಡಿಸುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಇದು ನಿಜಕ್ಕೂ ವಿಷಾದನೀಯ. ಕಾನೂನು ಮತ್ತು ನಿಯಮಗಳ ಅರಿವು ಪಿಡಿಓಗೆ ಇಲ್ಲದೆ ಮಾಡುವ ಎಡವಟ್ಟಿನಿಂದ ಗ್ರಾಮದಲ್ಲಿ ನಿವೇಶನ ವಿಚಾರವಾಗಿ ಜನಗಳ ನಡುವೆ ವೈಷಮ್ಯ ಬೆಳೆಯುತ್ತಿವೆ. ಪಿಡಿಓಗಳ ಕಾರ್ಯವೈಖರಿ ಮೇಲೆ ಪರಿಣಾಮಕಾರಿಯಲ್ಲದ ಇಓ ಅವರ ತಾಲೂಕು ಪಂಚಾಯ್ತಿ ಮೇಲುಸ್ತುವಾರಿಯಿಂದ ಬಡಜನರು ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.
ಕೊಂಡಾಪುರ ಗ್ರಾಮದಲ್ಲಿ ಒಂದೇ ಮನೆಗೆ ಎರಡು ಮೂರು ಖಾತೆಗಳನ್ನು ಬೇರೆ ಬೇರೆ ಮಾಡಿಕೊಡಲಾಗಿದೆ. ರೀತಿಯ ಉದಾಹರಣೆ ಇರುವ ದಾಖಲೆಯೂ ಲಭ್ಯವಾಗಿದೆ.
ಪಿಡಿಓ ಸುಳ್ಳು ಹೇಳುತ್ತಿರುವುದು ಬಯಲಾಗುತ್ತಿದ್ದಂತೆ. ಇದು ರಿಸರ್ವ್ ಜಾಗ ಎಂಬ ಮತ್ತೊಂದು ಕಥೆ ಕಟ್ಟುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.
