ಚನ್ನರಾಯಪಟ್ಟಣ ಭೂಸ್ವಾಧೀನ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ರಾಜ್ಯದ ಹಿರಿಯ ಸಾಹಿತಿಗಳು, ಚಿಂತಕರು, ವಿಜ್ಞಾನಿಗಳು, ಸ್ವಾಮೀಜಿಗಳು, ಚಿತ್ರನಟರು ಮತ್ತು ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರಿಂದ ಭೂಮಿಯನ್ನು ಕಿತ್ತುಕೊಳ್ಳಬಾರದು ಎಂದು ಬಹಿರಂಗ ಪತ್ರ ಬರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪ್ಪಟ್ಟಣದ ರೈತರು ಕಳೆದ 1000 ದಿನಗಳಿಗಿಂತಲೂ ಹೆಚ್ಚು ಕಾಲದಿಂದ ತಮ್ಮ ಭೂಮಿಯನ್ನು ಉಳಿಸಲು ಹೋರಾಟವನ್ನು ಹೋರಾಟ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? Ground Report | ದೆಹಲಿ ರೈತ ಚಳವಳಿ ಮಾದರಿಯಲ್ಲಿ ‘ಚನ್ನರಾಯಪಟ್ಟಣ ಭೂ ಹೋರಾಟ’; ಸರ್ಕಾರಕ್ಕೆ ಜಗ್ಗದ ದಿಟ್ಟ ಜನತೆ
“ತುರ್ತು ವಿಚಾರವೊಂದನ್ನು ತಮ್ಮ ಗಮನಕ್ಕೆ ತರಲು ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ಚನ್ನರಾಯಪಟ್ಟಣದ ವಿಚಾರ ರೈತರು ಹಾಗೂ ಸರ್ಕಾರದ ನಡುವೆ, ಜನಪರ ಸಂಘಟನೆಗಳು ಹಾಗೂ ಸರ್ಕಾರದ ನಡುವೆ ಸಂಘರ್ಷದ ವಿಚಾರವಾಗಿ ಪರಿವರ್ತನೆಯಾಗುತ್ತಿರುವುದನ್ನು ಕಂಡು ನಾವು ಕಳವಳಗೊಂಡಿದ್ದೇವೆ. ಸರ್ಕಾರ ಏಕೆ ಈ ರೀತಿ ಹಟ ಹಿಡಿದಿದೆ ಎಂಬುದು ನಮಗೆ ಅರ್ಥವಾಗದಾಗಿದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.
“ಅಭಿವೃದ್ದಿ ಯೋಜನೆಗಳಿಗೆ ಭೂಮಿ ಬೇಕಾಗುತ್ತದೆ ಎಂಬುದನ್ನು ನಾವೂ ಒಪ್ಪುತ್ತೇವೆ. ಆದರೆ ಅದಕ್ಕೊಂದು ರೀತಿನೀತಿ ಇರಬೇಕಲ್ಲವೇ? ಚನ್ನರಾಯಪಟ್ಟಣದ ಭೂಮಿ ಫಲವತ್ತಾದ ಕೃಷಿ ಭೂಮಿಯಾಗಿದೆ, ಸಾವಿರಾರು ಜನ ಅದನ್ನು ನಂಬಿ ಬದುಕುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಈ ಭೂಮಿಯನ್ನು ಕಂಪನಿಗಳಿಗೆ ಕೊಡಲು ತಮಗೆ ಒಪ್ಪಿಗೆ ಇಲ್ಲ ಎಂದು ಸ್ಪಷ್ಟವಾಗಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಸತತ ಹೋರಾಟ ನಡೆಸಿದ್ದಾರೆ. ರೈತರ ಕೂಗನ್ನು ಕೇಳಿಸಿಕೊಳ್ಳದೆ ಬಿಜೆಪಿ ಸರ್ಕಾರ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆಗ ನಿಮ್ಮ ಪಕ್ಷವೂ ಇದನ್ನು ವಿರೋಧಿಸಿತ್ತು. ನೀವೇ ಖುದ್ದು ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದಿರಿ. ಈಗ ಏಕೆ ಆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲೇಬೇಕು ಎಂದು ನಿಮ್ಮ ಸರ್ಕಾರ ಪಟ್ಟು ಹಿಡಿದಿದೆ ಅರ್ಥವಾಗುತ್ತಿಲ್ಲ” ಎಂದು ಚಿಂತಕರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಚನ್ನರಾಯಪಟ್ಟಣ | 15ನೇ ಹಣಕಾಸು ಅನುದಾನ ಬಿಡುಗಡೆ; ಆನೆಕೆರೆ ಗ್ರಾ.ಪಂ. ಪಿಡಿಒ ಶೇ.10ರಷ್ಟು ಲಂಚಕ್ಕೆ ಬೇಡಿಕೆ
“ರೈತರಿಗೀಗ ಅಂತಿಮ ಅಧಿಸೂಚನೆ ಹೋಗಿದೆ. ರೈತರು ಆತಂಕಿತರಾಗಿದ್ದಾರೆ. ಅವರ ಬೆಂಬಲಕ್ಕೆ ಕರ್ನಾಟಕದ ಸಮಸ್ತ ಸಂಘಟನೆಗಳೂ ನಿಂತಿವೆ. ಜೂನ್ 25ಕ್ಕೆ ದೇವನ ಹಳ್ಳಿ ಚಲೋಗೆ ಕರೆ ನೀಡಿವೆ. ಸರ್ಕಾರ ರೈತಪರ ನಿಲುವು ತೆಗೆದುಕೊಳ್ಳುವ ತನಕ ದೇವನಹಳ್ಳಿಯಿಂದ ವಾಪಾಸ್ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಸಂಘರ್ಷ ರೈತರಿಗಾಗಲೀ, ಸರ್ಕಾರಕ್ಕಾಗಲೀ, ರಾಜ್ಯಕ್ಕಾಗಲೀ ಒಳಿತನ್ನು ಮಾಡುವುದಿಲ್ಲ. ನೀವು ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲವರು. ದಯವಿಟ್ಟು ಕೂಡಲೇ ಮಧ್ಯಪ್ರವೇಶ ಮಾಡಬೇಕು. ಈ ಸಮಸ್ಯೆಯನ್ನು ಬಗೆಹರಿಸಿ ರಾಜ್ಯಕ್ಕೆ ಉತ್ತಮ ಸಂದೇಶ ನೀಡಬೇಕು” ಎಂದು ಲೇಖಕರು, ಚಿಂತಕರು ಮನವಿ ಮಾಡಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಡಾ.ಕೆ ಮರುಳಸಿದ್ದಪ್ಪ, ಬಾನು ಮುಷ್ತಾಕ್, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಡಾ.ಇಂದೂಧರ ಹೊನ್ನಾಪುರ, ಡಾ.ಎಚ್.ಎಲ್ ಪುಷ್ಪ, ಡಾ.ವಿಜಯಮ್ಮ, ಡಾ.ಜಾಣಗೆರೆ ವೆಂಕಟರಾಮಯ್ಯ, ಎಲ್ ಎನ್ ಮುಕುಂದರಾಜ್, ಡಾ.ಎನ್ ಗಾಯತ್ರಿ, ಡಾ.ಕೆ.ನೀಲಾ, ಕೆ.ಷರೀಫಾ, ಚಿತ್ರನಟರಾದ ಪ್ರಕಾಶ್ ರಾಜ್, ಬಿ. ಸುರೇಶ್, ವಿಜ್ಞಾನಿಗಳಾದ ಪ್ರೊ. ಪ್ರಜ್ವಲ್ ಶಾಸ್ತ್ರಿ, ಡಾ. ಸವ್ಯಸಾಚಿ ಚಟರ್ಜಿ, ಡಾ.ವಾಣಿ ಚಟರ್ಜಿ ಮತ್ತು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
