ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆಯಾದ ತುಮಕೂರು ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಲಂಚಾವತಾರ ನೋಡಿ ಮುಖ್ಯ ಜಾಗೃತ ಅಧಿಕಾರಿ ಕುಪ್ಪೆ ಶ್ರೀನಿವಾಸ್ ದಂಗಾಗಿದ್ದಾರೆ.
ಗೃಹ ಸಚಿವರ ತವರು ಜಿಲ್ಲೆ ಹಾಗೂ ಸಹಕಾರ ಸಚಿವ ರಾಜಣ್ಣನವರ ಕ್ಷೇತ್ರಗಳಲ್ಲಿ ಇರುವ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಮತ್ತು ಇತರೆ ವೈದ್ಯಕೀಯ ಸೇವೆಗೆ ದೀನ ದುರ್ಬಲರು ಬಡವರು ಲಂಚ ನೀಡದೆ ಇದ್ದರೆ ಸೇವೆಯೇ ಇಲ್ಲ ಎಂಬಂತಾಗಿದೆ.
ಬ್ಯಾಲ್ಯ ಪ್ರಾಥಮಿಕ ಆಸ್ಪತ್ರೆಯ ವ್ಯಾಪ್ತಿಯ ವಡ್ಡರಹಟ್ಟಿ ಕಾವೇರಿ ಎಂಬ ಮಹಿಳೆಯಿಂದ ನರ್ಸ್ ಅನುಸೂಯಮ್ಮ ₹5,000ಗಳನ್ನು ಹೆರಿಗೆ ಮಾಡಿಸಲು ಪಡೆದಿದ್ದರು. ಹಾಗೆಯೇ ನಿಹಾರಿಕಾ ಎಂಬ ಮಹಿಳೆಯಿಂದ ಪಡೆದಿದ್ದ ₹1,300 ಮತ್ತು ದೊಡ್ಡೇರಿ ಹೋಬಳಿಯ ವೃದ್ಧೆ ಕಡೆಯ ರಂಗನಾಥ್ ಕಡೆಯಿಂದ ಪಡೆದ ₹3,800 ಲಂಚದ ಹಣವನ್ನು ತುಮಕೂರು ಘಟಕದ ನೈಜ ಹೋರಾಟಗಾರರ ವೇದಿಕೆಯ ಸದಸ್ಯರು ಆಡಳಿತ ವೈದ್ಯಾಧಿಕಾರಿ ಗಂಗಾಧರ್ ಅವರಿಂದ ವಾಪಸ್ ಕೊಡಿಸಿದ್ದಾರೆ.
ಬೆಂಗಳೂರಿನ ಆರೋಗ್ಯ ಸೌಧದಿಂದ ಮಧುಗಿರಿ ತಾಲೂಕು ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಪುರವರ ಹೋಬಳಿ ಬ್ಯಾಲ್ಯ ಆಸ್ಪತ್ರೆಗಳಿಗೆ ಮುಖ್ಯ ಜಾಗೃತಾ ಅಧಿಕಾರಿ ಕುಪ್ಪೆ ಶ್ರೀನಿವಾಸ್ ಅವರು ಭೇಟಿ ನೀಡುವ ಮುನ್ಸೂಚನೆ ತಿಳಿದು, ತುಮಕೂರು ಘಟಕದ ನೈಜ ಹೋರಾಟಗಾರರ ವೇದಿಕೆಯ ಸದಸ್ಯ ಹಂದ್ರಾಳ್ ನಾಗಭೂಷಣ್, ಮಧುಗಿರಿ ಮಹೇಶ್, ಸತೀಶ್ ಟಿ ಪಿ ಅರಳಾಪುರ ರಮೇಶ್ ಅವರು ಮಧುಗಿರಿ ಮತ್ತು ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ವ್ಯಾಪ್ತಿಯ ಬ್ಯಾಲ್ಯ ಆಸ್ಪತ್ರೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮುಖ್ಯ ಜಾಗೃತ ದಳದ ಅಧಿಕಾರಿಗೆ ಲಂಚದ ಹಣದ ಸಹಿತ ವಾಸ್ತವ ಸ್ಥಿತಿಗಳನ್ನು ಕಣ್ಣೆದುರೇ ಬಿಚ್ಚಿಟ್ಟರು.
“ತುಮಕೂರು ಆಸ್ಪತ್ರೆಗಳ ಲಂಚದ ಬಗ್ಗೆ ಹಂದ್ರಾಳ್ ನಾಗಭೂಷಣ್ ಅವರು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದು ತುಮಕೂರಿನ ಜಿಲ್ಲಾಡಳಿತದ ವೈಫಲ್ಯದಿಂದ ತಾಲೂಕಿನ ಆಸ್ಪತ್ರೆಗಳಲ್ಲಿ ಬಡವರು ಮತ್ತು ದೀನ ದುರ್ಬಲರಿಂದ ಲಂಚ ವಸೂಲಿಯಾಗುತ್ತಿದ್ದು, ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಲಂಚಾವತಾರ ನಡೆಯುತ್ತಿರುವುದು ದುರದೃಷ್ಟಕರ” ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಎಚ್ ಎಂ ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿಗೆ ಆಗ್ರಹಿಸಿ ಡಿ.17ರಂದು ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಸಮಾವೇಶ
“ನೈಜ ಹೋರಾಟಗಾರರ ವೇದಿಕೆಯು ಭ್ರಷ್ಟಾಚಾರದ ವಿರುದ್ಧ ಮತ್ತು ಜನಪರ ಕೆಲಸಗಳಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಅವರ ಕಾರ್ಯಗಳು ನಿಜಕ್ಕೂ ಶ್ಲಾಘನೀಯ” ಎಂದು ಅಭಿನಂದಿಸಿದ್ದಾರೆ.