ಅವೈಜ್ಞಾನಿಕ ವಾರಾಬಂದಿ ಕ್ರಮ ಹಾಗೂ ಬಿಜೆಪಿ ಮುಖಂಡರ ವಿರುದ್ಧದ ಸುಳ್ಳು ಪ್ರಕರಣ ಕೈಬಿಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ನರಸಿಂಹನಾಯಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡಸಿದ ಬಿಜೆಪಿ ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಮಾಜಿ ಸಚಿವ ನರಸಿಂಹನಾಯಕ ಮಾತನಾಡಿ, “ಕಾಂಗ್ರೆಸ್ ಆಡಳಿತಕ್ಕೆ ಬಂದು ಇನ್ನೂ ಮೂರ್ನಾಲ್ಕು ತಿಂಗಳುಗಳು ಕಳೆದಿಲ್ಲ. ಈಗಲೇ ತಾಲೂಕಿನಲ್ಲಿ ಜಾತಿ ವೈಷಮ್ಯ, ಜಾತಿ-ಜಾತಿಗಳ ನಡುವೆ ಜಗಳ ಹಚ್ಚಲು ಶುರು ಮಾಡಿಕೊಂಡಿದ್ದಾರೆ. ಇದನ್ನು ತಾಲೂಕಿನ ಜನತೆ ಎಂದೂ ಸಹಿಸಲ್ಲ. ರೈತರ ಜಮೀನುಗಳಿಗೆ ಮುಂಗಾರು ಹಂಗಾಮಿನಲ್ಲಿ ವಾರಾಬಂದಿ ನೆಪ ಹೇಳಿಕೊಂಡು ಅನ್ಯಾಯ ಮಾಡುತ್ತಿದ್ದಾರೆ. ರೈತರಿಗೆ ಸರಿಯಾದ ವಿದ್ಯುತ್ ನೀಡದೆ ರೈತ ವಿರೋಧಿ ಕೆಲಸ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
“ಮುಂಗಾರು ಹಂಗಾಮಿನಲ್ಲಿ ವಾರಾಬಂದಿ ಮಾಡಿರುವುದು ಇಡೀ ಇತಿಹಾಸದಲ್ಲಿಯೇ ಇಲ್ಲ. ಆದರೆ ಪ್ರಸ್ತುತ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ಇದನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಈ ಕೂಡಲೇ ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳದೆ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು.
“ಮುಂಗಾರು ಹಂಗಾಮಿಗೆ ವಾರಾಬಂದಿ ಬೇಡ. ರೈತರಿಗೆ ನಿರಂತರವಾಗಿ 7 ತಾಸು ವಿದ್ಯುತ್ ನೀಡಬೇಕು. ಬಿಜೆಪಿ ಕಾರ್ಯಕರ್ತರ ಮೇಲಿನ ಸುಳ್ಳು ಪ್ರಕರಣ ಹಿಂಪಡೆಯಬೇಕು. ಏತನೀರಾವರಿ ಯೋಜನೆಗಳಡಿ ಮಂಜೂರಾಗಿದ್ದ ಕಾಮಗಾರಿಗಳು ಬೇಗ ಆರಂಭವಾಗಬೇಕು” ಎಂದು ಆಗ್ರಹಿಸಿದರು.
“ನಾನೂ ಕೂಡ ಮೂರು ಅವಧಿಗೆ ಶಾಸಕನಾಗಿ, ಸಚಿವನಾಗಿ ಜನಪರ ಹಾಗೂ ರೈತಪರ ಕೆಲಸಗಳನ್ನು ಮಾಡಿದ್ದೇನೆ. ಕಳೆದ ಮೂರು ಅವಧಿಯಲ್ಲಿ ಮುಂಗಾರು ಹಂಗಾಮಿಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಚಾಲು-ಬಂದ್ ಅನುಸರಿಸಿಲ್ಲ. ಆದರೆ ಈ ಬಾರಿ ಆಡಳಿತಕ್ಕೆ ಬಂದ ಸರ್ಕಾರ ರೈತರಿಗೆ ನೀರು, ಕರೆಂಟ್ ನೀಡದೆ ಶಾಕ್ ಕೊಟ್ಟಿದೆ. ಸ್ಥಳೀಯ ಶಾಸಕರು ಐಸಿಸಿ ಸಭೆಯಲ್ಲಿ ರೈತರ ಪರ ಯಾಕೆ ಧ್ವನಿ ಎತ್ತಿಲ್ಲ? ಇದರೊಂದಿಗೆ ಸರ್ಕಾರ ಗ್ಯಾರೆಂಟಿ ಎನ್ನುವ ಹೆಸರಿನಲ್ಲಿ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಣ ಬೇಸಾಯದ ಗ್ರಾಮಗಳ ಪರಿಸ್ಥಿತಿ ಶೋಚನೀಯ:
“ತಾಲೂಕಿನ ರೈತರ ಪಂಪಸೆಟ್ಗೆ ಏಳು ತಾಸು ಕರೆಂಟ್ ಕೊಡಬೇಕಾಗಿತ್ತು. ಅದನ್ನು ಕೂಡಾ ಕೊಡುತ್ತಿಲ್ಲ. ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ. ಇವತ್ತು ತಾಲೂಕಿನ ಒಣ ಬೇಸಾಯದ 30 ಗ್ರಾಮಗಳ ರೈತರ ಪರಿಸ್ಥಿತಿ ಗಂಭಿರವಾಗಿದೆ. ರೈತರಿಗೆ ಪರಿಹಾರ ಕೊಡುವುದು ಇವರಿಂದ ಆಗುತ್ತಿಲ್ಲ. ನಿಮ್ಮಿಂದ ನನ್ನಷ್ಟು ಅನುದಾನ ತರುವುದು ಆಗದೇ ಇದ್ದಲ್ಲಿ, ನನ್ನ ಅವಧಿಯಲ್ಲಿ ಮಂಜೂರಾದ ಏತ ನೀರಾವರಿಗಳ ಕಾಮಗಾರಿಗಳನ್ನು ಬೇಗ ಮುಗಿಸಿ ಜನರಿಗೆ ನೀರು ಒದಗಿಸುವ ಕೆಲಸ ಮಾಡಿ. ಜಾತಿ, ಜಾತಿ ನಡುವೆ ಜಗಳ ಹಚ್ಚುವುದು ಬೇಡ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸರು ತಕ್ಷಣವೇ ಬಿಜೆಪಿ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆ ಹಿಂಪಡೆದು, ಹುಣಸಗಿ ಪಿಎಸ್ಐ ಅವರನ್ನು ಅಮಾನತು ಮಾಡಬೇಕು” ಎಂದು ಒತ್ತಾಯಿಸಿದರು.
ಬಿಜೆಪಿ ಯುವ ಮುಖಂಡ ಹಣುಂತನಾಯಕ (ಬಬ್ಲುಗೌಡ) ಮಾತನಾಡಿ, “ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡುವುದು, ಸುಳ್ಳು ಮೊಕದ್ದಮೆ ಹಾಕುವುದು, ಸಾಮಾಜಿಕ ಜಾಲತಾಣದ ಹೆಸರನಿಂದ ಕೇಸ್ ಹಾಕುವುದು ಮಾಡುವದಾದರೆ ನಾವು ಎಲ್ಲ ಹೋರಾಟಕ್ಕೂ ಸೈ. ಇನ್ನಾದರೂ ತಿದ್ದಿಕೊಳ್ಳಿ. ಇಲ್ಲದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ. ಕಾನೂನು ಎಲ್ಲರಿಗೂ ಒಂದೆ ಇರಲಿ, ನಿಮ್ಮ ಕೆಲಸ ಅಭಿವೃಧ್ದಿಯಲ್ಲಿ ತೋರಿಸಿ, ಜಾತಿ ಜಾತಿ ನಡುವೆ ಜಗಳ ಹಚ್ಚುವಲ್ಲಿ ಬೇಡ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಲಪ್ರಭಾ ಅಚ್ಚುಕಟ್ಟು; 15 ದಿನಗಳ ಕಾಲ ಕುಡಿಯುವ ನೀರು ಪೂರೈಕೆ
ಮುಖಂಡರುಗಳಾದ ರಾಜಾ ಹನುಮಪ್ಪನಾಯಕ (ತಾತಾ), ರಾಜಾ ಮುಕುಂದನಾಯಕ, ವಿರೇಶ ಚಿಂಚೋಳಿ, ಬಸನಗೌಡ ಅಳ್ಳಿಕೋಟಿ, ಗದ್ದೆಪ್ಪ ಪೂಜಾರಿ, ಎಂ.ಎಸ್.ಚoದಾ, ಪರಮಣ್ಣ ಪೂಜಾರಿ, ಸಂಗಣ್ಣ ವೈಲಿ, ಸಿದ್ದನಗೌಡ ಕರಿಬಾವಿ, ವೀರಸಂಗಪ್ಪ ಹಾವೇರಿ, ಡಾ.ಬಸನಗೌಡ ಹಗರಟಗಿ, ರವಿ ಪುರಾಣಿಕಮಠ, ನಂದಪ್ಪ ಪೀರಾಪುರ, ಭೀಮನಗೌಡ ತೀರ್ಥ, ಶೇಖರ ಮಾರನಾಳ, ರಾಯಣ್ಣ ಜೋಗಿನ್ ಸೇರಿದಂತೆ ಅನೇಕರು ಇದ್ದರು.
ಯಾದಗಿರಿ ಉಪ ವಿಭಾಗಾಧಿಕಾರಿ ಡಾ.ಹಂಪಯ್ಯ ಅವರು ಮನವಿ ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಡಿಎಸ್ಪಿ, ಸಿಪಿಐ, ಪಿಎಸ್ಐ, ಡಿಎಆರ್, ಕೆಎಸ್ಆರ್ಪಿ ಸೇರಿದಂತೆ ಮಹಿಳಾ ಪೊಲೀಸರೂ ಕೂಡ ಪ್ರತಿಭಟನೆಯಲ್ಲಿ ಸೂಕ್ತ ಬಂದೋಬಸ್ತ್ ನೀಡುವಲ್ಲಿ ಕಾರ್ಯ ನಿರತರಾಗಿದ್ದರು.
ಸಿಟಿಜನ್ ಜರ್ನಲಿಸ್ಟ್ ಬಾಪೂಗೌಡ