ಉತ್ತರ ಪ್ರದೇಶದ ವಾರಾಣಸಿಯಲ್ಲಿನ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಶಿವಲಿಂಗ ರಚನೆಯ ಕಾರ್ಬನ್ ಡೇಟಿಂಗ್ ನಡೆಸಲು ಅಲಹಾಬಾದ್ ಹೈಕೋರ್ಟ್, ಶುಕ್ರವಾರ ಅನುಮತಿ ನೀಡಿದೆ.
ʻಜ್ಞಾನವಾಪಿ ಮಸೀದಿಯ ವುಝೂ (ನಮಾಝ್ಗೂ ಮುನ್ನ ಅಂಗ ಶುದ್ಧಿ) ನಡೆಸುವ ಸ್ಥಳದಲ್ಲಿ ಪತ್ತೆಯಾಗಿದೆ ಎನ್ನಲಾದ ರಚನೆಯು ನಿಜವಾಗಿಯೂ ಶಿವಲಿಂಗವೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಬೇಕು. ಒಂದು ವೇಳೆ ಅದು ಶಿವಲಿಂಗವಾಗಿದ್ದರೆ, ಅದು ಎಷ್ಟು ಕಾಲ ಹಳೆಯದು ಎಂಬುದನ್ನು ಸುರಕ್ಷಿತ ಮೌಲ್ಯಮಾಪನ ಮಾಡಲು ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಬೇಕುʼ ಎಂದು ಕೋರಿ ಹಿಂದೂ ಮಹಿಳಾ ಭಕ್ತರ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು.
ಶಿವಲಿಂಗದ ಆಕೃತಿಯ ಕಾರ್ಬನ್ ಡೇಟಿಂಗ್ ಪ್ರಕ್ರಿಯೆ ನಡೆಸುವಂತೆ ಭಾರತೀಯ ಪುರತತ್ವ ಸರ್ವೇಕ್ಷಣ ವಿಭಾಗಕ್ಕೆ (ಎಎಸ್ಐ) ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಿಶ್ರಾ ಆದೇಶ ನೀಡಿದ್ದಾರೆ. ಈ ವೇಳೆ ಆಕೃತಿಗೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಲು ಸೂಚಿಸಿದೆ.
ಈ ಹಿಂದೆ ಕಾರ್ಬನ್ ಡೇಟಿಂಗ್ ಸೇರಿದಂತೆ ವೈಜ್ಞಾನಿಕ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ 2022ರ ಅಕ್ಟೋಬರ್ 14ರಂದು ತಿರಸ್ಕರಿಸಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ಮೇಲೆ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಿಶ್ರಾ ಆದೇಶ ನೀಡಿದ್ದಾರೆ.
2022ರ ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದೊಳಗೆ ವಿಡಿಯೊ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಝ್ಗೂ ಮುನ್ನ ಬಳಸುವ ‘ವುಝೂಖಾನ’ ಕೊಳದ ಸಮೀಪ ಶಿವಲಿಂಗದಂಥ ಆಕೃತಿ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಬಳಿಕ ಅದೇ ದಿನ ಆವರಣವನ್ನು ಯಾರೂ ಪ್ರವೇಶಿಸದಂತೆ ಮುಚ್ಚಲಾಗಿತ್ತು.
ಈ ಸುದ್ದಿ ಓದಿದ್ದೀರಾ?: ತೃತೀಯ ರಂಗಕ್ಕೆ ಬೆಂಬಲವಿಲ್ಲ; ಪ್ರಧಾನಿ ಮೋದಿ ಭೇಟಿ ಬಳಿಕ ನವೀನ್ ಪಟ್ನಾಯಕ್ ಸ್ಪಷ್ಟನೆ
ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್ಗೆ ಒಳಪಡಿಸಬೇಕು ಎಂದು ಜ್ಞಾನವಾಪಿ- ಶೃಂಗಾರ ಗೌರಿ ಮೊಕದ್ದಮೆಯ ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು. ವಿಡಿಯೊ ಸಮೀಕ್ಷೆಯಲ್ಲಿ ಕಂಡುಬಂದಿರುವ ಆಕೃತಿಯು ಕಾರಂಜಿಯ ಮೂಲ ಎಂದು ಮಸೀದಿ ಆಡಳಿತವು ಲಿಖಿತ ಹೇಳಿಕೆ ನೀಡಿತ್ತು.
ಮೇ 20, 2022 ರಂದು, ಸುಪ್ರೀಂ ಕೋರ್ಟ್ ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಸಂಬಂಧಿಸಿದ ಪ್ರಕರಣವನ್ನು ಸಿವಿಲ್ ನ್ಯಾಯಾಧೀಶರಿಂದ ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲು ಆದೇಶಿಸಿತು. ಮಧ್ಯಂತರ ಆದೇಶದಲ್ಲಿ, ‘ ಶಿವಲಿಂಗದಂಥ ಆಕೃತಿ ‘ ಪತ್ತೆಯಾದ ಜ್ಞಾನವಾಪಿ ಮಸೀದಿಯ ಪ್ರದೇಶವನ್ನು ರಕ್ಷಿಸುವ ಅಗತ್ಯವಿದೆ, ಮತ್ತು ಮುಸ್ಲಿಮರಿಗೆ ನಮಾಜ್ಗೆ ಪ್ರವೇಶವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.