ಬಿಗ್ಬಾಸ್ ಸೀಸನ್ 10ರ ಸ್ಪರ್ಧಿ, ಹಾಸ್ಯ ನಟ ತುಕಾಲಿ ಸಂತೋಷ್ ಅವರ ಕಾರು ಕುಣಿಗಲ್ ಬಳಿ ಅಪಘಾತಕ್ಕೀಡಾಗಿದೆ. ಸಂತೋಷ್ ಅವರ ಕಾರು ಮತ್ತು ಆಟೋ ನಡುವೆ ಅಪಘಾತವಾಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜಗದೀಶ್ (44) ಮೃತ ದುರ್ದೈವಿ. ಈತ ಕುಣಿಗಲ್ ತಾಲೂಕಿನ ಕೋಡಿಹಳ್ಳಿ ಪಾಳ್ಯದ ನಿವಾಸಿ. ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದರು.
ಅಪಘಾತದಲ್ಲಿ ಗಾಯಗೊಂಡಿದ್ದ ಜಗದೀಶ್ ಅವರನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಾರ್ಚ್ 14ರ ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ.
ಬುಧವಾರ ರಾತ್ರಿ ಶೂಟಿಂಗ್ ಮುಗಿಸಿಕೊಂಡು ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಮಾನಸಾ ಪ್ರಯಾಣಿಸುತ್ತಿದ್ದರು. ಈ ವೇಳೆ, ಕುಣಿಗಲ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಈ ಸುದ್ದಿ ಓದಿದ್ದೀರಾ? ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಯಾವುದೇ ಅಡಚಣೆ ಆಗುವುದಿಲ್ಲ : ಸ್ಪಷ್ಟನೆ ನೀಡಿದ ಸಂಸ್ಥೆ
ಅಪಘಾತ ನಡೆದ ವೇಳೆ ಆಟೋ ಚಾಲಕ ಜಗದೀಶ್ ಮದ್ಯಪಾನ ಮಾಡಿದ್ದನು ಎಂದು ಹೇಳಲಾಗಿದೆ. ಆಟೋ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತುಕಾಲಿ ಸಂತೋಷ್ ಆರೋಪಿಸುತ್ತಿದ್ದಾರೆ.
ಘಟನೆ ಸಂಬಂಧ ದೂರು ಪ್ರತಿದೂರು ದಾಖಲಿಸಲು ಎರಡೂ ಕಡೆಯವರು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಕುಣಿಗಲ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, “ಆಟೋ ಚಾಲಕ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆಟೋ ಚಾಲಕ ಮದ್ಯಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಎಫ್ಎಸ್ಎಲ್ ವರದಿ ಬಂದ ಬಳಿಕ ಧೃಢವಾಗಲಿದೆ. ಸದ್ಯ ಆಟೋ ಚಾಲಕನ ಸಂಬಂಧಿಕರು ತುಕಾಲಿ ಸಂತೋಷ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ” ಎಂದು ಹೇಳಿದರು.