- ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಕೂಡ ಆರೋಪಿ
- ಝಾನ್ಸಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಅತೀಕ್ ಪುತ್ರ ಅಸದ್ನ ಹತ್ಯೆ
ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಉತ್ತರ ಪ್ರದೇಶದ ಮಾಜಿ ಸಂಸದ ಹಾಗೂ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಪುತ್ರ ಹಾಗೂ ಆತನ ಸಹಚರನೊಬ್ಬನ್ನು ಉತ್ತರ ಪ್ರದೇಶ ಪೊಲೀಸರು ಝಾನ್ಸಿಯಲ್ಲಿ ಗುರುವಾರ ನಡೆದ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ.
ಅಸಾದ್ ಅಹ್ಮದ್ ಮತ್ತು ಗುಲಾಮ್ ಪೊಲೀಸರಿಂದ ಎನ್ಕೌಂಟರ್ಗೆ ಒಳಗಾದವರು. ಇವರಿಬ್ಬರು ಮತ್ತು ಅತೀಕ್ ಅಹ್ಮದ್ ಕೂಡ ವಕೀಲ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಫೆಬ್ರವರಿ 24ರಂದು ಪ್ರಯಾಗ್ರಾಜ್ನ ತಮ್ಮ ಮನೆಯ ಹೊರಭಾಗದಲ್ಲಿ ವಕೀಲ ಉಮೇಶ್ ಪಾಲ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇವರಿಬ್ಬರು ಪ್ರಮುಖ ಆರೋಪಿಗಳಾಗಿದ್ದರು. ಇವರಿಬ್ಬರ ತಲೆಗೂ ಉತ್ತರ ಪ್ರದೇಶ ಸರ್ಕಾರ ತಲಾ 5 ಲಕ್ಷ ರೂ ಬಹುಮಾನ ಘೋಷಿಸಿತ್ತು.
ಇದೇ ಪ್ರಕರಣದಲ್ಲಿ ಅತೀಕ್ ಅಹ್ಮದ್ನನ್ನು ಪ್ರಯಾಗ್ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಂದರ್ಭದಲ್ಲಿಯೇ ಆತನ ಪುತ್ರನನ್ನು ಎನ್ಕೌಂಟರ್ ಮಾಡಲಾಗಿದೆ.
ಬಿಎಸ್ಪಿ ಶಾಸಕರಾಗಿದ್ದ ರಾಜು ಪಾಲ್ ಕೊಲೆಯಲ್ಲಿ ಮುಖ್ಯ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಮತ್ತವರ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಪ್ರಯಾಗ್ ರಾಜ್ನ ದೂಮನ್ಗಂಜ್ನಲ್ಲಿ ಫೆಬ್ರವರಿ 24ರಂದು ಕೊಲೆ ಮಾಡಲಾಗಿತ್ತು.
ಉಮೇಶ್ ಅವರ ಪತ್ನಿ ಜಯ ಪಾಲ್ ಅವರು ನೀಡಿದ ದೂರಿನ ಮೇಲೆ ಅತೀಕ್, ಅಶ್ರಫ್, ಶೈಸ್ತಾ ಪರ್ವೀನ್ ಸೇರಿ 9 ಮಂದಿಯ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಹತ್ಯೆಯ ಜೊತೆ 2006ರಲ್ಲಿ ಅತೀಕ್ ಮತ್ತು ಅವರ ಸಹಚರರು ಉಮೇಶ್ ಪಾಲ್ ಅವರನ್ನು ಅಪಹರಿಸಿ, ಸಾಕ್ಷ್ಯ ನೀಡದಂತೆ ಒತ್ತಾಯಿಸಿದ್ದರು ಎಂದು ಆರೋಪ ಮಾಡಲಾಗಿದೆ.
ಅತೀಕ್ ಅಹ್ಮದ್ಗೆ ಜೀವಾವಧಿ ಶಿಕ್ಷೆ
2005ರಲ್ಲಿ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಅತೀಕ್ ಅಹ್ಮದ್, ಹನೀಫ್, ದಿನೇಶ್ ಪಾಸಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಕೋರ್ಟ್ ಅಪರಾಧಿಗಳಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿದೆ. ಅತೀಕ್ ಸುಪಾರಿ ನೀಡಿ ಬಿಎಸ್ಪಿ ಶಾಸಕ ರಾಜು ಪಾಲ್ರನ್ನು ಹತ್ಯೆ ಮಾಡಿಸಿದ್ದ.
ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಅವರನ್ನು ಇಂದು(ಏಪ್ರಿಲ್ 13) ಪ್ರಯಾಗ್ರಾಜ್ನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಭದ್ರತಾ ನಿಯೋಜನೆಯ ನಡುವೆ ಹಾಜರುಪಡಿಸಲಾಗಿತ್ತು.