2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಜಾರ್ಖಂಡ್ನ ಕೊಡರಮಾದಲ್ಲಿ ತಮ್ಮ ಭಾಷಣಗಳನ್ನು ಆರಂಭಿಸಿದ್ದಾರೆ.
“ನೀವೆಲ್ಲರೂ ರೇಡಿಯೋದಲ್ಲಿ ಜುಮ್ರಿ ತೆಲೈಯಾ ಬಗ್ಗೆ ಕೇಳಿದ್ದೀರಿ. ಆದರೆ ನನ್ನನ್ನು ನಂಬಿ, ಈ ಸ್ಥಳ ಮತ್ತು ಅದರ ಜನರ ಮೋಡಿ ನೀವು ಕೇಳಿದ್ದಕ್ಕಿಂತ ಹೆಚ್ಚಾಗಿದೆ. ನನ್ನ ನಾಮಪತ್ರ ಸಲ್ಲಿಸಿದ ನಂತರ ಈ ಸಭೆ ನನ್ನ ಮೊದಲ ಸಾರ್ವಜನಿಕ ಪ್ರದರ್ಶನವಾಗಿದೆ. ಅದು ಕಾಶಿಯಾಗಿರಲಿ ಅಥವಾ ಕೊಡರಮಾ ಆಗಿರಲಿ, ಒಂದು ಸಂದೇಶವು ಜೋರಾಗಿ ಮತ್ತು ಸ್ಪಷ್ಟವಾಗಿ ಮೊಳಗುತ್ತದೆ. ಅದೇನೆಂದರೆ ಫಿರ್ ಏಕ್ ಬಾರ್, ಮೋದಿ ಸರ್ಕಾರ್” ಎಂದು ಹೇಳಿದರು.(4:5-7:5)
“ಕೊಡರಮಾದ ಮಣ್ಣಿನಿಂದ ನಾನು ಎಲ್ಲ ನಾಗರಿಕರಿಗೆ ಭರವಸೆ ನೀಡುತ್ತೇನೆ. ಅದು ಭಯೋತ್ಪಾದನೆಯಾಗಿರಲಿ ಅಥವಾ ನಕ್ಸಲಿಸಂ ಆಗಿರಲಿ, ಮೋದಿ ತಮ್ಮ ಮೂರನೇ ಅವಧಿಯಲ್ಲಿ ಅವರಿಗೆ ನಿರ್ಣಾಯಕ ಹೊಡೆತ ನೀಡುತ್ತಾರೆ. ಜಾರ್ಖಂಡ್ ಮತ್ತೆ ನಕ್ಸಲಿಸಂನ ಭದ್ರಕೋಟೆಯಾಗದಂತೆ ಮೋದಿ ನೋಡಿಕೊಳ್ಳಲಿದ್ದಾರೆ. ಇಡೀ ಬುಡಕಟ್ಟು ಪ್ರದೇಶವು ರಕ್ತಪಾತ ಮತ್ತು ಹಿಂಸಾಚಾರದಿಂದ ಮುಕ್ತವಾಗುವ ದಿನ ದೂರವಿಲ್ಲ. ಇದೇ ಮೋದಿ ಗ್ಯಾರಂಟಿ” ಎಂದು ಸುಳ್ಳು ಭರವಸೆ ನೀಡುವ ಮೂಲಕ ಮತದಾರರನ್ನು ಹುರಿದುಂಬಿಸಿದರು.(10:7-13:55)
’ಪೂರ್ವ ಲಡಾಖ್ನ ತ್ಸೊ ಪ್ಯಾಗಾಂಗ್ನಲ್ಲಿ ಭಾರತ–ಚೀನಾ ಸೈನಿಕರ ಮಧ್ಯೆ ನಡೆದ ಸಂಘರ್ಷಕ್ಕೆ ನಾಲ್ಕು ವರ್ಷಗಳು ಪೂರ್ಣಗೊಂಡಿದ್ದು, ಚೀನಾ ನೀತಿ ವಿಫಲಗೊಂಡಿದ್ದರ ಹೊಣೆಗಾರಿಕೆಯನ್ನು ಯಾವಾಗ ತೆಗೆದುಕೊಳ್ಳುತ್ತೀರಿ‘ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ʼಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶದ ಸಾವಿರಾರು ಚದರ ಕಿಲೋ ಮೀಟರ್ ಪ್ರದೇಶವನ್ನು ಚೀನಾಕ್ಕೆ ಒಪ್ಪಿಸಲಾಗಿದೆಯೇ ಅಥವಾ 2020ರ ಮೇ 5ಕ್ಕಿಂತ ಮುಂಚೆ ಇದ್ದ ಸ್ಥಿತಿಗೆ ಒಯ್ಯಲು ಈಗಲೂ ಪ್ರಯತ್ನಿಸಲಾಗುತ್ತಿದೆಯೇʼ ಎಂದೂ ಕೂಡ ಪ್ರಶ್ನಿಸಿದ್ದರು.
‘20 ಸೈನಿಕರು ಹತರಾದ ನಂತರ 2020ರ ಜೂನ್ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು “ಭಾರತದ ಗಡಿಯೊಳಗೆ ಯಾರೂ ಪ್ರವೇಶಿಸಿಲ್ಲ, ನಮ್ಮ ಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ’ವೆಂದು ಹೇಳಿದ್ದರು. ಈ ಮೂಲಕ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಅವಮಾನ ಮಾಡಿದ್ದರು. ಈ ಘಟನೆ ನಡೆದ ಬಳಿಕ ನಾಲ್ಕು ವರ್ಷಗಳಲ್ಲಿ 21 ಸುತ್ತಿನ ಮಾತುಕತೆ ನಡೆದರೂ ಆ ಪ್ರದೇಶದಲ್ಲಿ ಪರಿಸ್ಥಿತಿ ನಮ್ಮ ಪರವಾಗಿಲ್ಲ. ಚೀನಾದ ಅತಿಕ್ರಮಣ ಮುಂದುವರಿದಿದೆʼ ಎಂದು ಜಯರಾಮ್ ರಮೇಶ್ ಆರೋಪಿಸಿದ್ದರು.
ಹೀಗಿರುವಾಗ ಮೋದಿ ಜಾರ್ಖಂಡ್ನಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲು ಸಾಧ್ಯವೇ?. ಮಣಿಪುರದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಹಿಂಸಾಚಾರ ತಡೆಗಟ್ಟದ ಮೋದಿ, ಕೇಂದ್ರದ ವಿರುದ್ಧ ಹೋರಾಟ ನಡೆಸಿದ ರೈತರನ್ನೇ ಹಿಂಸಾಚಾರದ ಕೂಪಕ್ಕೆ ತಳ್ಳಿದ ಮೋದಿ, ಜಾರ್ಖಂಡ್ನ ಹಿಂಸಾಚಾರವನ್ನು ನಿಜವಾಗಿಯೂ ತಡೆಯುತ್ತಾರೆಯೇ? ಅಥವಾ ಸುಳ್ಳು ಭರವಸೆಗಳನ್ನು ನೀಡುತ್ತಾ ಚುನಾವಣಾ ಗಿಮಿಕ್ ನಡೆಸುತ್ತಿದ್ದಾರೆಯೇ?
“ದೆಹಲಿಯಲ್ಲಿ ಕಾಂಗ್ರೆಸ್-ಜೆಎಂಎಂ-ಎಡಪಕ್ಷಗಳ ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿಯಲ್ಲಿ ಖನಿಜ ಸಂಪನ್ಮೂಲಗಳಿಂದ ಬರುವ ಆದಾಯವನ್ನು ಆಯಾ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿಲ್ಲ. ಅವುಗಳನ್ನು ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಹರಿಸಲಾಯಿತು. ಈ ವಿಧಾನವು ಸ್ವೀಕಾರಾರ್ಹವಲ್ಲ. ಮೋದಿ ಹೊಸ ನೀತಿಯನ್ನು ಪರಿಚಯಿಸಿದ್ದು, ಜಿಲ್ಲಾ ಖನಿಜ ನಿಧಿಯನ್ನು ಸ್ಥಾಪಿಸಿದ್ದೇವೆ. ಈಗ, ಒಂದು ಜಿಲ್ಲೆಯ ಖನಿಜ ಸಂಪನ್ಮೂಲಗಳಿಂದ ಉತ್ಪತ್ತಿಯಾಗುವ ಆದಾಯದ ಒಂದು ಭಾಗವನ್ನು ಅದೇ ಜಿಲ್ಲೆಯ ಅಭಿವೃದ್ಧಿಗೆ ಮರುಹೂಡಿಕೆ ಮಾಡಲು ನಿರ್ಧರಿಸಿದ್ದೇನೆ” ಎಂದು ಸತ್ಯದ ತಲೆಯಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ.(27:38)
ರಾಜ್ಯಗಳಿಂದ ಕೇಂದ್ರ ಸರ್ಕಾರವು ಸಂಗ್ರಹಿಸುವ ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಹಣಕಾಸು ಆಯೋಗ ನಿಗದಿ ಮಾಡುತ್ತದೆ. ಹೀಗೆ 15ನೇ ಹಣಕಾಸು ಆಯೋಗವು ನಿಗದಿ ಮಾಡಿದ ಪಾಲಿನಲ್ಲಿ ದೇಶದ ಬೇರೆಲ್ಲಾ ರಾಜ್ಯಗಳಿಗೆ ಭಾರೀ ಪ್ರಮಾಣದ ಲಾಭವಾಗಿದೆ. ಆದರೆ ಕರ್ನಾಟಕಕ್ಕೆ ಭಾರೀ ಪ್ರಮಾಣದ ಅನ್ಯಾಯ ಮಾಡಿದ್ದಾರೆ.
2023–24ರಲ್ಲಿ ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯಕ್ಕೆ ₹48,517 ಕೋಟಿ ಬರಬೇಕಿತ್ತು. ಆದರೆ ಈ ಸಾಲಿಗೆ ನಿಗದಿ ಮಾಡಿರುವುದು ₹37,252 ಕೋಟಿ. 15ನೇ ಹಣಕಾಸು ಆಯೋಗದ ನೀತಿಯಿಂದಾಗಿ 2023–24ರ ಆರ್ಥಿಕ ವರ್ಷವೊಂದರಲ್ಲೇ ಕರ್ನಾಟಕಕ್ಕೆ ₹11,265 ಕೋಟಿಯಷ್ಟು ಖೋತಾ ಆಗಿದೆ. ಹೀಗೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮಾಡಿದ ಅನ್ಯಾಯವಿದು.
ಈ ಅವಧಿಯಲ್ಲಿ ಅತಿಹೆಚ್ಚು ಏರಿಕೆಯಾಗಿದ್ದು ಗುಜರಾತಿಗೆ. 2018–19ರಲ್ಲಿ ₹23,489 ಕೋಟಿಯಷ್ಟು ತೆರಿಗೆ ಪಾಲು ಪಡೆದಿದ್ದ ಗುಜರಾತ್, 2023–24ರಲ್ಲಿ ₹35,525 ಕೋಟಿ ಪಡೆಯಲಿದೆ. ಗುಜರಾತಿನ ತೆರಿಗೆ ಪಾಲು ಈ ಅವಧಿಯಲ್ಲಿ ₹12,036 ಕೋಟಿಯಷ್ಟು, ಅಂದರೆ ಶೇ. 51ರಷ್ಟು ಏರಿಕೆಯಾಗಿದೆ. ದೇಶದ ಬೇರೆ ಯಾವುದೇ ರಾಜ್ಯದ ತೆರಿಗೆ ಪಾಲು ಇಷ್ಟೊಂದು ಪ್ರಮಾಣದ ಏರಿಕೆಯಾಗಿಲ್ಲ. ಇದನ್ನೆಲ್ಲ ಮರೆಮಾಚಿದ ಮೋದಿಗೆ, ನವದೆಹಲಿಯಲ್ಲಿ ಕಾಂಗ್ರೆಸ್-ಜೆಎಂಎಂ-ಎಡಪಕ್ಷಗಳ ಸಮ್ಮಿಶ್ರ ಸರ್ಕಾರದ ಅಧಿಕಾರಾವಧಿಯಲ್ಲಿ ಖನಿಜ ಸಂಪನ್ಮೂಲಗಳಿಂದ ಬರುವ ಆದಾಯವನ್ನು ಆಯಾ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿಲ್ಲವೆಂದು ಆರೋಪಿಸುವ ನೈತಿಕತೆಯಾದರೂ ಇದೆಯಾ?
“ಭಾರತವು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದಿಂದ ಮುಕ್ತವಾಗಿರಬೇಕು ಎಂದು ನಾನು ಕೆಂಪು ಕೋಟೆಯಿಂದ ಹೇಳಿದ್ದೆ. ಜೆಎಂಎಂ-ಕಾಂಗ್ರೆಸ್-ಎಡಪಕ್ಷಗಳ ಇಂಡಿ ಮೈತ್ರಿಕೂಟವು ಈ ಎಲ್ಲ ದುಷ್ಕೃತ್ಯಗಳಿಗೆ ಅತಿದೊಡ್ಡ ಮಾದರಿಯಾಗಿದೆ. ಕಳ್ಳರನ್ನು ಶಾಂತಿಯುತವಾಗಿ ಮಲಗಲು ನಾನು ಬಿಡುವುದಿಲ್ಲ. ನಾನು ಅವರ ನಿದ್ರೆಯನ್ನು ತೆಗೆದುಹಾಕುತ್ತೇನೆ ಮತ್ತು ಅವರ ಖಜಾನೆಯನ್ನು ಖಾಲಿ ಮಾಡುತ್ತೇನೆ. ಮೋದಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಅವರು ಮೋದಿಯನ್ನು ನಿಂದಿಸುತ್ತಾರೆ” ಎಂದು ತಮ್ಮ ಮೇಲಿನ ಆರೋಪವನ್ನು ಮುಚ್ಚಿಹಾಕಲು ವಿಪಕ್ಷಗಳನ್ನು ದೂಷಿಸುತ್ತಿದ್ದಾರೆ.(29:20-32:25)
2014ರ ಲೋಕಸಭಾ ಚುನಾವಣೆಯಲ್ಲಿಯೇ ʼನ ಖಾವೂಂಗಾ ನ ಖಾನೇ ದೂಂಗಾʼ ಎಂದು ಹೇಳುತ್ತಾ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿಜಿ ಹಿಂದೆಂದೂ ಕಂಡರಿಯದಂತಹ ಎಲೆಕ್ಟೋರಲ್ ಬಾಂಡ್ ಮೂಲಕ ಬೃಹತ್ ಭ್ರಷ್ಟಾಚಾರವನ್ನು ಕೇವಲ ಹತ್ತು ವರ್ಷಗಳಲ್ಲಿ ಮಾಡಿರುವುದು ಜಗಜ್ಜಾಹೀರಾಗಿದೆ.
ದೇಶದ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ ಅವರು ಪ್ರತಿಕ್ರಿಯಿಸುತ್ತಾ “ಎಲೆಕ್ಟೋರಲ್ ಬಾಂಡ್ ಪ್ರಪಂಚದ ದೊಡ್ಡ ಹಗರಣ ಎಂದು ಹೇಳಲು ಕಾರಣವಿದೆ. ಇಲ್ಲಿ ಲಕ್ಷ ಕೋಟಿ ಬಾಂಡ್ ಹಣ ಪಡೆದಿಲ್ಲ. ಆದರೆ ಸಾವಿರ ಕೋಟಿ ಬಾಂಡ್ ಕೊಟ್ಟು ಲಕ್ಷ ಲಕ್ಷ ಕೋಟಿ ರೂ.ಗಳ ಕಾಮಗಾರಿಗಳನ್ನು ಗುತ್ತಿಗೆಯನ್ನು ಪಡೆದುಕೊಂಡಿದ್ದಾರೆ. ಯಾರು ಎಷ್ಟು ಪಡೆದಿದ್ದಾರೆಂದು ಸಮಗ್ರವಾಗಿ ತಿಳಿಯಬೇಕಾದರೆ ಸ್ವತಂತ್ರ ತನಿಖೆಯಾಗಬೇಕು” ಎಂದು ಆಗ್ರಹಿಸಿದ್ದರು.
ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ತಳ ಸಮುದಾಯದ ರಾಷ್ಟ್ರಪತಿಗಳನ್ನು ಮೋದಿ ಮನಸಾರೆ ಒಪ್ಪಿಕೊಂಡಿದ್ದಾರೆಯೇ?
ಈ ಹಿಂದಿನ ಚುನಾವಣೆಗಳಲ್ಲಿಯೇ ಮೋದಿ ಅವರು ರಾಮರಾಜ್ಯ ಮಾಡ್ತೀನಿ ಅಂದಿದ್ದರು. ಇದೀಗ ರಾವಣ ರಾಜ್ಯ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತ ವೈಖರಿಗೆ ಜನರು ಭ್ರಮನಿರಸನರಾಗಿದ್ದಾರೆ. ಕೇವಲ ಹತ್ತು ವರ್ಷಗಳಲ್ಲಿಯೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿರುವುದು ಮೋದಿ ನೇತೃತ್ವದ ಸರ್ಕಾರದಲ್ಲಿಯೇ ಎಂದು ಸರ್ವೆಗಳು ತಿಳಿಸಿವೆ. ಆದರೂ ಕೂಡಾ ಮೋದಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ಭ್ರಷ್ಟ ಸರ್ಕಾರ, ಅಧಿಕಾರಕ್ಕೆ ಬಂದರೆ ಸಾಕು ಲೂಟಿ ಮಾಡುವುದೇ ಅವರ ಕೆಲಸವೆಂದು ಪುಂಖಾನುಪುಂಖವಾಗಿ ಪುಂಗುತ್ತಿದ್ದಾರೆ.