ಲೋಕಸಭಾ ಚುನಾವಣೆಯ ಮೂರು ಹಂತದ ಮತದಾನ ಈಗಾಗಲೇ ದೇಶದಲ್ಲಿ ಮುಗಿದಿದೆ. ಇನ್ನು, ನಾಲ್ಕು ಹಂತಗಳ ಮತದಾನವಷ್ಟೇ ಬಾಕಿ ಇದೆ. ಈಗಾಗಲೇ ಮುಗಿದಿರುವ ಮತದಾನಗಳು ಬಿಜೆಪಿಗೆ ಸೋಲಿನ ಆತಂಕವನ್ನು ಹೆಚ್ಚಿಸಿವೆ.
ಈ ಆತಂಕ ಪ್ರಧಾನಿ ನರೇಂದ್ರ ಮೋದಿ ಅವರ ದ್ವೇಷ ಭಾಷಣದಲ್ಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಮೋದಿ ಅವರು ನಿರಂತರವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ವಿರುದ್ಧ ದ್ವೇಷಪೂರಿತ ಸುಳ್ಳು ಭಾಷಣಗಳನ್ನು ಮಾಡುತ್ತಲೇ ಇದ್ದಾರೆ. ಅಲ್ಲದೇ, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟೀಮ್ ಇಂಡಿಯಾದಲ್ಲಿ ಎಲ್ಲ ಮುಸ್ಲಿಮರಿಗೆ ಅವಕಾಶ ಸಿಗಲಿದೆ ಎಂಬ ಕೀಳುಮಟ್ಟದ ಭಾಷಣ ಕೂಡ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಎಲ್ಲ ಬೆಳವಣಿಗೆಯ ನಡುವೆಯೇ, ಜಾರ್ಖಂಡ್ನ ಬಿಜೆಪಿ ಮುಖಂಡರು ಮುಸ್ಲಿಂ ಸಮುದಾಯದೊಂದಿಗೆ ಸಂವಾದ ನಡೆಸಲು ಸಭೆಯೊಂದನ್ನು ಆಯೋಜಿಸಿದ್ದರು. ಆದರೆ, ಈ ಸಭೆಗೆ ಹೆಚ್ಚಿನ ಮುಸ್ಲಿಮರು ಬಾರದಿದ್ದಕ್ಕೆ, ಕೆಲವು ಹಿಂದೂಗಳಿಗೆ ಮುಸ್ಲಿಮರ ಟೋಪಿ ಧರಿಸುವಂತೆ ಮಾಡಿ, ಪೇಚಿಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಇದು ಈಗ ದೊಡ್ಡಮಟ್ಟದ ವಿವಾದಕ್ಕೂ ಕಾರಣವಾಗಿದೆ.
ಈ ಎಲ್ಲ ವಿಚಾರವನ್ನು ಬಯಲಿಗೆ ಎಳೆದದ್ದು N4 NEWS BHARAT ಎನ್ನುವ ಜಾರ್ಖಂಡ್ನ ರಾಂಚಿಯ ಸ್ಥಳೀಯ ಯೂಟ್ಯೂಬ್ ಚಾನೆಲ್. ರಾಂಚಿಯ N4 ನ್ಯೂಸ್ನ ವೈರಲ್ ಕ್ಲಿಪ್ ಅನ್ನು ಆಲ್ಟ್ನ್ಯೂಸ್ನ ಪತ್ರಕರ್ತ ಮೊಹಮ್ಮದ್ ಝುಬೇರ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆ ಬಳಿಕ ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ವೇದಿಕೆಯೊದಗಿಸಿದೆ.
ತಮ್ಮ ಟ್ವೀಟ್ನಲ್ಲಿ ಮೊಹಮ್ಮದ್ ಝುಬೇರ್ ಅವರು ವಿಡಿಯೋವನ್ನು ಹಂಚಿಕೊಳ್ಳುತ್ತಾ, “ತಮ್ಮ ಸಭೆಗೆ ಬಿಜೆಪಿ ನಾಯಕರು ಮುಸ್ಲಿಮರಂತೆ ವೇಷ ಧರಿಸಿ ಹಿಂದೂಗಳನ್ನು ಒಟ್ಟುಗೂಡಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಂಚಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಜಯ್ ಸೇಠ್ ಅವರು ಸ್ಪರ್ಧಿಸುತ್ತಿದ್ದಾರೆ. ಅವರಿಗೆ ಮುಸ್ಲಿಂ ಸಮುದಾಯದ ಬೆಂಬಲವೂ ಬೇಕು ಎಂಬ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಸಭೆಯನ್ನು ಆಯೋಜಿಲಾಗಿತ್ತು. ಈ ಸಭೆಗೆ ಮುಖ್ಯ ಅತಿಥಿಯಾಗಿ ಆರು ಬಾರಿ ಶಾಸಕರಾಗಿದ್ದ ಸಿ ಪಿ ಸಿಂಗ್ ಕೂಡ ಭಾಗವಹಿಸಿದ್ದರು.
BJP in Ranchi couldn’t find Muslims to support them, So they made Sinha, Ajeet, Amit, Anshul to wear Skull cap and attend their function. 🤣🤣🤣
Expose by @n4newsbharat pic.twitter.com/GEtf64k0ac— Mohammed Zubair (@zoo_bear) May 8, 2024
ಈ ಸಭೆಯಲ್ಲಿ ಸೇರಿದವರ ಬಗ್ಗೆ N4 ನ್ಯೂಸ್ನ ಪ್ರತಿನಿಧಿಗಳು ಬಿಜೆಪಿ ಮುಖಂಡರಲ್ಲಿ ಕೇಳಿದಾಗ, “ಇಲ್ಲಿ ಭಾಗವಹಿಸಿದ್ದ ಎಲ್ಲರೂ ಮುಸ್ಲಿಮರು. ಕೆಲವರು ಟೋಪಿ ಧರಿಸಿದ್ದರು, ಇನ್ನು ಕೆಲವರು ಧರಿಸಿಲ್ಲ. ಇವರೆಲ್ಲರೂ ನರೇಂದ್ರ ಮೋದಿಯವರನ್ನು ಬೆಂಬಲಿಸಲು ಬಂದು ಹಾಜರಾಗಿದ್ದಾರೆ” ಎಂದು ತಿಳಿಸಿದ್ದರು.
ಆ ಬಳಿಕ ಸಭೆಯಲ್ಲಿದ್ದವರೊಂದಿಗೆ ಮಾತನಾಡಿಸಿದಾಗ, ಹೆಸರು ಹಿಂದೂಗಳದ್ದೆಂದು ಗೊತ್ತಾಗಿದೆ. ಅಲ್ಲದೇ, ಅವರ ಕಿಸೆಯಲ್ಲಿದ್ದ ಆಧಾರ್ ಕಾರ್ಡ್ ಅನ್ನು ಕೂಡ ಪರಿಶೀಲಿಸಿದ್ದಾರೆ. ಈ ಬಗ್ಗೆ ಟೋಪಿ ಧರಿಸಿದ್ದ ಹಿಂದೂಗಳಲ್ಲಿ N4 ನ್ಯೂಸ್ನ ಪ್ರತಿನಿಧಿ ಕೇಳಿದಾಗ, “ನಮಗೇನೂ ಗೊತ್ತಿಲ್ಲ. ನಮ್ಮ ಕಿಸೆಯಲ್ಲಿಟ್ಟಿದ್ದರು. ಅದನ್ನು ತಲೆಯಲ್ಲಿ ಇಟ್ಟುಕೊಳ್ಳಲು ಬಿಜೆಪಿಯವರು ತಿಳಿಸಿದ್ದರು” ಎಂದು ಹೇಳಿಕೆ ನೀಡಿದ್ದಾರೆ.
Full video of BJP fooling its voters by asking Hindus to pretend like Muslims by making them wear Skull caps. Not sure if they were made to go though circumcision too.
Hindu Khatre me hai anyone? @UnSubtleDesi @smitaprakash @ajeetbharti @MrSinha_ @amitmalviya @ShefVaidya pic.twitter.com/W24q7BnDCs— Mohammed Zubair (@zoo_bear) May 8, 2024
ಹಿಂದೂಗಳಿಗೆ ಟೋಪಿ ನೀಡುವ ಮೂಲಕ ಬಿಜೆಪಿಯೊಂದಿಗೆ ಮುಸ್ಲಿಮರು ಇದ್ದಾರೆ ಎಂಬುದನ್ನು ತೋರಿಸಲು ಬಿಜೆಪಿ ಮುಖಂಡರು ಯತ್ನಿಸಿದ್ದಾರೆ. ಆ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಜಾರ್ಖಂಡ್ನಲ್ಲಿ ಈ ಬೆಳವಣಿಗೆ ಈಗ ದೊಡ್ಡ ಮಟ್ಟದಲ್ಲಿ ರಾಜಕೀಯ ಚರ್ಚೆಗೂ ವೇದಿಕೆಯೊದಗಿಸಿದೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಈ ಬಗ್ಗೆ ಹಲವು ಮಂದಿ ಬಿಜೆಪಿ ನಾಯಕರ “ಬಿಜೆಪಿಯು ಮತ ಗಳಿಸಲು ಹಿಂದೂಗಳನ್ನೇ ಮುಸ್ಲಿಮರನ್ನಾಗಿ ಬಿಂಬಿಸಲು ಹೊರಟಿದೆ. ಹಿಂದೂಗಳು ಕಷ್ಟದಲ್ಲಿದ್ದಾರೆ ಯಾರಿಂದ ಎಂಬುದು ಈಗ ಅರ್ಥವಾಯಿತಲ್ಲವೇ?” ಎಂದು ಪೋಸ್ಟ್ ಹಾಕುತ್ತಿದ್ದಾರೆ.