- ಪ್ರಾಣ ಭಯದಲ್ಲೇ ರಾತ್ರಿ ಕಳೆದ ಮನೆಯೊಳಗಿದ್ದ ಕುಟುಂಬ
- ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ
ಕಿಟಕಿ ಪಕ್ಕದಲ್ಲಿ ಮೂಟೆಗಳಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತ ತಿನ್ನುವ ಆಸೆಗೆ ಕಾಡಾನೆಯು ಮನೆ ಮೇಲೆ ದಾಳಿ ಮಾಡಿದ್ದು, ಕಿಟಕಿ ಮತ್ತು ಹೆಂಚುಗಳನ್ನು ಹೊಡೆದುಹಾಕಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕ್ಯಾಮನಹಳ್ಳಿ ಗ್ರಾಮದ ಮುರಳಿ ಎಂಬುವವರ ಮನೆಯ ಮೇಲೆ ರಾತ್ರಿ 11.30ರ ಸುಮಯದಲ್ಲಿ ಕಾಡಾನೆ ದಾಳಿ ಮಾಡಿದೆ. ಕಾಡಾನೆ ಗುದ್ದಿರುವ ರಭಸಕ್ಕೆ ಮನೆಯ ಹೆಂಚುಗಳು ಪುಡಿ ಪುಡಿಯಾಗಿವೆ ಮತ್ತು ಮನೆ ಕಿಟಕಿ ಮುರಿದು ಹೋಗಿದೆ.
ಮುರಳಿ ಮತ್ತು ಕುಟುಂಬಸ್ಥರು ಮನೆಯ ಒಳಗೆ ಮಲಗಿದ್ದ ವೇಳೆಯೇ ಕಾಡಾನೆ ದಾಳಿ ಮಾಡಿದೆ. ಕಾಡಾನೆ ನೋಡಿ ಗಾಬರಿಗೊಂಡ ಮನೆಯವರು ಜೋರಾಗಿ ಕೂಗಾಡಿದ್ದರಿಂದ ಕಾಡಾನೆ ಹೆದರಿ ಹಿಂತಿರುಗಿ ಹೋಗಿದೆ. ಇಡೀ ರಾತ್ರಿ ಭಯದಿಂದಲೇ ಕಾಲ ಕಳೆದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಡಾನೆಯು ಕ್ಯಾಮನಹಳ್ಳಿಯ ಚಿದಂಬರ ಎಂಬವರ ಮನೆ ಗೇಟು, ಜಯ್ ಮ್ಯಾತ್ಯು ಅವರ ಮನೆಯ ಗೇಟು ಹಾಗೂ ಪೋರ್ಟಿಕೋ, ದಿಲೀಪ್ ಎಂಬುವರ ಶೆಡ್, ಧನಂಜಯ ಅವರ ತೋಟ, ಅಗಲಟ್ಟಿ ಎಸ್ಟೇಟ್ ನ ಸೋಲಾರ್ ಬೇಲಿ ಹಾಗೂ ಗೇಟ್ ಗಳಿಗೆ ಹಾನಿ ಮಾಡಿದೆ.
ಮೂರು ಕಾಡಾನೆಗಳಿಗೆ ರೆಡಿಯೊ ಕಾಲರ್
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆ ಮೂರು ಕಾಡಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿದೆ.
ಅಭಿಮನ್ಯು ನೇತೃತ್ವದಲ್ಲಿ ಪ್ರಶಾಂತ, ಭೀಮ, ಮಹೇಂದ್ರ, ಅಜೇಯ ಸಾಕಾನೆಗಳು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಚರಣೆ ಮಾಡಲಾಗಿತ್ತು. ಸಕಲೇಶಪುರ ತಾಲೂಕಿನ ಕೆರೋಡಿ ಬಳಿ ಹಿಂದೆ ರೆಡಿಯೋ ಕಾಲರ್ ಅಳವಡಿಸಿದ್ದ ಹೆಣ್ಣಾನೆಗೆ ಅರಿವಳಿಕೆ ನೀಡಿ ನಿಷ್ಕ್ರಿಯವಾಗಿದ್ದ ಹಳೆಯ ರೇಡಿಯೋ ಕಾಲರ್ ತೆಗೆದು ಹೊಸ ರೇಡಿಯೋ ಕಾಲರ್ ಅಳವಡಿಸಲಾಗಿದೆ.
ಸಕಲೇಶಪುರ ತಾಲೂಕು ಗಡಿಭಾಗದ ಬ್ಯಾದನೆ ಸಮೀಪದ ಕಾಫಿ ತೋಟದಲ್ಲಿ ‘ಭುವನೇಶ್ವರಿ’ ಎಂಬ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸಿದ್ದಾರೆ. ಮಂಗಳವಾರ ಹೆಬ್ಬನಹಳ್ಳಿ ಸುತ್ತಮುತ್ತ ಸಂಚರಿಸುತ್ತಿರುವ ‘ಕಾಂತಿ’ ಎಂಬ ಹೆಸರಿನ ಹೆಣ್ಣಾನೆಯನ್ನು ಹಲಸುಲಿಗೆ ಬಳಿ ಸೆರೆಹಿಡಿದು ರೇಡಿಯೋ ಕಾಲರ್ ಅಳವಡಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮಾಲೂರು | ಮರುಮತ ಎಣಿಕೆಗಾಗಿ ಹೈಕೋರ್ಟ್ ಮೊರೆ ಹೋದ ಬಿಜೆಪಿ ಅಭ್ಯರ್ಥಿ
ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯಲ್ಲಿ ಹಾಸನ ಡಿಸಿಎಫ್ ಹರೀಶ್, ಎಸಿಫ್ ಸುರೇಶ್, ವಲಯ ಅರಣ್ಯ ಅಧಿಕಾರಿ ಶಿಲ್ಪಾ, ಅರಿವಳಿಕೆ ತಜ್ಞರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.