ಪ್ರಸ್ತುತ ಜಗತ್ತಿನಲ್ಲಿ ಅತಿ ಹೆಚ್ಚು ಕಡೆಗಣಿಸಲ್ಪಡುವವರು ಯಾರಾದರು ಇದ್ದರೆ ಅವರು ವೃದ್ದ ತಂದೆ ತಾಯಿಗಳು. ಕುಟುಂಬ ಸಂಬಂಧಗಳು ಶಿಥಿಲವಾಗುತ್ತಿವೆ. ಬೆಳೆದು ನಿಂತ ಮಕ್ಕಳು ವೃದ್ದ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಅಟ್ಟುತ್ತಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಹೇಳಿದರು.
ಉಡುಪಿಯ ಡಾನ್ ಬಾಸ್ಕೋ ಹಾಲ್ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಂಡಿದ್ದ ʼಸದೃಢ ಕುಟುಂಬ, ಸುಭದ್ರ ಸಮಾಜʼ ಎಂಬ ವಿಷಯದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಪಾಶ್ಯಾತ್ಯ ಸಂಸ್ಕೃತಿಗಳು ನಮ್ಮನ್ನು ಆವರಿಸುತ್ತಿವೆ. ಪ್ರಸ್ತುತ ಹೊಸ ತಲೆಮಾರಿಗೆ ಇಷ್ಟವಿಲ್ಲದ ಒಂದು ಸ್ಥಳವಿದ್ದರೆ ಅದು ಅವರ ಮನೆಯೇ. ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಕೌಟುಂಬಿಕ ವ್ಯವಸ್ಥಗೆ ಬಹಳ ಪ್ರಾಮುಖ್ಯತೆ ಇದೆ. ಎಲ್ಲೂ ಸಿಗದಂತಹ ಸೇವೆಗಳು ಕುಟುಂಬದಲ್ಲಿ ನಮಗೆ ಸಿಗುತ್ತವೆ. ಬ್ರಹ್ಮಾಂಡ ಉಳಿಯಬೇಕಾದರೆ ಯಾವ ರೀತಿ ಸೂರ್ಯ, ಚಂದ್ರ, ನಕ್ಷತ್ರ, ಮಳೆ ಗಾಳಿ ಮುಖ್ಯವೋ ಅದೇ ರೀತಿ ಈ ಸಮಾಜ ಉಳಿಯಬೇಕಾದರೆ ಕುಟುಂಬ ಇರಬೇಕು. ಇಲ್ಲದಿದ್ದರೆ ಸಮಾಜ ಉಳಿಯುವುದಿಲ್ಲ. ಕುಟುಂಬ ಸಂಬಂಧವನ್ನು ಹಾಳು ಮಾಡಿದವನನ್ನು ಪ್ರವಾದಿ ಮುಹಮ್ಮದ್ ಅವರು ಮಸೀದಿಯಿಂದಲೇ ಓಡಿಸಿದ್ದರು” ಎಂದು ಹೇಳಿದರು.
ಮಣಿಪಾಲ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಅವರು ಮುಖ್ಯ ಅಥಿತಿಯಾಗಿ ಮಾತನಾಡಿ, “ಯುವಕರು ಹೆಚ್ಚಾಗಿ ಮದ್ಯ ವ್ಯಸನ ಡ್ರಗ್ಸ್ಗೆ ಬಲಿಯಾಗುತ್ತಿದ್ದು, ಪೋಷಕರು ಎಚ್ಚೆತ್ತುಕೊಳ್ಳದಿದ್ದರೆ ಸಮಾಜ ಇನ್ನಷ್ಟು ಹಾಳಾಗುವುದರಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ. ಸೈಬರ್ ಕ್ರೈಂ, ಆನ್ಲೈನ್ ಗೇಮಿಂಗ್ಗೆ ಒಳಗಾಗಿ ಪ್ರತಿ ದಿನ ಲಕ್ಷಾಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ನಾವುಗಳೂ ಜಾಗೃತರಾಗಬೇಕು” ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅಥಿತಿ ಡಾ ಎ ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋ ವೈದ್ಯ ಡಾ ಮಾನಸ್ ಮಾತನಾಡಿ, “ಪ್ರತಿದಿನ ಒಂದಲ್ಲಾ ಒಂದು ಸಮಸ್ಯೆಗಳನ್ನು ಹಿಡಿದುಕೊಂಡು ರೋಗಿಗಳು ನಮ್ಮ ಆಸ್ಪತ್ರೆಗೆ ಬರುತ್ತಲೇ ಇರುತ್ತಾರೆ. ಮಾನಸಿಕ ಖಿನ್ನತೆಗೆ ಒಳಗಾಗಿ ಬಹಳ ಜನರು ಬಳಲುತ್ತಿದ್ದಾರೆ. ಈ ಮೊಬೈಲ್ ಬಂದ ನಂತರದಲ್ಲಿ ಇದರ ಪ್ರಮಾಣ ಹೆಚ್ಚಾಗಿದೆಯೇ ಹೊರತು ಕಡಿಮೆಯಂತೂ ಆಗಿಲ್ಲ. ಹಲವು ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವೆಂದು ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಸರಿಯಾದ ಮನೋವೈದ್ಯರ ಸಮಾಲೋಚನೆ ಅಗತ್ಯವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಯಶ್ ಅಭಿಮಾನಿಗಳ ಸಾವು: ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಿದ ಸಚಿವ ಪಾಟೀಲ್
ಸುಗಮ್ಯ ಮಹಿಳಾ ಸಂಘದ ಸ್ಥಾಪಕಾಧ್ಯಕ್ಷೆ ಜನೇಟ್ ಬರ್ಬೋಝ ಮಾತನಾಡಿ, “ಕುಟುಂಬ ಸಂಬಂಧಗಳು ಸುದೃಢವಾಗಿದ್ದರೆ ಸಮಾಜವೂ ಸುಮೃದ್ಧವಾಗಿರುತ್ತದೆ. ಸಮಾಜದಲ್ಲಿ ಪರಸ್ಪರ ಸೌಹಾರ್ದತೆಯಿಂದ ಕೂಡಿ ಬಾಳಿದರೆ ಕುಟುಂಬ ಸಂಬಂಧಗಳ ಜೊತೆಗೆ ಸಮಾಜಿಕ ಸಂಬಂಧಗಳೂ ಕೂಡ ಬಲಿಷ್ಠವಾಗುತ್ತವೆ” ಎಂದು ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಘಟಕದ ಅಧ್ಯಕ್ಷ ನಿಸಾರ್ ಅಹಮದ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ರಯೀಸ್ ಅಹಮದ್, ಮಹಿಳಾ ವಿಭಾಗದ ಅಧ್ಯಕ್ಷೆ ವಾಜಿದಾ ತಬಸ್ಸುಮ್, ಜಲಾಲುದ್ದಿನ್ ಹಿಂದ್ ಸೇರಿದಂತೆ ಬಹುತೇಕರು ಇದ್ದರು.